Homeಸುದ್ದಿಗಳುಬೆಳಗಾವಿ; ಆಡಳಿತ ಪಕ್ಷಕ್ಕೆ ಆಘಾತ ಜಿಲ್ಲಾ ಬಿಜೆಪಿಯ ಮುಂದಿನ ನಡೆ ಏನು ?

ಬೆಳಗಾವಿ; ಆಡಳಿತ ಪಕ್ಷಕ್ಕೆ ಆಘಾತ ಜಿಲ್ಲಾ ಬಿಜೆಪಿಯ ಮುಂದಿನ ನಡೆ ಏನು ?

ರಾಜ್ಯದ ಆಡಳಿತದಲ್ಲಿ ಬಿಜೆಪಿ ಪಕ್ಷವೇ ಇದ್ದರೂ, ಇಬ್ಬರು ಬಿಜೆಪಿ ಶಾಸಕರಿದ್ದರೂ ಬೆಳಗಾವಿ ಭಾರತೀಯ ಜನತಾ ಪಕ್ಷಕ್ಕೆ ‘ಕೈ’ ಕೊಟ್ಟಿದೆ ಆಡಳಿತ ಪಕ್ಷಕ್ಕೆ ಆಘಾತ ನೀಡಿದೆ.

ಬೆಳಗಾವಿ ಜಿಲ್ಲೆಯ ವಿಪ ದ್ವಿಸದಸ್ಯ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಜಯಭೇರಿ ಬಾರಿಸಿದ್ದು ಬಿಜೆಪಿಯ ಮಹಾಂತೇಶ ಕವಟಗಿಮಠ ಪರಾಭವಗೊಂಡಿದ್ದಾರೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅದರಲ್ಲೂ ಕೆಲವು ಪ್ರಮುಖ ಮಸೂದೆಗಳನ್ನು ಮಂಡಿಸುವ ಸಿದ್ಧತೆಯಲ್ಲಿ ರಾಜ್ಯ ಸರ್ಕಾರ ಇದ್ದರೆ ಇತ್ತ ವಿಧಾನ ಪರಿಷತ್ ಫಲಿತಾಂಶ ಅದರ ಆಶೆಗೆ ತಣ್ಣೀರೆರಚುವಂತಿದೆ.

ಈ ಮುಂಚೆ ಬಿಜೆಪಿಯಿಂದ ಇಬ್ಬರಿಗೆ ಟಿಕೆಟ್ ನೀಡಬೇಕೆಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಬೇಡಿಕೆಯಿಟ್ಟಿದ್ದರು. ಆದರೆ ಪಕ್ಷ ಮಹಾಂತೇಶ ಕವಟಗಿಮಠ ಅವರಿಗೆ ಮಾತ್ರ ಟಿಕೆಟ್ ನೀಡಿತು. ಇದರಿಂದ ಮುನಿಸಿಕೊಂಡ ಜಾರಕಿಹೊಳಿ ಬ್ರದರ್ಸ್ ಲಖನ್ ಜಾರಕಿಹೊಳಿಯವರನ್ನು ಪಕ್ಷೇತರರಾಗಿ ಕಣಕ್ಕಿಳಿಸಿದರು.

ಕಾಂಗ್ರೆಸ್ ಅನ್ನು ಸೋಲಿಸುವುದಕ್ಕಾಗಿಯೇ ಲಖನ್ ಕಣಕ್ಕಿಳಿಸಿದ್ದಾಗಿ ರಮೇಶ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಪ್ರಚಾರದ ಸಮಯದಲ್ಲೂ ತಮ್ಮ ಗುರಿ ಕಾಂಗ್ರೆಸ್ ಸೋಲಿಸುವುದು ಮಾತ್ರ ಎಂದರೇ ಹೊರತು ಬಿಜೆಪಿ ಗೆಲ್ಲುವುದು ಅನ್ನಲಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಆದರೆ ಬಿಜೆಪಿಯನ್ನೇ ಜನರು ಅವರು ಸೋಲಿಸಿರುವುದು ವಿಪರ್ಯಾಸ.

ಈ ಚುನಾವಣೆ ಫಲಿತಾಂಶ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಭಾರಿ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆಯೆನ್ನಲಾಗಿದ್ದು ಬಿಜೆಪಿಯ ಹದಿಮೂರು ಶಾಸಕರಿದ್ದರೂ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂಬುದೇ ಆಡಳಿತ ಪಕ್ಷಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.

ಇತ್ತ ಪರಾಜಿತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ತಮ್ಮದೇ ಪಕ್ಷದ ನಾಯಕರಾದ ಜಾರಕಿಹೊಳಿ ಸಹೋದರರ ವಿರುದ್ಧ ಪಕ್ಷದ ಹಿರಿಯರಿಗೆ ದೂರು ನೀಡವುದಾಗಿ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು, ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಜಾರಕಿಹೊಳಿಯವರೇ ಕಾರಣ ಎಂದು ಹೇಳಿದ್ದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಈ ಫಲಿತಾಂಶವು ಮುಂಬರಲಿರುವ ವಿಧಾನ ಸಭಾ ಚುನಾವಣೆಗಳ ಮೇಲೂ ಭಾರೀ ಪರಿಣಾಮ ಬೀರಲಿದೆ ಎಂಬುದಾಗಿಯೂ ವಿಶ್ಲೇಷಣೆ ಮಾಡಲಾಗುತ್ತಿದೆ.

ಬೆಳಗಾವಿ ಕುರಿತಂತೆ ಬಿಜೆಪಿ ಪಕ್ಷದ ಮುಂದಿನ ನಡೆಯೇನು ಎಂಬುದು ಕುತೂಹಲಕಾರಿಯಾಗಿದೆ.

RELATED ARTICLES

Most Popular

error: Content is protected !!
Join WhatsApp Group