ಮೈಸೂರು ಜಿಲ್ಲೆಯ ಕೆ.ಆರ್.ನಗರದ ಭಗತ್ ಯೂತ್ ಫೌಂಡೇಶನ್ ವತಿಯಿಂದ ಪ್ರೇಮಕವಿ ಕೆ.ಎಸ್.ನ.ಅವರ 107 ನೇ ಜನ್ಮದಿನಾಚರಣೆಯನ್ನು ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕೆ.ಎಸ್.ನ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡುವ ಮೂಲಕ ನಂತರ ಭಾವಚಿತ್ರದ ಮುಂದೆ ಮೋಂಬತ್ತಿಗಳನ್ನು ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.
ನಂತರ ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಮಾತನಾಡಿ, ಕವಿ ಕೆ.ಎಸ್.ನ. ಅವರು ಕಾವ್ಯರಸಿಕರ ಮನದಲ್ಲಿ ಭಾವಕವಿ,ಪ್ರೇಮಕವಿ ಎಂದೇ ಹೆಸರಾಗಿದ್ದಾರೆ. ಅವರ ಪ್ರೇಮಕವಿತೆಗಳು ಸುಂದರ ದಾಂಪತ್ಯ ಗೀತೆಗಳಾಗಿವೆ. ಇವುಗಳಲ್ಲಿ ಎಲ್ಲಿಯೂ ಅಶ್ಲೀಲತೆಯ ಸೋಂಕಿಲ್ಲ.ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆ ಕವನ ಸಂಕಲನವು ಪ್ರೇಮಕವಿತೆಗಳ ಲೋಕದಲ್ಲಿ ಓದುಗರಿಗೆ ಮಹಾ ಕಾವ್ಯವಾಯಿತು.ಸುಮಾರು ೩೨ ಬಾರಿ ಪುನರ್ ಮುದ್ರಣವಾಗಿ ಜಾಗತಿಕ ದಾಖಲೆ ಸ್ಥಾಪಿಸಿದೆ. ೧೯೯೫ ರಲ್ಲಿ ಪಂಪಪ್ರಶಸ್ತಿ, ೧೯೯೦ ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರ ಸಾಹಿತ್ಯ ರಚನೆಗೆ ದೊರೆತ ಗೌರವ ಎಂದು ವಿವರಿಸಿದರು.
ಭಗತ್ ಸಿಂಗ್ ಯೂತ್ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಹಾಗೂ ಖಜಾಂಚಿ ಕೃಷ್ಣಯ್ಯ ಪ್ರೇಮಕವಿ ಕೆ.ಎಸ್.ನ. ಅವರ ಬದುಕು ಹಾಗೂ ಬರಹಗಳ ಬಗ್ಗೆ ಮಾತನಾಡಿದರು..
ಫೌಂಡೇಶನ್ ಪದಾಧಿಕಾರಿಗಳಾದ ಕುಮಾರ್, ಬಸವರಾಜು, ರಾಘವೇಂದ್ರ, ಅಮಿತ್,ರಾಜೇಶ್ ,ಸುದೀಪ್ ,ಪ್ರಮೋದ್,ಆದಿ,
ಕಿರಣ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.