ಮೂಡಲಗಿ: ಕೆಲ ವರ್ಷಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅಣ್ಣನಿಗೆ ತಮ್ಮನೇ ಕಿಡ್ನಿ ದಾನ ಮಾಡಿರುವ ಅಪರೂಪದ ಘಟನೆ ಅರಭಾವಿ ಕ್ಷೇತ್ರದಲ್ಲಿ ನಡೆದಿದ್ದು ಕ್ಷೇತ್ರದ ಕಾಂಗ್ರೆಸ್ ನಾಯಕ ಅರವಿಂದ ದಳವಾಯಿ ಕುಟುಂಬದ ಎಲ್ಲರಿಗೂ ಮಾದರಿಯಾಗಿದೆ.
ಕೆಪಿಸಿಸಿ ಸದಸ್ಯ ಹಾಗೂ ೨೦೨೩ ರ ವಿಧಾನಸಭಾ ಚುನಾವಣೆಯ ಅರಭಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅರವಿಂದ್ ದಳವಾಯಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಅವರ ಸಹೋದರ ಅನಿಲ ಕುಮಾರ್ ದಳವಾಯಿ ತಮ್ಮ ಒಂದು ಕಿಡ್ನಿ ದಾನ ಮಾಡುವ ಮೂಲಕ ಅಣ್ಣನಿಗೆ ಮೂತ್ರಪಿಂಡ ಕಸಿ ಮಾಡಿಸಲು ನೆರವಾಗಿದ್ದಾರೆ. ಅರವಿಂದ್ ದಳವಾಯಿ ಅವರಿಗೆ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಮಾಡಿಸಲಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.
ತಮ್ಮ ಸಹೋದರ ತಮಗೆ ಕಿಡ್ನಿ ದಾನ ಮಾಡಿದ ಬಗ್ಗೆ ಹೇಳಿಕೊಂಡ ಅರವಿಂದ ದಳವಾಯಿಯವರು ತಾವಿಬ್ಬರೂ ಈಗ ಆರೋಗ್ಯವಾಗಿ ಇರುವುದಾಗಿ ಹೇಳಿ ತಮಗೆ ಶುಭ ಹಾರೈಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.