ಮೂಡಲಗಿ: ಒಕ್ಕಲುತನ ಹಿನ್ನೆಲೆ ಇರುವ ಮೂಡಲಗಿಯಲ್ಲಿ ಬಸವ ಜಯಂತಿಯಂದು ಎತ್ತುಗಳ ಮೆರವಣಿಗೆಯನ್ನು ಮಾಡುವುದನ್ನು ಪೂರ್ವಜರು ನಡೆಸಿಕೊಂಡು ಬಂದಿದ್ದಾರೆ. ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೊರಟಿರುವೆವು. ಇದು ಬಸವೇಶ್ವರರ ಕಾಯಕ ತತ್ವವನ್ನು ಬಿಂಬಿಸುತ್ತದೆ. ಕಾಯಕ ತತ್ವವು ಸಾರ್ವಕಾಲಿಕವಾಗಿದೆ’ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಜಿ ಢವಳೇಶ್ವರ ಹೇಳಿದರು.
ಬಸವ ಜಯಂತಿಯ ನಿಮಿತ್ತ ಬಸವೇಶ್ವರ ಕಲ್ಯಾಣ ಮಂಟಪದ ಬಳಿಯಲ್ಲಿ ಎತ್ತುಗಳಿಗೆ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಂಗಳವಾರ ಬಸವ ಜಯಂತಿಯ ಅಂಗವಾಗಿ ಶೃಂಗಾರಗೊಳಿಸಿದ್ದ ಜೋಡೆತ್ತುಗಳ ಮೆರವಣಿಗೆಯು ಗಮನಸಳೆಯಿತು. ಎತ್ತುಗಳಿಗೆ ಗುಲಾಲು, ಕೋಡುಗಳಿಗೆ ಬಣ್ಣ ಬಣ್ಣದ ರಿಬ್ಬನ್, ಬಲೂನ್ ಹಾಗೂ ಮೈಮೇಲೆ ಕಸೂತಿಯ ವಸ್ತ್ರಗಳಿಂದ ಎತ್ತುಗಳು ಆಕರ್ಷಕವಾಗಿ ಕಾಣುತ್ತಿದ್ದವು.
ಇಲ್ಲಿಯ ಬಸವೇಶ್ವರ ಕಲ್ಯಾಣ ಮಂಟಪ ಸಮಿತಿ, ವೀರಶೈವ ಲಿಂಗಾಯತ ಮತ್ತು ರಾಷ್ಟ್ರೀಯ ಬಸವ ದಳದ ಆಶ್ರಯದಲ್ಲಿ ಬಸವ ಜಯಂತಿಯನ್ನು ಸಂಭ್ರಮದಿಂದ ಅಚರಿಸಲಾಯಿತು.
25 ಕ್ಕೂ ಅಧಿಕ ಸಂಖ್ಯೆಯಲ್ಲಿ ಶೃಂಗರಿಸಲಾಗಿದ್ದ ಜೋಡಿ ಎತ್ತುಗಳು ಮೆರವಣಿಗೆಯಲ್ಲಿ ಇದ್ದವು. ಮೆರವಣಿಗೆಯ ಪೂರ್ವದಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ಮಹಿಳೆಯರು ಬಸವೇಶ್ವರರ ತೊಟ್ಟಿಲೋತ್ಸವವನ್ನು ನೆರವೇರಿಸಿದರು. ಶ್ರೀಶೈಲ ಹಿರೇಮಠ ತೊಟ್ಟಿಲೋತ್ಸವ ಪೂಜೆ ನೆರವೇರಿಸಿದರು.
ಬಸವೇಶ್ವರರ ಜಯಂತಿ ಹಾಗೂ ಮೆರವಣಿಗೆಯಲ್ಲಿ ಮುಸ್ಲಿಂ ಸಮಾಜದವರು ಭಾಗವಹಿಸಿದ್ದರಿಂದ ಬಸವ ಜಯಂತಿಯು ಸಾಮರಸ್ಯಕ್ಕೆ ಸಾಕ್ಷಿಯಾಯಿತು.
ಅರ್ಚಕ ಈರಯ್ಯ ಹಿರೇಮಠ, ಕೆ.ಟಿ. ಗಾಣಿಗೇರ, ಭೀಮಪ್ಪ ಗಡಾದ, ರುದ್ರಪ್ಪ ವಾಲಿ, ಬಸವರಾಜ ಪಾಟೀಲ, ಆರ್.ಪಿ. ಸೋನವಾಲಕರ, ಶಂಕರಯ್ಯ ಹಿರೇಮಠ, ಬಿ.ವೈ. ಶಿವಾಪುರ, ಪಂಚಯ್ಯ ಹಿರೇಮಠ, ರವೀಂದ್ರ ಸಣ್ಣಕ್ಕಿ, ಅಜೀಜ್ ಡಾಂಗೆ, ರಮೇಶ ಸಣ್ಣಕ್ಕಿ, ಅನ್ವರ ನಧಾಪ, ಮರೆಪ್ಪ ಮರೆಪ್ಪಗೋಳ, ಮಲ್ಲು ಢವಳೇಶ್ವರ, ಬಸವರಾಜ ತೇಲಿ, ಶಂಕರ ತಾಂವಸಿ, ಡಾ. ಎಸ್.ಎಸ್. ಪಾಟೀಲ, ಡಾ. ಅನಿಲ ಪಾಟೀಲ, ಡಾ. ಬಸವರಾ ಪಾಲಬಾವಿ, ಮಲ್ಲಿಕಾರ್ಜುನ ಜಕಾತಿ, ಗಿರೀಶ ಢವಳೇಶ್ವರ, ರಮೇಶ ಬಂಗೆನ್ನವರ, ಈರಪ್ಪ ಬನ್ನೂರ, ಸಂಗಪ್ಪ ಅಂಗಡಿ, ಚನ್ನಬಸು ಬಡ್ಡಿ ಇದ್ದರು.