Homeಲೇಖನಸ್ವಚ್ಛ ಭಾರತ್ ಹಚ್ಚೆ ದಿನ್ !

ಸ್ವಚ್ಛ ಭಾರತ್ ಹಚ್ಚೆ ದಿನ್ !

ಹಾಸನದ ಹಾಸ್ಯ ಲೇಖಕಿ ಸುಮಾ ರಮೇಶ ತಮ್ಮ ಹಚ್ಚೆ ದಿನ್ ಪುಸ್ತಕ ಕೊಟ್ಟು ತುಂಬಾ ದಿನಗಳೇ ಆಗಿದ್ದವು. ಯಾವಾಗ ಕೊಟ್ಟರೆಂಬುದೇ ಮರೆತುಹೋಗಿದೆ. ಮೊನ್ನೆ ಬೆಂಗಳೂರಿಗೆ ಹೊರಟೆ. ನನ್ನ ಪುಸ್ತಕ ರಾಶಿಯಲ್ಲಿ (ಎಷ್ಟೋ ಪುಸ್ತಕಗಳನ್ನು ಮಡದಿ ಪೇಪರ್..ಪೇಪರ್.. ಎಂದು ಕೂಗಿ ಬರುವ ಮಂದಿಗೆ ಮಾರಿ ಅದರ ಮೇಲೆ ಒಂದಿಷ್ಟು ದುಡ್ಡು ಕೊಟ್ಟು ಪಾತ್ರೆ, ಪ್ಲಾಸ್ಟಿಕ್ ಸಾಮಾನು ಕೊಳ್ಳುತ್ತಿರುತ್ತಾಳೆ) ಹಚ್ಚೆ ದಿನ್ ಹೆಕ್ಕಿ ತೆಗೆದು ಕೋಣನಕುಂಟೆ ಕ್ರಾಸ್ ತಲುಪಿದ ಆರು ಗಂಟೆ ಪಯಣದ ಹಾದಿಯ ಉದ್ದಕ್ಕೂ ಓದಿದೆ. ೩೨ ಹಾಸ್ಯ ಲೇಖನಗಳ ಸಂಕಲನ ಇದು. ನಿತ್ಯ ನಾವು ಕಾಣುವ ನೋಡುವ ವಸ್ತು ವಿಷಯ ಲೇಖಕಿಯ ಬರಹ ಕೌಶಲ್ಯದಿಂದ ನಾವೀನ್ಯತೆ ಪಡೆದಿವೆ.

ಮನುಷ್ಯನ ದೇಹಾರೋಗ್ಯ ಕಾಪಾಡಿಕೊಳ್ಳುವಲ್ಲಿ ನಾಲಿಗೆಯ ಪಾತ್ರ ಹಿರಿದು. ಅದನ್ನು ನಾವು ಹಿಡಿತದಲ್ಲಿ ಇರಿಸಿಕೊಳ್ಳದಿದ್ದರೆ ತಿಂದ ಆಹಾರದ ಭಾರ ಉದರದ ಮೇಲೆ ಬಿದ್ದು ಆಗುವ ಹಾನಿ ಸ್ಟೋರಿ ಹೀಗೆ ಆರಂಭ: ‘ಬಾಣಲೆಯಿಂದ ಬುರಬುರನೆ ಊದಿದ ಪೂರಿಗಳು ಸಾಗುವಿನೊಂದಿಗೆ ಬೆರೆತು ನಾಲಿಗೆಯ ಮುಲಾಖತ್‌ನೊಂದಿಗೆ ಹೊಟ್ಟೆಗೆ ಇಳಿದದ್ದೇ ತಿಳಿಯದಂತೆ ಸರತಿ ಸಾಲು ಸಾಗುತ್ತಿತ್ತು. ಖಾಸಗಿ ಬಸ್ಸಿನ ಕಂಡಕ್ಟರ್ ಬಂದವರನ್ನೆಲ್ಲಾ ಹತ್ತಿಸಿಕೊಂಡು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎಂದಂತೆ ಒಳ ನುಗ್ಗುತ್ತಿದ್ದ ಪೂರಿ ಎಂಬ ಪ್ಯಾಸೆಂಜರ್‌ಗಳನ್ನು ಶಕ್ತಿ ಮೀರಿ ಉದರ ಅಕಾಮಡೇಟ್ ಮಾಡಿ ಕೊನೆಗೆ ಕೈಚೆಲ್ಲಿತು.. ಎತ್ತಿಗೆ ಜ್ವರ ಎಮ್ಮೆಗೆ ಬರೆ ಎಂಬಂತೆ ರುಚಿಯ ಚಪಲ ನಾಲಿಗೆಯದ್ದಾದರೂ ಅದರ ಪರಿಣಾಮ ಎದುರಿಸುವುದು ಉದರ ಎಂಬುದನ್ನು ಎಲ್ಲಿಂದ ಎಲ್ಲಿಗೋ ಹೋಲಿಸಿ ಸೊಗಸಾಗಿ ನಿರೂಪಿಸುವುದೇ ಸೋಜಿಗ.

ಆಹಾರವನ್ನು ಅರಗಿಸುವ ಕಾರ್ಯವೇ ಕ್ಲಿಷ್ಟವೆನಿಸಿ ಉದರ ತಿಣುಕುತ್ತಿರುವಾಗ ಆಗಾಗ ಅಸೂಯೆ ಎಂಬ ಗೆಸ್ಸ್ ಅಪಿಯರೆನ್ಸ್ ಪ್ರತ್ಯಕ್ಷ. ಅದೇ ಹೊಟ್ಟೆಕಿಚ್ಚು. ಇದನ್ನು ಡಿವಿಜಿಯವರ ಕಗ್ಗದೊಂದಿಗೆ ವ್ಯಾಖ್ಯಾನಿಸಿ
ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್
ಹೊಟ್ಟೆ ತುಂಬಿದ ತೋಳ ಮಲಗೀತು: ನೀಂ ಪೆರರ
ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ

ಉದರವಾದರೋ ಮಸಾಲೆ ಮಿಶ್ರಿತ ಕ್ಷಾರಯುಕ್ತ ಅರೆಬರೆ ಅರೆಯಲ್ಪಟ್ಟ ಆಹಾರವನ್ನು ತನ್ನ ಸೀನಿಯರ್ ಜೂನಿಯರ್ ಕರುಳುಗಳೆಂಬ ಎರಡು ಇಲಾಖೆಗಳಲ್ಲಿ ಸಂಸ್ಕರಿಸಿ ಅದರಲ್ಲಿರುವ ಉತ್ತಮ ಅಂಶಗಳನ್ನು ಬಳಸಿ ತ್ರಿಮಲಗಳೆಂಬ ಸ್ಕ್ಯಾಪ್‌ಗಳನ್ನು ನಗರಸಭೆಯ ವಿಲೇವಾರಿಗೆ ಹಸಿಕಸ ಒಣಕಸವನ್ನು ಬೇರ್ಸಡಿಸಿದಂತೆ ಬೇರ್ಪ ಡಿಸಿ ದೇಹದೊಳಗಿನ ಅಯಾಯ ಇಲಾಖೆಗೆ ರವಾನಿಸಬೇಕು. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮ ಉದರದ ವಿವಿಧ ಅಂಗಗಳು ವರ್ಕ್ಲೋಡ್ ಹೆಚ್ಚಾಯಿತೆಂದು ಕಿರುಚುತ್ತಾ ಉಸಿರು ಬಿಡುತ್ತಿದ್ದರೆ.. ನೀವೇ ಊಹಿಸಿ ನಗು ಬಂದರೆ ನಕ್ಕುಬಿಡಿ.

ಎಂಬತ್ತರ ದಶಕದಲ್ಲಿ ಜಗತ್ತಿನ ಸುದ್ಧಿ ಸ್ವಾರಸ್ಯ ಅರಿಯಲು ದಿನಪತ್ರಿಕೆಗಳನ್ನು ಬಿಟ್ಟರೆ ಇದ್ದಿದ್ದು ರೇಡಿಯೋ. ಆಗ ರೇಡಿಯೋದಲ್ಲಿ ಬರುತ್ತಿದ್ದ ನಿರ್ಮಾ..ವಾಷಿಂಗ್ ಪೌಡರ್ ನಿರ್ಮಾ.. ಲೈಫ್ ಬಾಯ್ ಎಲ್ಲಿದೆಯೋ.. ಅಲ್ಲಿದೇ ಆರೋಗ್ಯ.. ಎಂಬ ಈ ಗೀತೆಗಳು ಬೆಳಗಿನ ವಾರ್ತೆಗಳ ನಂತರ ಲಯಬದ್ಧವಾಗಿ ತೇಲಿಬರುತ್ತಿದ್ದವು. ಅಂದಿನ ಮುಖೇಶ್ ಎಸ್.ಪಿ.ಬಿ. ಗೀತೆಗಳಿಗಿಂತಲೂ ಈ ಸೋಪಿನ ಗೀತೆಗಳು ಈಸೋಪನ ಕತೆಗಳಿಗಿಂತಲೂ ಸೂಪರ್ ಸೆನ್ಷೇಷನ್ ಕ್ರಿಯೇಟಿಸಿದ್ದವು… ಹಚ್ಚೇವು ನೊರೆ ನೊರೆಯ ಸೋಪು.. ಎಂಬ ಶೀರ್ಷಿಕೆಯ ಪ್ರಬಂಧ ಹೆಚ್ಚೇವು ಕನ್ನಡ ದೀಪ ಗೀತೆಯ ಸಾಲು ಹಿಡಿದು ಕನ್ನಡಾಂಗ್ಲ ಮಿಶ್ರಣದಿ ಪುರಿಗೆ ಒಗ್ಗರಣೆ ಹಾಕಿ ಚುರುಮುರಿ ಮಾಡಿದಂತಿದೆ.

ಮುಂಜಾನೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ನಿನ್ನಿಂದಲೇ..ನಿನ್ನಿಂದಲೇ..ಕನಸೊಂದು ಶುರುವಾಗಿದೆ.. ಎಂಬ ಸುಂದರ ಹಿಮ್ಮೇಳದೊಂದಿಗೆ ಸ್ವಚ್ಛ್ ಭಾರತ್ ಕನಸನ್ನು ಹೊತ್ತ ನಗರಸಭೆಯ ಗಾರ್ಬೇಜ್ ವ್ಯಾನುಗಳು ಕಸ ಬೇಡುತ್ತಾ ಪ್ರತಿ ಮನೆಯೆದುರು ಬಂದು ನಿಲ್ಲತೊಡಗಿದವು. ತಡವಾಗಿ ಎದ್ದವರು ಗಾಡಿ ಮುಂದೆ ಪಾಸ್ ಆಗಲು ಡಸ್ಟ್ಬಿನ್ನಿನ ಬಿಕ್ಕಳಿಕೆಗೂ ಅದರೊಳಗಿನ ದುರ್ನಾತಕ್ಕೂ ಬೇಸೆತ್ತು ತಡರಾತ್ರಿವರೆಗೂ ಕಾಯ್ದು ಅಕ್ಕಪಕ್ಕದ ಖಾಲಿ ಸೈಟಿನಲ್ಲಿ ಕಸ ವಿಸರ್ಜಿಸಿ ಕೈ ತೊಳೆದುಕೊಂಡರು. ಹೀಗೆ ಜನರ ಅಶಿಸ್ತು ಹೆಚ್ಚಿದಂತೆ ಕಸವೊಂದು ತೀರ.. ವ್ಯಾನ್ ಒಂದು ತೀರ.. ಸ್ವಚ್ಛ್ ಭಾರತ್ ಕನಸು ದೂರಾ.. ಮೇಡಂ ಮನ್ ಕಿ ಬಾತ್ ಮನ ಮುಟ್ಟಿ ಕಸ ನಮ್ಮ ತಲೆಯಲ್ಲೇ ಉಳಿಯುವುದು.

‘ಖಾಲಿ ಸೈಟು, ಫುಟ್‌ಫಾತ್, ಪಾರ್ಕ್ ಎಲ್ಲೆಡೆ ಹಾರಾಡುವ ತ್ಯಾಜ್ಯಗಳು ಹಲವು ವ್ಯಾಜ್ಯಗಳಿಗೆ ಮುನ್ನುಡಿ ಬರೆದವು. ಇಲ್ಲಿ ಕಸ ಹಾಕಬಾರದು ಬೋರ್ಡುಗಳು, ಇಲ್ಲಿ ಕಸ ಹಾಕುವವರು ಹಂದಿಗಳಿಗೆ ಸಮ ಎಂದು ತಿದ್ದುಪಡಿಯಾಗಿ ಹಂದಿಗಳು ನಾಚಿಕೊಂಡವು ಅಷ್ಟೇ ಜನ ನಾಚಿಕೊಳ್ಳಲಿಲ್ಲ. ಕಸ ವಿಲೇವಾರಿಗೆ ಸರ್ಕಾರ ಮುನಿಸಿಪಾಲಿಟಿಗಳು ಎಷ್ಟೇ ಹೆಣಗಾಡಿದರೂ ಜನರಿಗೆ ಅದರ ಪರಿವೇ ಇಲ್ಲ. ನನ್ನ ಬಾಲ್ಯದ ದಿನ. ನಮ್ಮೂರಲ್ಲಿ ನಮ್ಮ ಮನೆ ಮುಂಭಾಗ ಚರಂಡಿ ಇರಲಿಲ್ಲ. ನಮ್ಮ ಮತ್ತು ಪಕ್ಕದ ದೊಡ್ಡಪ್ಪರ ಮನೆಗಳ ಬಚ್ಚಲು ನೀರು ಒಟ್ಟಾಗಿ ಹೊರ ಹೋಗಲು ಮಣ್ಣುರಸ್ತೆಯ ಮದ್ಯೆ ಪೈಪ್‌ನ್ನು ಹೂತು ಆಚೆಯ ದಡಕ್ಕೆ ದಾಟಿಸಿದ್ದೆವು. ನಮ್ಮ ಎದುರು ರಸ್ತೆ ಆಚೆ ಕಡೆ ಯಾರೂ ಮನೆ ಕಟ್ಟಿರಲಿಲ್ಲ. ಆ ಕಡೆಯ ಚರಂಡಿ ತುಂಬಿ ತುಳುಕಿ ತಳಕ್ಕೆ ಹರಿದು ಕಪ್ಪು ಕೊಳಚೆ ಗುಂಡಿ ಅದರಲ್ಲಿ ಹಂದಿ ಹೊರಳಾಡುತ್ತಿದ್ದವು. ಅತ್ತ ಆ ಕಡೆಯ ಚರಂಡಿ ಹೂಳನ್ನು ಗ್ರಾಮ ಪಂಚಾಯ್ತಿ ತೆಗೆಸದೆ ಇತ್ತ ನಮ್ಮಮ್ಮನಿಗೂ ದೊಡ್ಡಮ್ಮನಿಗೂ ದಿನಾ ಇದೇ ರಾಜಿ ಪಂಚಾಯ್ತಿ. ಚರಂಡಿ ಪೈಪ್ ಬ್ಲಾಕ್ ಆಗಿ ನೀರು ನಿಂತು ದೊಡ್ಡಮ್ಮ ‘ಹೇ ಬಸವಣ್ಣ, ಚರಂಡಿ ಕ್ಲೀನ್ ಮಾಡಿಸು.. ಎಂದು ಪದೇ ಪದೇ ಹೇಳುತ್ತಿದ್ದರು. ಇದು ಕುಟುಂಬ ಕದನವಾಗಿ ಸಂಬಂಧ ಹಳಸಿದ ಅನ್ನವಾಗಿತ್ತು. ಸೋಮುವಾರ ನಮ್ಮ ತಂದೆ ಉದ್ದನೇ ದೊಣ್ಣೆಯಿಂದ ಪೈಪ್ ಕಸ ಹೊರ ನೂಕಿ ಗುದ್ದಲಿ ಹಿಡಿದು ಚರಂಡಿ ಕ್ಲೀನ್ ಮಾಡಿ ಬಂದು ಸ್ನಾನ ಮಾಡುತ್ತಿದ್ದರು. ಸುಮಾ ಮೇಡಂರ ಕಸದ ಕಥೆ ಓದಿ ಹಳೆಯ ನಮ್ಮೂರ ಚರಂಡಿ ಕಥೆ ನೆನಪಾಗಿ ಅರೇ.! ಎಷ್ಟು ರಸವತ್ತಾಗಿ ಕಸದ ಕಥೆ ನಿರೂಪಿಸಿದ್ದಾರೆ ಎನಿಸಿತು. ಕೃತಿಯ ಶೀರ್ಷಿಕೆಯ ಹಚ್ಚೇ ದಿನ್ ಹೆಣ್ಣು ಮಕ್ಕಳ ಫ್ಯಾಶನ್ ದುನಿಯಾಗೆ ಹಳೆಯ ಹಚ್ಚೆ ಹೊಸ ಟ್ಯಾಟೂ ಆಗಿ ಬಾಡಿ ಆರ್ಟ್ ಲಗ್ಗೆ ಇಟ್ಟ ಬಗ್ಗೆ ಬರೆದ ಬರಹ ಶಿಲೆಯ ಮೇಲಿನ ಶಾಸನಗಳಂತೆ ತೊಗಲ ಮೇಲಿನ ಹಚ್ಚೆ ಅಚ್ಚಾ ಹೈ.

ಮುನ್ನುಡಿಯಲ್ಲಿ ಎನ್.ರಾಮನಾಥ್ ಬರೆದಂತೆ ಸುಮಾರ ದೃಷ್ಟಿಗೆ ಬೀಳದ ವಸ್ತು ವಿಷಯಗಳೇ ಇಲ್ಲ. ಗುಡಿಯಲ್ಲಿರುವ ದೇವರುಗಳೆಲ್ಲಾ ಪೂರ್ವಾಬಿಮುಖವಾಗಿ ನಿಂತರೆ ನವಗ್ರಹಗಳು ಮಾತ್ರ ಮುನಿದ ಮಡದಿ ಮಕ್ಕಳಂತೆ ಕಣ್ಣಿನಾಸ್ಪತ್ರೆಯಲ್ಲಿ ಡ್ರಾಪ್ಸ್ ಹನಿಸಿಕೊಂಡವರಂತೆ ವಿವಿಧ ದಿಕ್ಕುಗಳಗೆ ಮುಖ ತಿರುಗಿಸಿ ಕುಳಿತಿರುತ್ತವೆ ಎಂಬ ಹೋಲಿಕೆಯ ಓದು ನಗೆ ಚಿಮ್ಮಿಸುತ್ತದೆ. ವಿಡಂಬನೆ, ಕಟಕಿ, ವ್ಯಂಗ್ಯ, ಲೇವಡಿ ತಿಳಿಹಾಸ್ಯಗಳ ಹಿತಮಿಶ್ರಣದ ೩೨ ಲೇಖನಗಳು ಹಾಸ್ಯ ರಸಾಯನದ ವೈವಿಧ್ಯ ವಸ್ತು ವಿಷಯಗಳ ನೈವೇದ್ಯ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

 

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group