ಉ.ಕ. ಜನಸಂಗ್ರಾಮ ಪರಿಷತ್ ನಿಂದ ಚಿಂತನ ಮಂಥನ

Must Read

ಬೆಳಗಾವಿ:  ಕರ್ನಾಟಕ ಏಕೀಕರಣಕ್ಕಾಗಿ ಎಷ್ಟೋ ಜನ ಮಹನೀಯರು ತನುಮನಧನ ಗಳಿಂದ ದುಡಿದಿದ್ದಾರೆ. ಅವರ ನಿಸ್ವಾರ್ಥ ಸೇವೆ ಹಾಗೂ ಬೆವರಿನ ಬೆಲೆಯನ್ನು ಇಂದಿನ ಯುವ ಪೀಳಿಗೆ ತಿಳಿಯಬೇಕು. ಅಲ್ಲದೆ ಅಖಂಡ ಕರ್ನಾಟಕದ ಪರಿಕಲ್ಪನೆಯೊಂದಿಗೆ ಉತ್ತರ ಕರ್ನಾಟಕದ ಈ ಭಾಗವು ಸಹ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಮಗ್ರ ಅಭಿವೃದ್ಧಿಯನ್ನು ಹೊಂದಬೇಕಿದೆ ಎಂದು ಪ್ರೊ. ಎಸ್. ಬಿ. ಸೋಮಣ್ಣವರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಉತ್ತರ ಕರ್ನಾಟಕ ಜನ ಸಂಗ್ರಾಮ ಪರಿಷತ್ ನಿಂದ ಆಯೋಜಿಸಲಾಗಿದ್ದ ಚಿಂತನ-ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕ ಜನಸಂಗ್ರಾಮ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾ ವಿಭಜನೆ ಗಳಂತಹ ಸೂಕ್ಷ್ಮ ವಿಷಯಗಳು ನಮ್ಮಯ ಕೆಲ ರಾಜಕಾರಣಿಗಳಿಗೆ ಆಟಿಗೆ ವಸ್ತು ಆಗಿಬಿಟ್ಟಿದೆ, ಆದ್ದರಿಂದ ಆನೆ ನಡೆದಿದ್ದೇ ದಾರಿ ಹಾಗೂ ನಾವು ಆಡಿದ್ದೇ ಆಟ ಎಂಬಂತಹ ಹುಂಬತನಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂಬ ಟೀಕೆಗಳು ಪ್ರಜ್ಞಾವಂತರ ವಲಯದಿಂದ ಕೇಳಿಬರುತ್ತಿವೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಡೀ ಬೆಳಗಾವಿ ಜಿಲ್ಲೆಯನ್ನು ತುಂಡುತುಂಡಾಗಿಸಿ ಹತ್ತಕ್ಕಿಂತಲೂ ಹೆಚ್ಚು ಜಿಲ್ಲೆಗಳ ರಚನೆ ಬೇಡಿಕೆಯನ್ನು ಮುಂದಿಟ್ಟರು ಸಹ ಅಚ್ಚರಿ ಪಡಬೇಕಿಲ್ಲ ಎಂಬ ಟೀಕೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಹಾಗಾಗಿ ನಮ್ಮ ನಾಯಕರು ಇಂತಹ ಸೂಕ್ಷ್ಮ  ವಿಷಯಗಳ  ಬಗ್ಗೆ ಗಂಭೀರತೆಯನ್ನು ಕಾಯ್ದುಕೊಂಡು ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದರು.

ಸಮಾಜಸೇವಕ  ಸಿ. ವಿ. ಕಠಾಪುರಿಮಠ ಮಾತನಾಡಿ, ಗಡಿನಾಡು ಜಿಲ್ಲೆಯಲ್ಲಿ ಇನ್ನೂ ಆಗಬೇಕಿರುವ  ಅಭಿವೃದ್ಧಿಪರ ಕೆಲಸಗಳ ಬಗ್ಗೆ ಮಾಹಿತಿ ನೀಡಿ, ಈ ಬಗ್ಗೆ ಜನರಲ್ಲಿ ಸಹ ಜಾಗೃತಿಯನ್ನು ಮೂಡಿಸಬೇಕೆಂದು ಹೇಳಿದರು.

ಪತ್ರಕರ್ತರಾದ ಬಸವರಾಜ ಹೊಂಗಲ, ಭಗವಾನ ಮಾದರ, ಕಸಾಪ ಸದಸ್ಯ ನಿತಿನ ಮೆಣಸಿನಕಾಯಿ, ಅಪ್ಪು ಪ್ರತಿಷ್ಠಾನ ಅಧ್ಯಕ್ಷ ನಾಗಪ್ಪ ಕೊಪ್ಪದ, ಸಂಜಯ ದೇಸಾಯಿ, ಹೊಯ್ಸಳ ಸಂಸ್ಥೆ ಸದಸ್ಯ ಅನ್ವರ ದೇವಡಿ, ಸೇರಿದಂತೆ ಹಲವರು ಮಾತನಾಡಿ ಶಿಕ್ಷಣ, ಆರೋಗ್ಯ, ಕೃಷಿ , ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಪರಿಣಿತರಿಂದ ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದು ಅಭಿವೃದ್ಧಿ ಪರ ಚಟುವಟಿಕೆಗಳಲ್ಲಿ ಅವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಬಸವರಾಜ ಮಠಪತಿ ಪ್ರಾಸ್ತಾವಿಕ ಮಾತನಾಡಿ , ಸ್ವಾಗತಿಸಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group