ಬೀದರ – ಪಿಎಸ್ ಐ ನೇಮಕಾತಿ ಅಷ್ಟೇ ಅಲ್ಲ ಹಾಲು ಒಕ್ಕೂಟದ ನೇಮಕಾತಿಯಲ್ಲಿಯೂ ಕೂಡಾ ಬಾರಿ ಭ್ರಷ್ಟಾಚಾರ ನಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ರಾಜ್ಯ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಬೀದರ್ ತಾಲೂಕಿನ ಕಾಶೆಂಪುರ ಗ್ರಾಮದಲ್ಲಿ ಮಾಜಿ ಸಿಎಂ H.D ಕುಮಾರಸ್ವಾಮಿ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದು ಹಾಲು ಒಕ್ಕೂಟದಲ್ಲಿ ಸೀಟ್ ಪಡೆಯಬೇಕಾದರೆ 25 ಲಕ್ಷ ರೂಪಾಯಿ ಹಣ ಕೊಡುವ ಪರಿಸ್ಥಿತಿ ಇದೆ. ಕೆಪಿಎಸ್ಸಿಯಲ್ಲಿ ನೇಮಕಾತಿಗೆ ಒಂದು ಕೋಟಿ ರೂಪಾಯಿ ನೀಡಬೇಕು. ನನ್ನ ಬಳಿಯು ಕೂಡಾ ಸಾವಿರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಬಂದಿದ್ದರು ನನ್ನ ಬಳಿ ಇದೆಲ್ಲ ನಡೆಯಲ್ಲ ಅಂತಾ ಹೇಳಿ ಕಳುಹಿಸಿದ್ದೇನೆ ಎಂದು ಮಾಹಿತಿ ನೀಡಿದರು.
ಬರೀ ಪಿಎಸ್ ಐ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರ ಮಾತ್ರ ಬಯಲಿಗೆ ಬಂದಿದೆ ಎಂದ ಅವರು, ಪಿಎಸ್ ಐ ನೇಮಕಾತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಸಿಎಂ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು. ಇಲ್ಲದೆ ಹೋದರೆ ಇದು ಹೀಗೆಯೇ ಮುಂದುವರೆದುಕೊಂಡು ಹೋಗುತ್ತದೆ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದರು.
ಬಿಜೆಪಿ ಸರಕಾರದಲ್ಲಿ ಕೆಲವು ವ್ಯಕ್ತಿಗಳು ಗಂಟೆಗೆ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಶ್ರಿಲಂಕಾಗೆ ಬಂದಿರುವ ಪರಿಸ್ಥಿತಿ ಭಾರತಕ್ಕೂ ಶೀಘ್ರದಲ್ಲಿ ಬರಲಿದೆ ಎಂದು ಎಚ್ಡಿಕೆ ಭವಿಷ್ಯ ನುಡಿದರು.
ಎರಡು ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡುತ್ತಿವೆ ಇವೆಲ್ಲ ನಾಟಕ ಅಷ್ಟೆ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅವರು ಟೀಕಿಸಿದರು.
ಸಿಟ ರವಿ ಹೇಳಿಕೆ ಗೆ ತಿರುಗೇಟು ನೀಡಿದ ಕುಮಾರ ಸ್ವಾಮಿ:
ಬುಲ್ಡೋಜರ್ ಹಚ್ಚುವ ಕೆಲಸ ಬಿಜೆಪಿ ನಾಯಕರು ಮಾಡುವುದನ್ನು ನಿಲ್ಲಿಸಬೇಕು ಇಲ್ಲವಾದರೆ ನಾನು ರೋಡಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಕುಮಾರಸ್ವಾಮಿ, ಮೊದಲು ಬೆಂಗಳೂರಿ ನಲ್ಲಿ ಕೆರೆ ಜಾಗ ನುಂಗಿದವರ ವಿರುದ್ಧ, ಸರಕಾರಿ ಭೂಮಿಯನ್ನ ನುಂಗಿಹಾಕುತ್ತಿರುವ ವ್ಯಕ್ತಿಯ ಮನೆ ಮೇಲೆ ಬುಲ್ಡೋಜರ್ ಹತ್ತಿಸಿ ಬಡವರ ಮನೆಗಲ್ಲ ಎಂದರು.
ಕುಮಾರಸ್ವಾಮಿಯವರ ಜೊತೆ ಬಂಡೆಪ್ಪ ಕಾಶೆಂಪೂರ ಇದ್ದರು.
ವರದಿ: ನಂದಕುಮಾರ ಕರಂಜೆ, ಬೀದರ