ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ರುವ ಶತಮಾನದ ಇತಿಹಾಸವುಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ.
1913 ರಲ್ಲಿ ಕಟ್ಟಲ್ಪಟ್ಟ ಈ ಶಾಲೆಯ ಅವ್ಯವಸ್ಥೆ ಬಗ್ಗೆ ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದರು.
ಬೆಳಿಗ್ಗೆ ಶಾಲಾ ಚಟುವಟಿಕೆ ನಡೆದರೆ , ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ಬೀಡಾಗಿದೆ. ಶಾಲಾ ಕೊಠಡಿಗಳು ಕುಸಿದು ಬೀಳುವ ಹಂತ ತಲುಪಿವೆ. ಈ ಶಾಲೆಯ ಕಂಪೌಂಡನ್ನು ಎಲ್ಲ ಕಡೆಯೂ ಕೊರೆಯಲಾಗಿದೆ. ಶಾಲಾ ಸಮಯದ ನಂತರ ಈ ಕಿಂಡಿಗಳಲ್ಲಿ ನುಗ್ಗುವ ಚರಿತ್ರಹೀನ ವ್ಯಕ್ತಿಗಳು ಶಾಲಾ ಆವರಣದಲ್ಲಿ ಮದ್ಯಪಾನ ,ಇಸ್ಪೀಟ್ ಆಟ ಆಡುತ್ತಿದ್ದಾರೆ. ಶಾಲಾ ಆವರಣದಲ್ಲಿ ಕಸಕಡ್ಡಿಗಳು, ಮದ್ಯದ ಖಾಲಿ ಬಾಟಲುಗಳು, ಹರಿದ ಇಸ್ಪೀಟು ಎಲೆಗಳು ಬಿದ್ದಿವೆ. ಹಲವು ಕೊಠಡಿಗಳಿಗೆ ಚಿಲಕಗಳೇ ಇಲ್ಲವಾಗಿದೆ ಎಂದು ಸದರಿ ಶಾಲೆಯ ಪರಿಸ್ಥಿತಿಯನ್ನು ಅವರು ದೂರಿನಲ್ಲಿ ವಿವರಿಸಿದ್ದರು.
ಇಂತಹ ಪುರಾತನ ಕನ್ನಡ ಶಾಲೆಗಳ ಉಳಿವಿನ ಬಗ್ಗೆಯೂ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನ ಹರಿಸಬೇಕು.ಅಳಿವಿನ ಹಂತದಲ್ಲಿರುವ ಈ ಪುರಾತನ ಶಾಲೆಯ ಉಳಿವಿಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಆಗ್ರಹಪಡಿಸಿದ್ದರು.