ಮೂಡಲಗಿಯಲ್ಲಿ ಶ್ರೀಶೈಲ ಕಂಬಿ ಮಲ್ಲಯ್ಯನ ಉತ್ಸವ ಹಾಗೂ ಐದೇಶಿ ಅಂಗವಾಗಿ ಏರ್ಪಡಿಸಿದ್ದ ಪ್ರವಚನದಲ್ಲಿ ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು
ಮೂಡಲಗಿ: ‘ದೇವರಲ್ಲಿ ನಂಬಿಕೆ ಇಟ್ಟು ಧ್ಯಾನಿಸಿದರೆ ಅದು ನಿಜವಾದ ಭಕ್ತಿಯಾಗುತ್ತದೆ’ ಎಂದು ಯಡ್ರಾಮಿಯ ಮುರುಘೇಂದ್ರ ಸಂಸ್ಥಾನ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಹೇಳಿದರು.
ಇಲ್ಲಿಯ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿದ ಶ್ರೀಶೈಲ ಕಂಬಿ ಮಲ್ಲಯ್ಯನ ಉತ್ಸವ ಹಾಗೂ ಐದೇಶಿ ಅಂಗವಾಗಿ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಂಬಿಕೆ ಇಲ್ಲದ ಭಕ್ತಿಯು ವ್ಯರ್ಥ ಭಕ್ತಿಯಾಗುತ್ತದೆ ಎಂದರು.
ದೇವಸ್ಥಾನಗಳಲ್ಲಿ ಕೊಡುವ ತೀರ್ಥದಲ್ಲಿ ಭಕ್ತರು ನಂಬಿಕೆ ಇಟ್ಟರೆ ಮಾತ್ರ ತೀರ್ಥವಾಗುತ್ತದೆ. ನಂಬದವರಿಗೆ ಅದು ನೀರು ಮಾತ್ರ. ಹಾಗೆಯೇ ಪದಾರ್ಥವನ್ನು ನಂಬಿದರೆ ಪ್ರಸಾದವಾಗುತ್ತದೆ. ನಮಗೆ ದೇವರಲ್ಲಿ ನಂಬಿಕೆ ಇಟ್ಟರೆ ಮಾತ್ರ ದೇವರ ಸಾಕ್ಷಾತ್ಕಾರ ದೊರೆಯುತ್ತದೆ ಎಂದರು.
ಖಾನಟ್ಟಿಯ ಬಸವಾನಂದ ಸ್ವಾಮೀಜಿ ಹಾಗೂ ಶರಣೆ ನಾಗನೂರಿನ ಕಾವ್ಯಶ್ರೀ ಅಮ್ಮನವರು ಮಾತನಾಡಿದರು.
ಸಾಧಕರಿಗೆ ಸನ್ಮಾನವನ್ನು ಮಾಡಿದರು.
ಶಿವಪುತ್ರಯ್ಯ ಮಠಪತಿ, ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದ ಆನಂದ ಢವಳೇಶ್ವರ ಇದ್ದರು.
ಬಸವರಾಜ ಸಸಾಲಟ್ಟಿ ನಿರೂಪಿಸಿದರು.