ಬೀದರ – ಬೀದರ್ ಉತ್ತರ ಕ್ಷೇತ್ರದ ಎಂಎಲ್ಎ ರಹೀಂಖಾನ್ ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ಮಧ್ಯೆ ಸಂವಿಧಾನ ಬದಲಾವಣೆ ಹೇಳಿಕೆ ಕುರಿತಂತೆ ಜಟಾಪಟಿ ನಡೆದಿದ್ದು, ಸಂವಿಧಾನ ಬದಲಾಯಿಸುತ್ತೇವೆ ಎಂಬುದು ಮೂರ್ಖತನದ ಹೇಳಿಕೆ ಎಂದು ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಡಾ. ಬಿ.ಆರ್ ಅಂಬೇಡ್ಕರ್ ರವರ 131ನೇಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಕಾಂಗ್ರೆಸ್ ಶಾಸಕ ರಹೀಂ ಖಾನ್ ಅವರು, ಕೆಲವರು ಸಂವಿಧಾನ ಬದಲಾವಣೆ ಮಾಡುತ್ತೇನೆ ಎನ್ನುತ್ತಿದ್ದಾರೆ ಎಂದು ಈ ಹಿಂದೆ ಬಿಜೆಪಿಯ ಅನಂತಕುಮಾರ ಹೆಗಡೆಯವರ ಹೇಳಿಕೆಗೆ ಪರೋಕ್ಷವಾಗಿ ವ್ಯಂಗ್ಯವಾಡಿದರು.
ಮೊದಲೆ ಭಾಷಣ ಮಾಡಿದ್ದರೂ ಶಾಸಕರ ಕೈಯಿಂದ ಮೈಕ್ ತೆಗೆದುಕೊಂಡು ಮತ್ತೆ ಭಾಷಣ ಪ್ರಾರಭ ಮಾಡಿದ ಸಚಿವ ಖೂಬಾ ಅವರು, ಶಾಸಕರೇ ನಿಮಗೆ ತಿಳಿವಳಿಕೆಯ ಕೊರತೆ ಇರಬಹುದು. ಯಾರಾದರೂ ನಮ್ಮ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದುಕೊಂಡಿದ್ದರೆ ಅವರಂಥ ಮೂರ್ಖರು ಇಡೀ ಪ್ರಪಂಚದಲ್ಲಿಯೇ ಇರಲಾರರು. ಅಂಥ ಹೇಳಿಕೆ ನೀಡಿರುವ ಯಾವುದೇ ವ್ಯಕ್ತಿಗೆ ಅದು ಸೀಮಿತವಾಗಿರುತ್ತದೆ ಎಂದು ಟಾಂಗ್ ನೀಡಿದರು.
ಆದರೂ ಸಚಿವರ ಭಾಷಣದ ವೇಳೆ ಸಂವಿಧಾನ ಬದಲಾವಣೆ ಹೇಳಿಕೆಯ ಬಗ್ಗೆ ದಲಿತ ಮುಖಂಡರು ಕೂಡಾ ಸಚಿವರನ್ನು ತರಾಟೆಗೆ ತೆಗೆದುಕೊಳ್ಳುವ ಯತ್ನ ಮಾಡಿದರು.
ಕಾರ್ಯಕರ್ತ ಅಸ್ವಸ್ಥ :
ನಂತರ ಸಾಯಂಕಾಲ ನಡೆದ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆಯ ಕಾಲಕ್ಕೆ ದಲಿತ ಕಾರ್ಯಕರ್ತನೊಬ್ಬ ಅಸ್ವಸ್ಥನಾಗಿ ಬಿದ್ದಿದ್ದರಿಂದ ಕಾರ್ಯಕರ್ತರ ಅಸಮಾಧಾನ ಜಿಲ್ಲಾಡಳಿತದ ಕಡೆಗೆ ತಿರುಗಿತು.
ಸಾವಿರಾರು ಜನರು ನೆರೆದಿದ್ದ ಮೆರವಣಿಗೆಯನ್ನು ಅನವಶ್ಯಕವಾಗಿ ರಾತ್ರಿಯ ವೇಳೆ ಹೊರಡಿಸಿದ್ದು ಹಾಗೂ ಯಾವುದೇ ಅನಾಹುತ ಸಂಭವಿಸಿದಲ್ಲಿ ನೆರವಿಗೆ ಬರಲು ಆಂಬುಲೆನ್ಸ್ ವ್ಯವಸ್ಥೆ ಮಾಡದೇ ಇರುವುದರ ಬಗ್ಗೆ ಆಕ್ರೋಶ ವ್ಯಕ್ತವಾಯಿತು.
ವರದಿ : ನಂದಕುಮಾರ ಕರಂಜೆ, ಬೀದರ