ನಿಧಾನವೆ ಪ್ರಧಾನ, ತಾಳಿದವನು ಬಾಳಿಯಾನು ಇವೆಲ್ಲವೂ ಪ್ರಚಾರಕ್ಕಷ್ಟೇ ಬಳಸುವವರು ಮಾನವರು. ಆಚರಣೆಯಲ್ಲಿ ತೊಡಗಿದವರನ್ನು ಕಾಲೆಳೆದು ಬೀಳಿಸುವವರೂ ಮಧ್ಯವರ್ತಿಗಳು, ಆಚರಿಸದೆ ಏನೂ ತಿಳಿಯದೆ ನಡೆಯುತ್ತಿದ್ದವರನ್ನೂ ತಡೆದು ನಿಲ್ಲಿಸಿ ಬುದ್ದಿವಾದ ಹೇಳುವವರೂ ಮದ್ಯವರ್ತಿಗಳು, ಎಲ್ಲಾ ತಿಳಿದು ಏನೂ ಹೇಳದಿದ್ದರೆ ತಪ್ಪು ಎನ್ನುವವರೂ ಮಧ್ಯವರ್ತಿಗಳು, ತಿಳಿದವರು ಹೇಳಿದರೂ ತಪ್ಪು, ತಿಳಿಯದವರು ಹೇಳಿದರೂ ತಪ್ಪು ಹಾಗಾದರೆ ಸರಿಯಿರುವವರು ಯಾರು? ಮಧ್ಯವರ್ತಿಗಳೆ? ಎಲ್ಲರಿಗೂ ತಿಳಿದಿದೆ ಅರ್ಧಸತ್ಯದಿಂದ ಅತಂತ್ರ ಜೀವನ ಎಂದು.
ಆದರೂ ಮಾಧ್ಯಮಗಳು,ಮಧ್ಯವರ್ತಿಗಳು ಇಲ್ಲದೆ ಏನಾದರೂ ಮಾಡುತ್ತೇವೆನ್ನುವವರು ವಿರಳ. ಹೀಗಾಗಿ ಸ್ವತಂತ್ರವಾಗಿದ್ದ ಸತ್ಯ ಇಂದು ಮಧ್ಯಕ್ಕೆ ಬಂದು ನಿಂತಿದೆ. ಹಾಗೆಯೇ ಮಿಥ್ಯವೂ ರಾಜಾರೋಷವಾಗಿ ಬೆಳೆದು ಆಕಾಶದೆತ್ತರ ಹಾರಿಕೊಂಡು ನೆಲಕ್ಕೆ ಬಿದ್ದ ಮೇಲೆ ಯಾರು ಎತ್ತರ ಏರಿಸಿದ್ದರೂ ಅವರೆ ಅದನ್ನು ಹೀನಾಯವಾಗಿ ಕಾಣುತ್ತಿದ್ದಾರೆಂದರೆ ಇಲ್ಲಿ ಯಾರೂ ಶಾಶ್ವತವಲ್ಲ. ಶುದ್ದವಾಗಿಲ್ಲ. ನಿಧಾನವಾಗಿಲ್ಲ.
ತಾಳ್ಮೆಯಿಂದಿಲ್ಲವೆಂದರ್ಥ. ಆಗೋದನ್ನು ತಡೆಯಲಾಗೋದಿಲ್ಲ ಆದರೂ ತಡೆಯೋ ಪ್ರಯತ್ನ ನಡೆಸುತ್ತೇವೆ. ಆಗಿದ್ದೆಲ್ಲಾ ಒಳ್ಳೆಯದೆಂದು ತಿಳಿದರೂ ವ್ಯರ್ಥ ದು:ಖಕ್ಕೆ ಮನಸೋಲುತ್ತದೆ. ಮಧ್ಯವರ್ತಿ ಮಾನವ ತಾನು ಕಾರಣಮಾತ್ರನೆಂಬ ಅರಿವಿದ್ದರೂ ನಾನೇ ಮಾಡೋದೆನ್ನುವ ಮಾಯೆಯಲ್ಲಿ ಮೋಸ ಹೋಗೋದು ತಪ್ಪಿಲ್ಲ. ಹಾಗಾದರೆ ತಾಳ್ಮೆ ಯಾವ ವಿಚಾರಕ್ಕೆ ಅಗತ್ಯವಿದೆ ಎಂದಾಗ ಇನ್ನೊಬ್ಬರನ್ನು ತುಳಿದು ಆಳೋ ವಿಚಾರದಲ್ಲಿ ತಾಳ್ಮೆ ಇರಬೇಕು.
ನನ್ನನ್ನೂ ಇನ್ನೊಬ್ಬರು ಮುಂದೆ ತುಳಿದು ಆಳೋದು ಖಚಿತವಾದಾಗ ನಮ್ಮ ಪಾಲಿಗೆ ಬಂದದ್ದು ಪಂಚಾಮೃತವೆಂದರಿತು ನಡೆದರೆ ಸಿಗಬೇಕಾದದ್ದು ಮುಂದೆ ನಿರಾಯಾಸವಾಗಿ ಹುಡುಕಿಕೊಂಡು ಬರುತ್ತದೆ. ಹಾಗಂತ ಕರ್ಮ ಮಾಡದಿರೋದಲ್ಲ. ಸಾಧ್ಯವಾದರೆ ಸತ್ಕರ್ಮ ಮಾಡಬಹುದು.
ದುಷ್ಕರ್ಮದಿಂದ ನಮ್ಮೊಳಗೇ ದುಷ್ಟಶಕ್ತಿಗಳು ಸೇರುವುದರಿಂದ ಕಷ್ಟ ನಷ್ಟ ಹೆಚ್ಚುತ್ತದೆ. ಹೊರಗಿನ ಹೋರಾಟದಿಂದ ರಾಜಕೀಯ ಬೆಳೆಯುತ್ತದೆ. ಒಳಗಿನ ಹೋರಾಟದಿಂದ ರಾಜಯೋಗ ಸಿಗುತ್ತದೆ. ಜೀವನದಲ್ಲಿ ಹೋರಾಟವಿಲ್ಲವಾದರೆ ಮಧ್ಯವರ್ತಿಗಳ ವಶವಾಗಿ ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ.
ಆತ್ಮರಕ್ಷಣೆಯ ಹೋರಾಟಕ್ಕೂ, ಜೀವರಕ್ಷಣೆಯ ಹೋರಾಟಕ್ಕೂ, ಮಾನ, ಧನ, ಅಧಿಕಾರ, ಸ್ಥಾನವೆ ಪ್ರಧಾನ ಆಗಿರುತ್ತದೆ. ಇವೆಲ್ಲದರಿಂದ ದೂರವಿದ್ದವರಿಗೆ ಹೋರಾಟವೆ ಇರೋದಿಲ್ಲ. ಅದಕ್ಕೆ ಹಿಂದೆ ಎಲ್ಲವನ್ನೂ ತೊರೆದು ಸಂನ್ಯಾಸ ಸ್ವೀಕರಿಸಿದ್ದರು.
ಆದರೆ ಕಾಲ ಬದಲಾಗಿದೆ ಈಗ ಸಂನ್ಯಾಸಿಗಳೇ ಹೊರಗಿನ ರಾಜಕೀಯದಲ್ಲಿ ಹೋರಾಟ ನಡೆಸೋ ಹಾಗಿದೆ. ಬೇಲಿಯೇ ಎದ್ದು ಹೊಲಮೇಯ್ದಂತೆ ಎನ್ನಲಾಗುವುದೆ? ದೇಶದೊಳಗೆ ಇದ್ದ ಮೇಲೆ ರಾಜಕೀಯ ಬೇರೆ ಧರ್ಮ ಬೇರೆ ಎನ್ನಲಾಗದು. ದೇಶವನ್ನು ಧರ್ಮದ ಪ್ರಕಾರ ನಡೆಸೋದಕ್ಕೆ ಎಲ್ಲರೂ ಸಾಮಾನ್ಯಪ್ರಜೆಗಳಾಗಿದ್ದು ಸಹಕರಿಸಬೇಕು.
ಆದರೆ, ಸಹಕಾರ ನೀಡುವಾಗ ಯಾವುದೆ ಭೇದಭಾವ, ಭಿನ್ನಾಭಿಪ್ರಾಯ, ದ್ವೇಷ, ರೋಷ, ಸೇಡಿನ ರಾಜಕೀಯತೆ ಇದ್ದರೆ ಇದೇ ಮುಂದೆ ತಿರುಗಿ ಹೊಡೆಯುವುದೆಂದು ಅರ್ಥವಾಗಿದ್ದರೆ ಉತ್ತಮ. ದೇಶದೊಳಗೆ ಇರುವ ಪ್ರಜೆಗೆ ದೇಶವನ್ನೇ ಆಳೋ ಅಧಿಕಾರ ಸಿಕ್ಕರೂ, ಅಧಿಕಾರ ಕೊಟ್ಟವರು ಶಾಶ್ವತವಲ್ಲ.
ಹೀಗಿರುವಾಗ ಅಧಿಕಾರ ಶಾಶ್ವತವಾಗಿರೋದಿಲ್ಲ. ಎಲ್ಲಾ ಸರಿಸಮಾನರಷ್ಟೆ. ಅವರವರ ಪಾಲಿಗೆ ಬಂದಷ್ಟೆ ಅನುಭವಿಸಬೇಕು. ಹೆಚ್ಚಿಗೆ ಒಂದೇ ಸಮ ಹೊರಗಿನಿಂದ ಒಳಗೆಳೆದುಕೊಂಡರೆ ಒಳಗೇ ರೋಗ ಹೆಚ್ಚಾಗುತ್ತದೆ. ಅದನ್ನು ಜೀವವೆ ಅನುಭವಿಸಬೇಕು. ಯಾರೇ ಆಗಿರಲಿ ಆ ಪರಾಶಕ್ತಿಯಿಂದ ಹೊರಗಿಲ್ಲ. ಮಾನವ ತನ್ನ ಮಂತ್ರ,ತಂತ್ರ,ಯಂತ್ರದಿಂದ ಸಾಧನೆ ಮಾಡಿದರೂ ಅದರೊಳಗೂ ಅಡಗಿರೋದು ಆ ಶಕ್ತಿಯೆ.
ಹೀಗಾಗಿ ದುರ್ಭಳಕೆ ಮಾಡಿಕೊಂಡರೆ ಶಿಕ್ಷೆ ನಿಶ್ಚಿತ. ಶಿಕ್ಷೆ ಅನುಭವಿಸದೆ ಅಡ್ಡದಾರಿ ಹಿಡಿದರೆ ಮತ್ತೆ ಮುಖ್ಯರಸ್ತೆಗೆ ಬಂದೇ ನೇರವಾಗಿ ನಡೆಯಬೇಕು. ನೇರವಾಗಿ ನಡೆಯುವಾಗ ಅಡ್ಡರಸ್ತೆಗಳ ಆಕರ್ಷಣೆ ಮಾನವನಿಗೆ ಸಹಜ. ಹೋದರೆ ತಿರುಗಿ ಬರೋದು ಕಷ್ಟ. ಹೀಗಾಗಿ ಕಷ್ಟವಾದರೂ ನಿಧಾನವಾಗಿ ಪ್ರಧಾನವಾಗಿರುವ ರಸ್ತೆಯಲ್ಲಿಯೇ ನಡೆದರೆ ಮೂಲ ಗುರಿ ತಲುಪಬಹುದು.
ಎಲ್ಲರೂ ಬಂದಿರೋದು ಒಂದೆ ಕಡೆಯಿಂದ. ಆದರೆ ಕೆಲವರು ದಾರಿತಪ್ಪಿಸಿ, ದಾರಿತಪ್ಪಿ ಮುಂದೆ ನಡೆದು ಇತರರನ್ನೂ ನಡೆಸುತ್ತಾ ಕೊನೆಯಿಲ್ಲದೆ ತಿರುಗಿ ಬರೋವಾಗ ಹಿಂದೆ ಬರುತ್ತಿದ್ದವರನ್ನು ತಡೆಯಲಾಗದೆ ನಿಲ್ಲಬೇಕಾಗುತ್ತದೆ. ಹೀಗಾಗಿ ಮಕ್ಕಳಿಗೆ ದಾರಿ ತೋರಿಸುವ ಮೊದಲು ಪೋಷಕರು ಸರಿದಾರಿಯಲ್ಲಿ ನಡೆಯುತ್ತಿದ್ದೇವೆಯೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿ ಕೊಂಡರೆ ಉತ್ತಮ. ಇಲ್ಲವಾದರೆ ಮಕ್ಕಳೂ ದಾರಿತಪ್ಪಿದರೆ ಭೂಮಿಯಲ್ಲಿ ಹೊರಗಿನ ಹೋರಾಟದಿಂದ ಅಶಾಂತಿ ಹೆಚ್ಚಾಗಿರುತ್ತದೆ.
ಎಲ್ಲರಿಗೂ ಅವರವರ ದಾರಿ ಸರಿಯಾಗೇ ಕಾಣುತ್ತದೆ. ಸನ್ಮಾನಕ್ಕಾಗಿ ಸನ್ಮಾರ್ಗದ ಅಗತ್ಯವಿದೆ. ಈ ದಿನಗಳಲ್ಲಿ ಹಣವಿದ್ದವರನ್ನು ಕರೆದು ಸನ್ಮಾನಮಾಡುತ್ತಾರೆ. ಜ್ಞಾನ,ಗುಣವಿದ್ದವರನ್ನು ಅವಮಾನ ಮಾಡಿ ಹಿಂದೆ ತಳ್ಳುತ್ತಾರೆ. ಹಾಗಂತ ಶಾಶ್ವತವಾದ ಜ್ಞಾನ, ಗುಣ ಹಾಳಾಗುವುದೆ? ಯಾರೂ ಇಲ್ಲದವರ ಜೊತೆಗೆ ಭಗವಂತ ಇರುತ್ತಾನಂತೆ.
ಅಂದರೆ ಭೂಮಿಯಲ್ಲಿ ಮಾನವರ ಸಹಕಾರ ಸಹಾಯವಿಲ್ಲದೆ ಜೀವನ ನಡೆಸೋದು ಬಹಳ ಕಷ್ಟ. ಹಾಗೆ ದೈವತ್ವವಿಲ್ಲದೆ ಆಧ್ಯಾತ್ಮದ ಕಡೆ ನಡೆಯಲಾಗದು. ಇದಕ್ಕೆ ಹಿಂದಿನ ಮಹಾತ್ಮರುಗಳು ಕಷ್ಟಪಟ್ಟು ಪರಮಾತ್ಮನ ಕಡೆ ತಿರುಗಿ ನಡೆದರು. ಈಗ ಇಷ್ಟಪಟ್ಟು ಪರದೇಶದ ಕಡೆ ನಡೆಯುತ್ತಾರೆ. ಕಾಲ ಬದಲಾಗಿದೆ.
ಹೊರಗೆ ಹೋದಷ್ಟೂ ಮೂಲದಿಂದ ದೂರವಾದಂತೆ ತಿರುಗಿ ಬರೋದಕ್ಕೆ ಕಷ್ಟ. ಎಲ್ಲವೂ ಪೂರ್ವನಿರ್ಧರಿತ ಕರ್ಮಫಲಗಳಾದಾಗ ಯಾರು ಯಾರನ್ನು ನಡೆಸುತ್ತಿಲ್ಲ. ನಡೆಸಲಾಗದು. ಈಗಿದು ನಾವು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ. ಹಾಗಂತ ನಮ್ಮ ಪ್ರಯತ್ನದಲ್ಲಿ ಪ್ರಾಮಾಣಿಕತೆ, ಸತ್ಯ, ಧರ್ಮವಿದ್ದರೆ ಉತ್ತಮ ಬದಲಾವಣೆ ಸಾಧ್ಯವಿದೆ.
ಸಕಾರಾತ್ಮಕ ಚಿಂತನೆ ಆಧ್ಯಾತ್ಮದ ಕಡೆ ಇದ್ದರೆ ಉತ್ತಮ.ಆಧ್ಯಾತ್ಮ ಎಂದರೆ ಪುರಾಣ ಇತಿಹಾಸದ ರಾಜಕೀಯವಲ್ಲ. ಅಂದಿನ ರಾಜಯೋಗದೊಳಗಿದ್ದ ಸತ್ಯ ಧರ್ಮ. ಪ್ರಜಾಪ್ರಭುತ್ವದ ಪ್ರಜೆಗಳೆ ಎಚ್ಚರವಾಗಲು ಉತ್ತಮ ಜ್ಞಾನದ ಶಿಕ್ಷಣ ಸಿಗಬೇಕಿದೆ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು