ಹುನಗುಂದ : ಬಾದಾಮಿ ಚಾಲುಕ್ಯರ ರಾಜ ಲಾಂಛನ, ವರಾಹ ತಾಲೂಕಿನ ಅಮೀನಗಡ ಪಟ್ಟಣದ ಸಂಗಮೇಶ್ವರ ದೇವಾಲಯ ಮುಖ ಮಂಟಪದ ಕಂಬದ ಮೇಲೆ ಪತ್ತೆಯಾಗಿದೆ.
ಸಂಗಮೇಶ್ವರ ದೇವಾಲಯದ ಪತ್ತೆಯಾದ ಚಾಲುಕ್ಯರ ಲಾಂಛನ ವೀಕ್ಷಿಸಲು ರವಿವಾರ ಆಗಮಿಸಿದ ಭಾರತ ಪುರಾತತ್ತ್ವ ಇಲಾಖೆಯ ಹೈದರಾಬಾದ್ ವಲಯದ ಉಪ ಪುರಾತತ್ತ್ವ ಅಧೀಕ್ಷಕ ಡಾ: ಎಚ್.ಆರ್ ದೇಸಾಯಿ ಭೇಟಿ ನೀಡಿ, ಚಾಲುಕ್ಯರ ವೈಷ್ಣವ ಧರ್ಮದ ನಂಬಿಕೆ,ರಾಜಕೀಯ ಶಕ್ತಿ, ಧಾರ್ಮಿಕ ನಂಬಿಕೆ ಮತ್ತು ಆರ್ಥಿಕ ಸಮೃದ್ಧಿಯನ್ನು ತಂದುಕೊಟ್ಟ ಅತ್ಯಂತ ಪವಿತ್ರವಾದ ರಾಜಲಾಂಛನ ಐಹೊಳೆಯಲ್ಲಿ ಮಾತ್ರ ಇದ್ದು, ಇಲ್ಲಿ ಪತ್ತೆಯಾಗಿದ್ದು ವಿಶೇಷ ಸಂಗತಿ ಎಂದರು.
ಸಂಗಮನಾಥ ದೇವಾಲಯ ಪುರಾತನವಾಗಿದ್ದು, ಚಾಲುಕ್ಯರ ಕಾಲದ ನಾಲ್ಕು ಕಂಬಗಳು, ಅದರಲ್ಲಿ ಎರಡು ಕಂಬಗಳನ್ನು ಭಾರವಾಹಕರು ಕಂಬದ ಮೇಲ್ಭಾಗದಲ್ಲಿ, ಚಾವಣಿಯ ಭಾರ, ತಮ್ಮ ಕೈಗಳಿಂದ ಎತ್ತಿ ಹಿಡಿದಿರುವ ಕೆತ್ತನೆ, ಬಾದಾಮಿಯ ಗುಹಾಂತರ , ಪಟ್ಟದಕಲ್ಲಿನ ದೇವಾಲಯಗಳಲ್ಲಿ ಕಾಣಸಿಗುತ್ತವೆ.
ವಿಶೇಷವಾಗಿ ಚಾಲುಕ್ಯರ ಕಾಲದ ರಾಜ ಲಾಂಛನ ಪತ್ತೆಯಾಗಿದ್ದು ಮಹತ್ತರ ಅಂಶವಾಗಿದೆ, ಐಹೊಳೆ ಲಾಡಖಾನ ದೇವಾಲಯ ಬಿಟ್ಟರೆ ಚಾಲುಕ್ಯರ ರಾಜ ಲಾಂಛನ ವರಹ ಕಾಣ ಸಿಗುವುದಿಲ್ಲ ಅಂತಹ ಅಪರೂಪದ ಕುರುಹ ಅಮೀನಗಡದ ದೇವಾಲಯದ ಮುಖ್ಯದ್ವಾರದ ಕಂಬದಲ್ಲಿ ದೊರೆತಿದ್ದು ,ಇತಿಹಾಸದ ಕುತೂಹಲಕಾರಿ ಅಂಶವಾಗಿದೆ.
ನಾಲ್ಕು ಕಂಬಗಳು, ಉಬ್ಬು ಶಿಲ್ಪಗಳು,ಪೂರ್ವದಲ್ಲಿ ಗರುಡ ಲಾಂಛನ, ಕಾರ್ತಿಕೇಯ ನವಿಲು ಮೇಲೆ ಕುಳಿತಿರುವ ಶಿಲ್ಪ ಸೇರಿದಂತೆ ಅನೇಕ ಶಿಲ್ಪಗಳನ್ನು ಇಲ್ಲಿ ಕಾಣಬಹುದು, ಈ ದೇವಾಲಯದ ಮುಖ ಮಂಟಪ ಮಾತ್ರ ಬದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ್ದು, ಕಾಲಾಂತರದಲ್ಲಿ ಜೀರ್ಣೋದ್ಧಾರ ಆಗಿರುವ ಕುರುಹು ಕಾಣಸಿಗುತ್ತವೆ.
ಈ ಬಗ್ಗೆ ಇನ್ನಷ್ಟು ಸಂಶೋಧನೆ ಆಗಬೇಕಾಗಿದೆ ,ಜೊತೆಗೆ ಸ್ಥಳೀಯ ಸಹಕಾರ ದೊರತರೆ ಅಮೀನಗಡದ ಇತಿಹಾಸ ಬದಲಾಗಲಿದೆ ಎಂದು ಡಾ. ಎಚ್.ಆರ್ ದೇಸಾಯಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಶೋಧಕ , ಶಿಕ್ಷಕ ಮಲ್ಲಿಕಾರ್ಜುನ ಸಜ್ಜನ, ಡಾ. ಪ್ರಮೋದ ಮಠಪತಿ, ವೀರಣ್ಣ ಹಿರೇಮಠ ಇತರರು ಇದ್ದರು.

