ಮೂಡಲಗಿ: ರೈತರಿಗೆ ಸದಾ ಸರಿಯಾದ ಮಾಹಿತಿ ಹಾಗೂ ತಂತ್ರಜ್ಞಾನ ಅಳವಡಿಕೆ ನೀಡಿಕೊಳ್ಳಲು ಡಿಎಇಎಸ್ಐ ತರಬೇತಿ ಸಹಾಯಕವಾಗಲಿದೆ. ರೈತರ ಆದಾಯ ದ್ವಿಗುಣಗೊಳಿಸಲು ಕೇವಲ ಉತ್ಪಾದನೆಯ ಮೂಲಕವೆ ಆಗದು ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗಳ ಕಡೆಗೆ ಗಮನ ಹರಿಸಬೇಕು ಈ ದಿಸೆಯಲ್ಲಿ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಧಾರವಾಡ ಡಿಎಇಎಸ್ಐ ಸಂಯೋಜಕರು ಮತ್ತು ಸಮಿತಿ ರಾಜ್ಯ ನೋಡಲ್ ಅಧಿಕಾರಿ ಡಾ. ಎಮ್.ಗೋಪಾಲ ಹೇಳಿದರು.
ಅವರು ತಾಲೂಕಿನ ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ವ್ಯವಸ್ಥಾಪಕ ಹೈದರಾಬಾದ ಸಮಿತಿ (ಉತ್ತರ), ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ, ಆತ್ಮಾ ಯೋಜನೆ ಆಶ್ರಯದಲ್ಲಿ ಶುಕ್ರವಾರದಂದು ಜರುಗಿದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ ನೂತನ ತಂಡದ ಸುಮಾರು ಹತ್ತು ತಿಂಗಳ ತರಬೇತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ 3 ಲಕ್ಷ ಪರಿಕರ ಮಾರಾಟಗಾರರು ಇದ್ದಾರೆ ಇದರಲ್ಲಿ 60 ಸಾವಿರ ಮಾತ್ರ ತರಬೇತಿಗಳನ್ನು ಪೂರೈಸಿದ್ದಾರೆ. ಕೃಷಿ ಪರಿಕರ ಮಾರಾಟ ಕ್ಷೇತ್ರದಲ್ಲಿರುವವರಿಗೆ 2016 ರಿಂದ ಡಿಪ್ಲೋಮಾ ಪ್ರಮಾಣ ಪತ್ರ ಹೊಂದುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಇದರ ಅನ್ವಯ ನಮ್ಮ ರಾಜ್ಯದಲ್ಲಿ 20 ಸಾವಿರ ಮಾರಾಟಗಾರರ ಪೈಕಿ 4 ಸಾವಿರ ಪರಿಕರ ಮಾರಾಟಗಾರರು ಮಾತ್ರ ಪ್ರಮಾಣ ಪತ್ರ ಪಡೆದಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನಗಳನ್ನು ರೈತರಿಗೆ ಮುಟ್ಟಿಸುವಲ್ಲಿ ಕೃಷಿ ಪರಿಕರ ಮಾರಾಟಗಾರ ಪಾತ್ರ ಮಹತ್ವದ್ದಾಗಿದೆ ಎಂದರು.
ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್. ಐ ಅಥಣಿ ಮಾತನಾಡಿ, ವ್ಯಾಪಾರದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನ ಮುಟ್ಟಿಸುವಲ್ಲಿ ತರಬೇತಿ ಪಡೆದಂತಹ ಎಲ್ಲರ ಜವಾಬ್ದಾಯಾಗಿರುತ್ತದೆ ಹಾಗೂ ಕೃಷಿ ಪರಿಕರ ಮಾರಾಟಗಾರರು ಸಮಾನಾಂತರ ವಿಸ್ತರಣಾ ಕಾರ್ಯಕರ್ತರಾಗಿ ಕೇಂದ್ರ ಸರಕಾರ ಗುರುತಿಸಿರುವುದು ಗಮನಾರ್ಹ ಎಂದು ಹೇಳಿದರು.
ಗೋಕಾಕ-ಮೂಡಲಗಿ ತಾಲೂಕಿನ ಸಹಾಯ ಕೃಷಿ ನಿರ್ದೇಶಕ ಎಮ್. ಎಮ್. ನದಾಫ ಮಾತನಾಡಿ, ಪರಿಕರಗಳ ಸೂಕ್ತ ಬಳಕೆ ಅತೀ ಮುಖ್ಯವಾದ ಕಾರ್ಯವಾಗಿದ್ದು, ರಸಗೊಬ್ಬರಗಳ ಹಾಗೂ ರಸಾಯನಿಕಗಳ ಸರಿಯಾದ ಬಳಕೆಯನ್ನು ರೈತರಿಗೆ ನಿಖರವಾಗಿ ತಿಳಿ ಹೇಳುವುದು ಪರಿಕರ ಮಾರಾಟಗಾರರ ಆದ್ಯ ಕರ್ತವ್ಯವಾಗಿದೆ ಎಂದರು.
ಅರಭಾವಿ ಡಿಎಟಿಸಿ ಸಹಾಯಕ ಕೃಷಿ ನಿರ್ದೇಶಕಿ ಲೀಲಾವತಿ ಕೌಜಗೇರಿ ಕಾರ್ಯಕ್ರಮದ ಕುರಿತು ಅನುಭವ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ|| ಎಮ್. ಜಿ. ಕೆರುಟಗಿ, ಡೀನ್ ಮಾತನಾಡಿ, ರೈತ ದೇಶದ ಬೆನ್ನೆಲುಬು ಆದರೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮತ್ತು ಪರಿಕರ ಮಾರಾಟಗಾರರು ರೈತರ ಬೆನ್ನೆಲುಬಾಗಿ ನಿಲ್ಲಬೇಕು. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದ ಕಾರಣ ಕೃಷಿಯಿಂದ ವಿಮುಖರಾಗಿದ್ದಾರೆ. ಕೃಷಿ ಜೊತೆಗೆ ಮೌಲ್ಯ ವರ್ಧನೆಯು ಕೂಡಾ ಒಂದು ಮಹತ್ವದ ಕಾರ್ಯವಾಗಿರುತ್ತದೆ ಎಂದ ಅವರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಆವಿಷ್ಕರಿಸಿದ ನೂತನ ತಂತ್ರಜ್ಞಾನಗಳು ಮತ್ತು ಸಂಶೋಧನೆಗಳು ಕೇವಲ ಶೇ.20 ಮಾತ್ರ ರೈತರಿಗೆ ಮುಟ್ಟುತ್ತಿದ್ದು. ಶೇ. 50 ರಷ್ಟು ರೈತರು ಮಾಹಿತಿಗಾಗಿ ಕೃಷಿ ಪರಿಕರ ಮಾರಾಟ ಮಳಿಗೆಗಳನ್ನು ತಂತ್ರಜ್ಞಾನಗಳನ್ನು ಕಲೆಹಾಕುತ್ತಾರೆ. ಅವರಿಗೆ ವಿವಿಧ ತಂತ್ರಜ್ಞಾನಗಳ ಬಗೆಗಿನ ಅನುಭವ ಅತೀ ಮಹತ್ವದ್ದಾಗಿದೆ, ಈ ನಿಟ್ಟಿನಲ್ಲಿ ಕೃಷಿ ಪರಿಕರ ಮಾರಾಟಗಾರರ ಕೃಷಿ ವಿಸ್ತಿರಣಾ ಡಿಪ್ಲೋಮಾ ಕಾರ್ಯಕ್ರಮದ ಮುಖಾಂತರ ನೀಡಬಹುದಾಗಿದೆ.
ಈ ಕಾರ್ಯಕ್ರಮದಲ್ಲಿ ರಶ್ಮಿ ಬಸ್ಸಾಪುರಿ ಹಾಗೂ ಮಹಾವಿದ್ಯಾಲಯದ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಸೀಮಾ ರಾಜಗೋಳಿ ಮತ್ತು ಸುಪ್ರೀತಾ ಪ್ರಾರ್ಥಿಸಿದರು, ಡಿಎಇಎಸ್ಐ ಸಂಯೋಜಕರು ಡಾ. ದಿಲೀಪಕುಮಾರ ಮಸೂತಿ ನಿರೂಪಿಸಿದರು, ಡಾ. ಮುಕುಂದ ಶಿರಗೂರ ಸ್ವಾಗತಿಸಿದರು. ಡಾ. ಬಿ.ಸಿ. ಪಾಟೀಲ್ ವಂದಿಸಿದರು.