ವಿಶ್ವಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುವ ಬೂಕರ್ ಪ್ರಶಸ್ತಿಗೆ ಕನ್ನಡದ ಖ್ಯಾತ ಕತೆಗಾರ್ತಿ ಬಾನುಮುಷ್ತಾಕ್ ಅವರ ಕಥಾಸಮಕಲನವೊಂದು ಆಯ್ಕೆಯಾಗಿರುವುದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವಂತಹ ವಿಚಾರ. ಲಂಡನ್ನಿನಲ್ಲಿ ನಿನ್ನೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಬಾನು ಮುಷ್ತಾಕ್ ಅವರ ಕನ್ನಡ ಸಣ್ಣಕತೆಗಳನ್ನು ದೀಪಾ ಭಸ್ತಿ ಅವರು ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದು “ಹಾರ್ಟ್ ಲ್ಯಾಂಪ್” ಎಂಬ ಹೆಸರಲ್ಲಿ ಪ್ರಕಟವಾಗಿದೆ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಸಂಪದ್ಭರಿತ ಸುಂದರ ಭಾಷೆ ಮತ್ತು ಸಾಹಿತ್ಯವನ್ನು ಹೊಂದಿರುವ ಕನ್ನಡವನ್ನು ಲಿಪಿಗಳ ರಾಣಿ ಎಂದು ಸಂತ ವಿನೋಬಾ ಭಾವೆಯವರೇ ಬಣ್ಣಿಸಿದ್ದುಂಟು. ಅಖಿಲ ಭಾರತ ಮಟ್ಟದಲ್ಲಿ ಕನ್ನಡದ ಎಂಟು ಜನ ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿಯ ಗೌರವವನ್ನೂ ಪಡೆದಿದ್ದಾರೆಂಬುದು ಇಲ್ಲಿ ಸ್ಮರಣಾರ್ಹ.
ಬೇಂದ್ರೆ, ಕುವೆಂಪು, ಮಾಸ್ತಿ, ವಿ. ಕೃ. ಗೋಕಾಕ, ಶಿವರಾಮ ಕಾರಂತರಂತಹ ಮಹಾನ್ ಸಾಹಿತಿಗಳು ವಿಶ್ವದರ್ಜೆಯ ಬರಹಗಾರರು. ಆದರೆ ಬೇರೆ ಬೇರೆ ಕಾರಣಗಳಿಂದ ಕನ್ನಡ ಸಾಹಿತ್ಯ ಈವರೆಗೆ ನೋಬೆಲ್ ಸಾಹಿತ್ಯ ಪ್ರಶಸ್ತಿಯಿಂದ ವಂಚಿತವಾಗಿರುವುದು ಬೇಸರದ ವಿಷಯ. ಆ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆಯೂ ಕನ್ನಡಕ್ಕಿದ್ದೇ ಇದೆ. ಈಗ ಬೂಕರ್ ಪ್ರಶಸ್ತಿಗೆ ಕನ್ನಡದ ಬರಹಗಾರ್ತಿಯೊಬ್ಬರನ್ನು ಗುರುತಿಸಿ ಆಯ್ಕೆ ಮಾಡಿರುವುದು ಸಂತಸದ ಮತ್ತು ಅಭಿಮಾನದ ಸಂಗತಿ. ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು. ಕರ್ನಾಟಕದ ಹಾಸನದವರಾದ ಬಾನು ಮುಷ್ತಾಕ ಅವರು ಮುಸ್ಲಿಂ ಸಂವೇದನೆಯ ಕತೆಗಳಿಗೆ ಪ್ರಸಿದ್ಧರು. ಅವರ ಹಸೀನಾದಂತಹ ಕತೆ ಗಿರೀಶ ಕಾಸರವಳ್ಳಿಯವರಂತಹ ಮಹಾನ್ ಪ್ರತಿಭಾವಂತ ನಿರ್ದೇಶಕರಿಂದ ಚಲನಚಿತ್ರವಾಗಿ ಬೆಳ್ಳಿ ತೆರೆಗೆ ಬಂದಿದೆಯಲ್ಲದೆ ರಾಷ್ಟ್ರೀಯ ಪ್ರಶಸ್ತಿಗೂ ಪಾತ್ರವಾಗಿದೆ.
ಕನ್ನಡದಲ್ಲಿ ಶ್ರೇಷ್ಠ ಬರಹಗಾರರಿಗೆ , ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಬರಗಾಲವಿಲ್ಲ. ಸಾಕಷ್ಟು ಸಮೃದ್ಧವಾದ ಸಾಹಿತ್ಯ ರಚನೆ ಆಗಿದೆ. ಆದರೆ ದುರ್ದೈವದ ಸಂಗತಿ ಎಂದರೆ ಸಂಸ್ಕಾರಹೀನ ರಾಜಕಾರಣಿಗಳಿಂದಾಗಿ ಇಂದು ಕರ್ನಾಟಕದಲ್ಲಿ ಪುಸ್ತಕೋದ್ಯಮ ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ. ಗ್ರಂಥಾಲಯ ವ್ಯವಸ್ಥೆ ಹದಗೆಟ್ಟುಹೋಗಿದೆ. ಬರಹಗಾರರಿಗೆ ಸೂಕ್ತ ಪ್ರೋತ್ಸಾಹವಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಒಂದು ಬಗೆಯ ನಿರಾಶಾದಾಯಕ ವಾತಾವರಣ ನಿರ್ಮಾಣವಾಗಿದೆ. ಇದು ಬೇಸರದ ವಿಚಾರ. ಸಾಹಿತ್ಯ ಸಂಸ್ಕೃತಿ ಕ್ಷೇತ್ರಗಳ ಬೆಳವಣಿಗೆಗೆ ಸರಕಾರ ಸರಿಯಾದ ಉತ್ತೇಜನ ನೀಡಬೇಕಾಗಿದೆ.
ಎಲ್ ಎಸ್ ಶಾಸ್ತ್ರಿ, ಬೆಳಗಾವಿ