ಮೂಡಲಗಿ: ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಇರುವ ಶಿಕ್ಷಣ ಪದ್ಧತಿ ಹಾಗೂ ಸಿಬ್ಬಂದಿಗೆ ಬದಲಾಗುತ್ತಿರುವ ಸನ್ನಿವೇಶಗಳನ್ನು ಅರ್ಥೈಸಿಕೂಂಡು ಮತ್ತು ಅವರಿಗೆ ತರಬೇತಿ ನೀಡಿ ಸಿದ್ಧಗೊಳಿಸುವದು ಅತಿ ಅವಶ್ಯಕವಾಗಿದೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಿ.ವ್ಹಿ.ನಾಗರಾಜ ಹೇಳಿದರು.
ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಮೂಡಲಗಿ ನಗರ ಸಹಕಾರ ಒಕ್ಕೂಟ ಸಹಯೋಗದಲ್ಲಿ ಜರುಗಿದ ಜಿಲ್ಲಾ ಮಟ್ಟದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಡಿಜಿಟಲಿಕರಣ, ಹಣಕಾಸಿನ ವ್ಯವಸ್ಥೆಗೆ ಸಹಕಾರಿ ಸಂಸ್ಥೆಗಳು ಹೊಂದಿಕೊಳ್ಳುವುದರ ಮೂಲಕ ಸಪ್ತಾಹದ ಮುಖ್ಯ ಧ್ಯೇಯವಾದ 5 ಟ್ರಿಲಿಯನ್ ಡಾಲರ ಅರ್ಥಿಕ ಸಾಧನೆಯಲ್ಲಿ ಸಹಕಾರ ಸಂಘಗಳ (ಸಂಸ್ಥೆಯ) ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುವುದು ಅತಿ ಅವಶ್ಯ. ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಸಮನ್ವಯದೊಂದಿಗೆ ಕೆಲಸ ಮಾಡಿ ಸುಸ್ಥಿರವಾಗಿ ಅಭಿವೃದ್ಧಿ ಹೊಂದ ಬೇಕಾಗಿದೆ. ಇದರೊಂದಿಗೆ ಸಂಸ್ಥೆಯ ಎಲ್ಲಾ ಸದಸ್ಯರನ್ನು ಅರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಸಬಲರನ್ನಾಗಿ ಮಾಡಿ ಅವರ ಜೀವನ ಮಟ್ಟವನ್ನು ಎತ್ತರಿಸಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳ ನಿರ್ದೇಶಕರಾದ ಡಾ.ಸಂಜಯ ಹೊಸಮಠ, ಉಮೇಶ ಬಾಳಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಟ್ಟಣದ ಶ್ರೀ ಜಗದ್ಗುರು ಪಂಚಾಚಾರ್ಯ ವಿ.ಉ.ಸ.ಸಂಘದ ಅಧ್ಯಕ್ಷ ಮಹೇಶ ಹಿರೇಮಠ ವಹಿಸಿದ್ದರು.
ಸಮಾರಂಭ ವೇದಿಕೆಯಲ್ಲಿ ದಿ.ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಸನಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳ ನಿರ್ದೇಶಕ ತಮ್ಮಣ್ಣ ಕೆಂಚರಡ್ಡಿ, ದಿ.ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಬಸವರಾಜ ಸಂತಿ, ಗುರುನಾಥ ಕಂಕಣವಾಡಿ, ಕುರುಹಿನಶೆಟ್ಟಿ ಸೊಸಾಯಿಟಿ ನಿರ್ದೇಶಕ ಸುಭಾಷ ಬೆಳಕೂಡ ಉಪಸ್ಥಿತರಿದ್ದರು.
ಸಮಾರಂಭದ ಮೂಡಲಗಿ ಪಟ್ಟಣ ಮತ್ತು ತಾಲೂಕಿನ ವಿವಿಧ ಸಹಕಾರ ಸಂಘಗಳ ಅಧ್ಯಕ್ಷ-ಉಪಾಧ್ಯಕ್ಷ, ನಿರ್ದೇಶಕರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿವರ್ಗದವರು ಭಾಗವಹಿಸಿದರು
ಜಿಲ್ಲಾ ಸಹಕಾರ ಯೂನಿಯನ್ ಶಿಕ್ಷಕ ಎಸ್.ಎನ್.ಯಡಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತನ್ಯ ಅರ್ಬನ್ ಸೊಸಾಯಿಟಿ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಬಿಜಗುಪ್ಪಿ ಸ್ವಾಗತಿಸಿ ನಿರೂಪಿಸಿದರು.