ಬೀದರ – ಬೀದರ್ ನಲ್ಲಿ ಕಳ್ಳರಿಬ್ಬರು ಬೈಕ್ ನಲ್ಲಿ ಬಂದು ಮಹಿಳೆಯ ಚಿನ್ನದ ಸರ ಕದ್ದು ಎಸ್ಕೇಪ್ ಆಗುವ ವಿಡಿಯೋ CCTV ಕ್ಯಾಮರಾ ದಲ್ಲಿ ಸೆರೆಯಾಗಿದ್ದು ನಗರದಲ್ಲಿ ಆತಂಕ ಮೂಡಿಸಿದೆ.
ಅಂಗಡಿಯಿಂದ ಹಾಲು ತೆಗೆದುಕೊಂಡು ಬರುವಾಗ ಸರಗಳ್ಳರು ಮಹಿಳೆಯ ಸರ ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಘಟನೆ ಬೀದರ್ ನ ಪ್ರತಾಪ್ ನಗರದಲ್ಲಿ ನಡೆದಿದೆ. ಕೊರಳಲ್ಲಿನ ಸರವನ್ನು ಖದೀಮರು ಜಗ್ಗಿದ ರಭಸಕ್ಕೆ ದೊಪ್ಪನೆ ನೆಲಕ್ಕೆ ಬಿದ್ದ ಮಹಿಳೆಗೆ ಗಾಯಗಳಾಗಿದ್ದು ಕರುಣೆಯೇ ಇಲ್ಲದ ಆ ಕಳ್ಳರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ ಬೀದರ್ ನಲ್ಲಿ ಸರಗಳ್ಳರ ಹಾವಳಿಗೆ ಮಹಿಳೆಯರು ಬೆಚ್ಚಿ ಬಿದ್ದಿದ್ದು ಹೀಗಾದರೆ ಮಹಿಳೆಯರು ಒಂಟಿಯಾಗಿ ತಿರುಗಾಡುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.
ಶ್ರೀದೇವಿ ಎಂಬುವವರ ಚಿನ್ನದ ಸರ ಕದ್ದು ಖದೀಮರು ಎಸ್ಕೇಪ್ ಆಗುವ ವಿಡಿಯೋ ಭಯಾನಕವಾಗಿದ್ದು ಸರ ಎಗರಿಸುವ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಮಹಿಳೆಯರು ಮನೆಯಿಂದ ಹೊರಗಡೆ ಬರಲು ಭಯ ಬೀಳುವಂತಾಗಿದೆ. ಗಂಭೀರ ಗಾಯವಾದ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ