ಬೆಂಗಳೂರು ತುಮಕೂರು ರಸ್ತೆಯ ಜಿಂದಾಲ್ ನಗರದ ಜಿಂದಾಲ್ ಮಹಿಳಾ ಕಾಲೇಜಿನಲ್ಲಿ ಗಾಂಧಿ ಅಧ್ಯಯನ ಕೋಶ, ರಾಷ್ಟ್ರೀಯ ಸೇವಾಯೋಜನಾ ಘಟಕ , ಐಕ್ಯೂಎಸಿ ಹಾಗೂ ಕರ್ನಾಟಕ ಸರ್ವೋದಯ ಮಂಡಲದ ಸಹಯೋಗದೊಂದಿಗೆ ಗಾಂಧಿ ಹಾಗೂ ನೈತಿಕ ಮೌಲ್ಯಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು .
ರಾಷ್ಟ್ರೀಯ ಕಾನೂನು ದಿನ ಹಾಗೂ ಸಂವಿಧಾನ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸರ್ವೋದಯ ಮಂಡಲಿ ಅಧ್ಯಕ್ಷ ಡಾ.ಎಚ್.ಎಸ್.ಸುರೇಶ ಮಾತನಾಡುತ್ತ, ಗಾಂಧಿಯ ನೇರ ನುಡಿ , ಸ್ಪಷ್ಟತೆ , ಸರಳತೆ ಮೂರ್ತಿವೆತ್ತಂತಿದ್ದರು , ಬಾಪೂವಿನಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ, ಸರಳ ಬದುಕಿನ ಕ್ರಮಗಳೊಂದಿಗೆ ಬದಕನ್ನು ಕಟ್ಟಿಕೊಂಡರೂ ಸಹ ದೇಶಕ್ಕೆ ಮಹಾತ್ಮರಾದವರು. ಸತ್ಯ, ಶಾಂತಿ ,ತ್ಯಾಗ ,ನ್ಯಾಯ, ಅಹಿಂಸಾತ್ಮಕ ಮಾರ್ಗ ,ನೈತಿಕ ಮೌಲ್ಯಗಳಿಂದ ಕೂಡಿದ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗಾಂಧಿ ಜಯಂತಿ ಏರ್ಪಡಿಸಿದ್ದ ಭಿತ್ತಿಪತ್ರ ರಚನಾ ಸ್ಪರ್ಧೆ ಹಾಗು ಪ್ರಬಂಧ ರಚನಾ ಸ್ಪರ್ಧೆ ವಿಜೇತರಿಗೆ ಮುಖ್ಯ ಅತಿಥಿಗಳಾದ ಕರ್ನಾಟಕ ಸವೋದಯ ಮಂಡಲಿ ಕಾರ್ಯದರ್ಶಿ ಡಾ.ಯ.ಚಿ.ದೊಡ್ಡಯ್ಯ ಹಾಗೂ ಮಾಧ್ಯಮ ನಿರ್ವಾಹಕ ಡಾ.ಗುರುರಾಜ ಪಿ. ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ.ವೀಣಾ ಟಿ. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರಾದ ಕು.ಗುರುದೀಪಿಕಾ- ಎಂಥಾ ಶಿಕ್ಷಣ ಬೇಕು ; ಶ್ರಾವಣಿ – ಎಂಥಾ ಸ್ನೇಹಿತರು ಇರಬೇಕು ; ಲಾವಣ್ಯ- ಸಮಾಜಕ್ಕೆ ನಾನು ಮಾಡಬಹುದಾದ ಯಾವುದೇ ಎರಡು ಸೇವೆಗಳು ; ಸಿಂಧೂ- ನಮ್ಮ ಕಾಲೇಜಿನ ವಿಶೇಷತೆ ; ಕೋಮಲ- ನಾನು ಕಂಡಂತೆ ನನ್ನ ಸರಿ ತಪ್ಪುಗಳು ಕುರಿತು ವಿಷಯ ಪ್ರಸ್ತುತಿ ಪಡಿಸಿದರು, ಕನ್ನಡ ವಿಭಾಗದ ಶಶಿಕಲಾ ಎನ್ ಸ್ವಾಗತಿಸಿದರು ಹಾಗೂ ಆಂಗ್ಲ ವಿಭಾಗದ ದಿವ್ಯ ಕೆ.ಬಿ.ವಂದಿಸಿದರು.