ಅಹಮದಾಬಾದ್- ಸುಮಾರು ಹದಿನೆಂಟು ವರ್ಷಗಳಿಂದ ಸೋಲಿನಿಂದ ಹೈರಾಣಾಗಿದ್ದ ಆರ್ ಸಿಬಿ ಕ್ರಿಕೆಟ್ ತಂಡಕ್ಕೆ ಕೊನೆಗೂ ಐಪಿಎಲ್ ಟೂರ್ನಿಯಲ್ಲಿ ಜಯ ಸಿಕ್ಕಿದ್ದು ಈ ಸಲ ಕಪ್ ದಕ್ಕಿಸಿಕೊಂಡು ಬೀಗಿದೆ.
ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ವಿಜಯವನ್ನು ತನ್ನದಾಗಿಸಿಕೊಂಡಿದೆ. ಹದಿನೆಂಟು ವರ್ಷಗಳಿಂದ ‘ಈ ಸಲ ಕಪ್ ನಮ್ದೇ’ ಎಂದು ಹೇಳಿಕೊಂಡು ಬರುತ್ತ ಪ್ರತಿಸಲವೂ ನಿರಾಶೆ ಕಾಣುತ್ತಿದ್ದ ಆರ್ ಸಿಬಿ ಕ್ರಿಕೆಟ್ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ತಂಡ ನಿರಾಶೆ ಮಾಡಲಿಲ್ಲ. ಅತ್ಯಂತ ನಿರೀಕ್ಷೆ ಹೊಂದಿದ್ದ ಎಲ್ಲ ಅಭಿಮಾನಿಗಳಿಗೆ ಪಂಜಾಬ್ ತಂಡದ ವಿರುದ್ಧ ಆರು ವಿಕೆಟ್ ಗಳಿಂದ ಜಯ ಸಾಧಿಸಿತು.
ಜಿಯೊ ಹಾಟ್ ಸ್ಟಾರ್ ಚಾನಲ್ ನಲ್ಲಿ ಈ ಐಪಿಎಲ್ ಫೈನಲ್ ಪಂದ್ಯವನ್ನು ಸುಮಾರು ೬೨ ಕೋಟಿ ಜನ ವೀಕ್ಷಿಸಿದರು. ಇದಲ್ಲದೆ ಈ ಸಲ ದೇಶದಾದ್ಯಂತ ಪ್ರಮುಖ ಚಿತ್ರ ಮಂದಿರಗಳಲ್ಲೂ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಕರ್ನಾಟಕದಲ್ಲಿ ಗಲ್ಲಿಗಲ್ಲಿಗಳಲ್ಲೂ ಟಿವಿಗಳನ್ನಿಟ್ಟು ವೀಕ್ಷಿಸಲಾಯಿತು. ದೇಶದ ಹಲವಾರು ದೇವಸ್ಥಾನಗಳಲ್ಲಿ ಆರ್ ಸಿಬಿ ಗೆಲುವಿಗೆ ಪೂಜೆ ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿತ್ತು ಅಷ್ಟೇ ಯಾಕೆ ಮದುವೆ ಸಮಾರಂಭಗಳಲ್ಲೂ ಆರ್ ಸಿಬಿ ಗೆಲುವಿಗೆ ಹಾರೈಕೆಗಳನ್ನು ಸಲ್ಲಿಸಲಾಗಿತ್ತು.
ಕಿಕ್ಕಿರಿದು ತುಂಬಿದ್ದ ಗುಜರಾತ್ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡ ೧೯೦ ರನ್ ಗಳಿಸಿ ಆಟ ಮುಗಿಸಿತು. ೧೯೧ ರನ್ ಗಳ ಗುರಿಯೊಂದಿಗೆ ಆಟ ಪ್ರಾರಂಭಿಸಿದ ಪಂಜಾಬ್ ಕಿಂಗ್ಸ್ ತಂಡ ಕೇವಲ ೧೭೫ ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಗ್ರೌಂಡ್ ನಲ್ಲಿ ಭಾವುಕನಾದ ಕೊಹ್ಲಿ
ಹದಿನೆಂಟು ವರ್ಷಗಳ ವನವಾಸ ಮುಗಿದು ಆರ್ ಸಿಬಿ ತಂಡಕ್ಕೆ ಜಯ ದೊರಕುತ್ತಲೇ ತಂಡದ ಆಟಗಾರ ವಿರಾಟ್ ಕೊಹ್ಲಿ ಆಟವಾಡುತ್ತಲೇ ಕಣ್ಣೀರಾದರು. ಹಲವಾರು ವರ್ಷಗಳು ಜಯದ ನಿರೀಕ್ಷೆಯಲ್ಲಿದ್ದ ಅವರು ಕ್ರೀಡಾಂಗಣದ ಮಣ್ಣಿಗೆ ಮಣಿದು ತಮ್ಮ ಭಾವುಕತೆ ವ್ಯಕ್ತಪಡಿಸಿದರು. ಕಣ್ಣಲ್ಲಿ ಆನಂದ ಭಾಷ್ಪ ಸುರಿಸಿದರು.