Homeಸುದ್ದಿಗಳು'ದತ್ತಿನಿಧಿ ಕಾರ್ಯಕ್ರಮ' ಮತ್ತು 'ಸಮಾಗಮ' ಕೃತಿ ಬಿಡುಗಡೆ : ಅಕ್ಷರಗಳು ಅಕ್ಷಯವಾಗಿ ಉಳಿಯಲಿ, ಸಾಹಿತ್ಯ ಬೆಳೆಯಲಿ....

‘ದತ್ತಿನಿಧಿ ಕಾರ್ಯಕ್ರಮ’ ಮತ್ತು ‘ಸಮಾಗಮ’ ಕೃತಿ ಬಿಡುಗಡೆ : ಅಕ್ಷರಗಳು ಅಕ್ಷಯವಾಗಿ ಉಳಿಯಲಿ, ಸಾಹಿತ್ಯ ಬೆಳೆಯಲಿ. ಡಾ. ಗುರುದೇವಿ ಹುಲೆಪ್ಪನವರಮಠ

ಬೆಳಗಾವಿ – ದಿ.7 ರಂದು ಶುಕ್ರವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದಿ. ವಿಶ್ವನಾಥ ಬ್ಯಾಕೋಡ ಮತ್ತು ದಿ. ಕಂಪಾ ಸೋಮಶೇಖರರಾವ್ ರವರ ಸ್ಮರಣಾರ್ಥ ‘ದತ್ತಿನಿಧಿ ಕಾರ್ಯಕ್ರಮ’, ಮತ್ತು 16 ಸಾಹಿತಿಗಳಿಂದ ವಿರಚಿತ ‘ಸಮಾಗಮ ‘ಕೃತಿ ಬಿಡುಗಡೆ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೋಳ್ಳಿ ಮಾತನಾಡಿ, ದತ್ತಿ ದಾನಿಗಳ ಪ್ರೋತ್ಸಾಹದಿಂದ ಸಾಹಿತ್ಯಿಕ ಚಟುವಟಿಕೆಗಳಿಗೆ ಮೆರಗು ಬರುತ್ತಿದೆ. ದತ್ತಿ ದಾನಿಗಳಾದ ಜಯಶೀಲ ಬ್ಯಾಕೋಡ ಮತ್ತು ಕೀರ್ತಿ ಕಾಸರಗೋಡು ಸಾಹಿತ್ಯವನ್ನು ಪ್ರೋತ್ಸಾಹಿಸುವುದರ ಜೊತೆಗೆ ವಿನೂತನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರಣೆ ನೀಡುತ್ತಾ ನಮ್ಮ ಸಂಘಕ್ಕೆ ಮಾರ್ಗದರ್ಶಿಯಾಗಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಾಹಿತಿ ಆಶಾ ಕಡಪಟ್ಟಿ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಸಾಹಿತ್ಯ ಲೋಕ ಬೆಳೆಯಲು ಲೇಖಕಿಯರ ಸಂಘ ನೀರೆರೆದು ಪೋಷಿಸುತ್ತಿದೆ , ಸಂಘದಿಂದ ಕ್ರಿಯಾತ್ಮಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲೆಯ 16 ಉದಯೋನ್ಮುಖ ಕವಯಿತ್ರಿಯರು ರಚಿಸಿದ ‘ಸಮಾಗಮ’ ಕೃತಿಯನ್ನು ವೇದಿಕೆಯ ಗಣ್ಯರು ಲೋಕಾರ್ಪಣೆ ಗೊಳಿಸಿದರು.ಬೆಳಗಾವಿ ಜಿಲ್ಲಾ ಕ.ಸಾ.ಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಉದಯೋನ್ಮುಖ ರಿಂದ ಸಾಹಿತ್ಯ ಬೆಳೆಯಲಿ. ಇನ್ನಷ್ಟು ಕವಯಿತ್ರಿಯರಿಗೆ ಪ್ರೇರಣೆಯಾಗಲಿ ಆ ನಿಟ್ಟಿನಲ್ಲಿ ಕ.ಸಾ.ಪ ವತಿಯಿಂದಲೂ ಪ್ರತಿ ತಿಂಗಳು ಯುವಕ-ಯುವತಿಯರಿಗೆ ಕವಿಗೋಷ್ಠಿ ಹಮ್ಮಿಕೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ ಇದರಿಂದ ಹತ್ತು ಹಲವು ಯುವ ಪ್ರತಿಭೆಗಳು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಗೊಳ್ಳಲು ಸಹಕಾರಿಯಾಗುವುದು ಎಂದರು.

ಕೃತಿ ಪರಿಚಯಿಸಿ ಮಾತನಾಡಿದ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ, ಸಮಾಗಮ ಕವನ ಗುಚ್ಛ ದಲ್ಲಿರುವ ಕವನಗಳಲ್ಲಿರುವ ಅಕ್ಷರಗಳು ಅಕ್ಷಯವಾಗಿ ಉಳಿಯಲಿ. ಅಮ್ಮನ ಕುರಿತು ಹೆಚ್ಚು ಕವನಗಳು ಮೂಡಿಬಂದಿರುವುದು ಹೆಮ್ಮೆ ಪಡುವಂತಹದ್ದು .ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ವಿಶೇಷವಾದದ್ದು. ಇಲ್ಲಿ ಲೇಖಕಿಯರು ತಮ್ಮ ಭಾವನೆಗಳನ್ನು ಭಾವಗೀತೆಗಳ ರೂಪದಲ್ಲಿ ರಚಿಸಿದ್ದು ಇಂತಹ ಹಲವಾರು ಕೃತಿಗಳು ತಮ್ಮ ಭಾವನಾಲಹರಿ ಯಲ್ಲಿ ಮೂಡಿಬಂದು ಸಾಹಿತ್ಯಕ್ಷೇತ್ರ ಬೆಳೆಯಲಿ ಎಂದರು.

ಇದೇ ಸಂದರ್ಭದಲ್ಲಿ ದತ್ತಿ ದಾನಿಗಳಾದ ಜಯಶೀಲಾ ಬ್ಯಾಕೋಡ ಮತ್ತು ಪತ್ರಕರ್ತರಾದ ಕೀರ್ತಿ ಕಾಸರಗೋಡು ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಹಿರಿಯ ಸಾಹಿತಿಗಳಾದ ಶಿ.ಗು ಕುಸುಗಲ್ ರವರನ್ನು ಅವರ ಸಾಹಿತ್ಯ ಕ್ಷೇತ್ರದ ವಿಶೇಷ ಸೇವೆಗಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಾಪ್ರಭಾ ಬೆಲ್ಲದ,ಹಿರಿಯ ಸಾಹಿತಿಗಳಾದ ಶಾಂತಾ ಮಸೂತಿ, ಶಾಲಿನಿ ಚಿನಿವಾಲರ, ಗೀತಾ ಚಿದಾನಂದ, ಸುಗಂಧಾ ಮೂಲಿಮನಿ, ಪ್ರಭಾ ಪಾಟೀಲ,ಅಕ್ಕಮಹಾದೇವಿ ಹುಲಗಬಾಳಿ, ಮಂಜುಳಾ ಕುಸುಗಲ್ಲ, ಸುಶೀಲಾ ಗುರವ,ಜಯಶ್ರೀ ನಿರಾಕಾರಿ, ಶ್ರೀರಂಗ ಜೋಶಿ, ಎಂ. ಪಿ. ಪಾಟೀಲ,ದೀಪಿಕಾ ಚಾಟೆ,ಎಂ ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಸಾಹಿತ್ಯಾಸಕ್ತರು ಲೇಖಕಿಯರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹಮೀದಾ ಬೇಗಂ ದೇಸಾಯಿ ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರ ಅತಿಥಿಗಳನ್ನು ಪರಿಚಯಿಸುವದರ ಜೊತೆಗೆ ದತ್ತಿನಿಧಿ ಹಿರಿಜೀವಿ ಕುರಿತು ಸ್ಮರಿಸಿ ಅವರ ಕುರಿತು ವಿವರಿಸಿದರು. ರಾಜನಂದಾ ಘಾರ್ಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಸುಧಾ ಪಾಟೀಲ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group