ಸಿಂದಗಿ; ಸೃಜನಶೀಲ ಸಾಹಿತ್ಯಿಕ ಕೃತಿಗಳು, ನಾಟಕ, ಕಾವ್ಯ, ವೈಚಾರಿಕ ಬರಹಗಳ ಮೂಲಕ ಸಮಾನತೆ ಸೌಹಾರ್ದತೆ ಸಾಮಾಜಿಕ ಬದಲಾವಣೆಗಳ ಆಶಯ ಪ್ರತಿಪಾದಿಸಿದ ಚಂದ್ರಶೇಖರ ಪಾಟೀಲ ಅವರ ಸಾವು ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಗಣಿಹಾರದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಸಂಜೀವಕುಮಾರ ಬುಲ್ ಬುಲೆ ಹೇಳಿದರು.
ತಾಲೂಕಿನ ಗಣಿಹಾರದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಯೋಗದಲ್ಲಿ ನಡೆದ ಚಂದ್ರಶೇಖರ್ ಪಾಟೀಲ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಚಂಪಾ ಅವರದು ಬಹುಮುಖ ವ್ಯಕ್ತಿತ್ವ ಮತ್ತು ಕ್ರಿಯಾಶೀಲತೆ, ಅವರ ಬದುಕಿನುದ್ದಕ್ಕೂ ಸಾಂದರ್ಭಿಕ ಸನ್ನಿವೇಶಗಳಲ್ಲಿ ಸಕ್ರಿಯವಾಗಿದ್ದವರು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸಿ ಎಂ ಮೇತ್ರಿ ಮಾತನಾಡಿ ಚಂಪಾ ಅವರ ಕಾವ್ಯ ಖಂಡಿತವಾಗಿ ಖಡ್ಗ ವಾಗಿತ್ತು. ವ್ಯಂಗ್ಯ ಅವರ ಕಾವ್ಯದ ಸ್ಥಾಯಿ ಭಾವದಂತೆ ಕಂಡರೂ ಅದರಲ್ಲಿ ವೈಚಾರಿಕತೆ ಇತ್ತು ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿ, ಚಂಪಾ ತಾವು ಮಾತ್ರ ಹೆಮ್ಮರವಾಗಿ ಬೆಳೆಯಲಿಲ್ಲ, ಪ್ರಗತಿಪರ ಚಿಂತಕರ ಪಡೆಯನ್ನು ಬೆಳೆಸಿದ್ದಾರೆ. ಅವರು ತಮ್ಮ ನಿರಂತರ ಚಿಂತನೆ ಚಳವಳಿಗಳಿಂದ ವಿಶ್ರಾಂತಿ ಪಡೆದಿದ್ದಾರೆ. ಅಲ್ಲದೇ ಕನ್ನಡದ ನೆಲ-ಜಲ ಸಂಸ್ಕೃತಿ ಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಗುರುಮಾತೆ ಎಸ್ ಎಮ್ ಮಸಳಿ ಐಶ್ವರ್ಯ ಬೊಮ್ನಳ್ಳಿ ಮಾತನಾಡಿದರು. ಶಿಕ್ಷಕರಾದ ಆರ್ ಎಸ್ ಬಿರಾದಾರ, ಎಚ್ ವಿ ಮುಲ್ಲಾ, ಡಿ ಎಂ ಮಾವೂರ, ರೋಹಿತ, ಎಂ ಡಿ ಕೆರ್ಕಿ, ಅಬ್ದುಲ್ ಸಾಹೇಬ ದೇವರಮನಿ, ಶಬಾನಾ ಪಾಟೀಲ, ಶಬಾನಾ ನದಾಫ, ಕಾವೇರಿ ಚೌದ್ರಿ, ಲಕ್ಷ್ಮಿ ಕೋರಿ, ಪ್ರೀತಂ ಬಂದಾಳ,ನೀಲಮ್ಮ ಬೂದಿಹಾಳ, ದಾವಲ್ ಮಲಿಕ, ನಾಗೇಶ ಕುಂಬಾರ,ರಂಜಿತಾ ಬೂದಿಹಾಳ, ಪ್ರತಿಭಾ ಅಮ್ಮಾಗೋಳ, ಗೌರಾಬಾಯಿ ಸುಣಗಾರ, ಚಂದ್ರಕಾಂತ ಚಿನಮಳ್ಳಿ,ಪ್ರೀತಮ ಕುಂಬಾರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.