ಧಾರವಾಡ : ವೆಟ್ರನ್ ಅಥ್ಲೆಟಿಕ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಬಳ್ಳಾರಿಯ ವೆಟ್ರನ್ ಅಥ್ಲೆಟಿಕ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬಳ್ಳಾರಿ ನಗರದಲ್ಲಿ ಜರುಗಿದ 45ನೆಯ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇಲ್ಲಿಯ ಚೆನ್ನಬಸವೇಶ್ವರನಗರ ನಿವಾಸಿ, 74 ವರ್ಷದ ನಿವೃತ್ತ ಅಧ್ಯಾಪಕಿ ಚೆನ್ನಮ್ಮ ಹೆಡೆ ಬೈಲೂರ ಅವರು 2 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
70 ವರ್ಷ ಮೇಲ್ಪಟ್ಟ ವಯೋಮಾನದವರ ತೀವ್ರ ನಡಿಗೆ ಸ್ಪರ್ಧೆಯಲ್ಲಿ 3 ಕಿ.ಮೀ. ಅಂತರವನ್ನು 32 ನಿಮಿಷ 7.5 ಸೆಕೆಂದುಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. 65 ವರ್ಷ ಮೇಲ್ಪಟ್ಟ ವಯೋಮಾನದವರ ಮಿಕ್ಸಡ ಡಬಲ್ಸ್ 4X100 ಮೀಟರ್ ರಿಲೆ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದ್ದಾರೆ. 70 ವರ್ಷ ಮೇಲ್ಪಟ್ಟ ವಯೋಮಾನದವರ ಕಬ್ಬಿಣ ಗುಂಡು ಎಸೆತ ಸ್ಪರ್ಧೆಯಲ್ಲಿ ಹಾಗೂ ಸರಪಳಿಯುಕ್ತ ಕಬ್ಬಿಣ ಗುಂಡು ಎಸೆತ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 30ವರ್ಷ ವಯೋಮಾನದ ಹುಡುಗಿಯರ ಜೊತೆ 4X100 ಮೀಟರ್ ರಿಲೆ ಸ್ಪರ್ಧೆಯಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ತಾವು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಮೇಲಾಟಗಳಲ್ಲಿ ಆಸಕ್ತಿ ಹೊಂದಿದ್ದು, ಪ್ರಸ್ತುತ 74ರ ಇಳಿವಯಸ್ಸಿನಲ್ಲಿಯೂ ಉತ್ಸಾಹ ಕಳೆದುಕೊಳ್ಳದೇ ಆಟವಾಡಿ ಚಿನ್ನವನ್ನೇ ಬಾಚಿಕೊಳ್ಳಬೇಕೆಂದು ಸಂಕಲ್ಪಿಸಿ, ಆ ದಿಸೆಯಲ್ಲಿ ಕ್ರೀಡಾ ಬದ್ಧತೆ ಹೊಂದಿ ಶ್ರಮಿಸಿ ವಿಜಯಶಾಲಿ ಆಗುತ್ತಿದ್ದೇನೆ ಎಂದು ಚೆನ್ನಮ್ಮ ಹೆಡೆ ಬೈಲೂರ ತಮ್ಮ ಕ್ರೀಡಾ ಸಾಧನೆಯನ್ನು ಹಂಚಿಕೊಳ್ಳುತ್ತಾರೆ.
ಗುರುಮೂರ್ತಿ ವೀ. ಯರಗಂಬಳಿಮಠ

