ಸಿಂದಗಿ: ತಾಲೂಕಿನ ಚಿಕ್ಕಹಾವಳಗಿ ಗ್ರಾಮದ ಕಟಾವಿಗೆ ಬಂದ ಕಬ್ಬು ಕಡಿಯದೆ ಬೇರೆ ಜಿಲ್ಲೆಯ ಬೇರೆ ತಾಲೂಕಿನ ಕಬ್ಬು ಸಾಗಾಣಿಕೆ ಮಾಡುತ್ತಿರುವುದರಿಂದ ಸ್ಥಳೀಯ ರೈತರ ಕಬ್ಬು ಒಣಗುತ್ತಿದೆ. ಕಾರ್ಖಾನೆಗಳ ಅಧಿಕಾರಿಗಳು ಮಾತ್ರ ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಕಬ್ಬು ಬೆಳೆಗಾರ ಸಂಘದ ತಾಲೂಕಾ ಅಧ್ಯಕ್ಷ ಧರೆಪ್ಪ ಬಿರಾದಾರ ಆರೋಪಿಸಿದ್ದಾರೆ.
ಪತ್ರಕರ್ತರೊಡನೆ ಮಾತನಾಡಿದ ಅವರು, ಕಬ್ಬಿನ ಗ್ಯಾಂಗಿನವರು 1ಎಕರೆ ಕಬ್ಬಿನ ಕಟಾವಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳ ಬೇಡಿಕೆ ಇಡುತ್ತಿರುವದು ವಿಪರ್ಯಾಸವೇ ಸರಿ. ಇದರಿಂದ ರೈತರಿಗೆ ಹಾನಿಯಾಗುತ್ತಿದೆ. ಆದ್ದರಿಂದ ಬೇರೆ ತಾಲೂಕಿನಲ್ಲಿ ಇರುವ ಗಾಡಿಗಳನ್ನು ತರಿಸಿ ಸ್ಥಳೀಯ ಹಳ್ಳಿಗಳ ಕಬ್ಬು ಕಡಿಯಬೇಕು ಎಂದು ಆಗ್ರಹಿಸಿದರು.
ರೈತರು ಹಲವಾರು ಬಾರಿ ಕಾರ್ಖಾನೆಗೆ ಹೋಗಿ ಹೇಳಿದರೂ ಅಧಿಕಾರಿಗಳು ದುರಾಡಳಿತ ಮಾಡುತ್ತಿದ್ದಾರೆ ಕೆಪಿಆರ್ ಸಕ್ಕರೆ ಕಾರ್ಖಾನೆ, ಆಲಮೇಲ ಮತ್ತು ಮನಾಲಿ ಸರ್ಕಾರಿ ಕಾರ್ಖಾನೆ ಮಲಗಾಣ ಮತ್ತು ಸಂಗಮನಾಥ ಕಾರ್ಖಾನೆ ಮನ್ಮಾಪುರ್ ಇವರು ರೈತರ ಸಂಕಷ್ಟಕ್ಕೆ ಸ್ಪಂದನೆ ನೀಡದೆ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಕ್ಕಿ ಕಬ್ಬಿನ ಸಿಪ್ಪೆಯಂತೆಯಾಗಿದ್ದು, ಕಾರ್ಖಾನೆ ಅಧಿಕಾರಿಗಳು ದುರಾಡಳಿತವನ್ನು ಬಿಡಬೇಕು. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ರೈತರ ಮತ್ತು ಕಾರ್ಖಾನೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಬೇಕು ಇಲ್ಲದೆ ಹೋದರೆ ಮೂರು ಕಾರ್ಖಾನೆ ಎದುರುಗಡೆ ಅಹೋ ರಾತ್ರಿ ಧರಣಿ ಹಾಗೂ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ಧರೆಪ್ಪ ಬಿರಾದಾರ ಎಚ್ಚರಿಕೆ ನೀಡಿದ್ದಾರೆ.