ಬನವಾಸಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡುವ ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಬನವಾಸಿಯ 49 ಫಲಾನುಭವಿಗಳಿಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸೋಮವಾರ ಗ್ರಾಮ ಪಂಚಾಯತಿ ಸಭಾಭವನದಲ್ಲಿ ವಿತರಿಸಿದರು.
ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿ ಮಾತನಾಡಿದ ಸಚಿವರು, ಸ್ತ್ರೀಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ 2006-07ನೇ ಸಾಲಿನಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಯೋಜನೆಯನ್ನು ಆರಂಭಿಸಿದರು. ಸಮಾಜದಲ್ಲಿ ಲಿಂಗಾನುಪಾತದಲ್ಲಿ ಆಗುತ್ತಿರುವ ವ್ಯತ್ಯಾಸ ಹೋಗಲಾಡಿಸಲು ಮತ್ತು ಹೆಣ್ಣು ಮಗುವಿನ ಬಗ್ಗೆ ಪ್ರೀತಿಭಾವ ಮೂಡಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಿ ಬಡವರಿಗೆ ಅನುಕೂಲವಾಗುವಂತೆ ಮಾಡಿದೆ. ಪೋಷಕರು ಮಕ್ಕಳ ದೈಹಿಕ ಆರೋಗ್ಯ ಸದೃಡತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ತುಳಸಿ ಆರೇರ, ಉಪಾಧ್ಯಕ್ಷ ತಬರೇಜ ಶೌಕತ್ ಬೇಗ್, ಶಿರಸಿ ಎ ಪಿ ಎಮ್ ಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡರ್, ಗ್ರಾಪಂ ಸದಸ್ಯರಾದ ಅಶೋಕ ಪೊನ್ನಪ್ಪ, ಸಿದ್ದು ನೆರಗಲ್, ಮುಖಂಡರಾದ ದ್ಯಾಮಣ್ಣ ದೊಡ್ಮನಿ, ಸಿಡಿಪಿಓ ದತ್ತಾತ್ರೇಯ ಭಟ್, ಪಿಎಸ್ಐ ಹನುಮಂತ ಬಿರಾದಾರ, ಅಂಗನವಾಡಿ ಮೇಲ್ವಿಚಾರಕಿ ನಿರ್ಮಲಾ ಸಲ್ಕಿಮಠ, ಮಮತಾ ನಾಯ್ಕ್ ಮತ್ತಿತರು ಇದ್ದರು.