ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಸವರಾಜ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಸಹಯೋಗದಲ್ಲಿ ನ.೧೭ರಂದು ಬೆಳಿಗ್ಗೆ ೧೦.೩೦ರಿಂದ ಸಂಜೆ ೫ರವರೆಗೆ ಬೆಳಗಾವಿ ವಿಭಾಗ ಮಟ್ಟದ ಕಬ್ಬು ಹಾಗೂ ಅರಿಷಿಣ ಬೆಳೆಯ ಕ್ಷೇತ್ರೋತ್ಸವ, ವಿಚಾರ ಸಂಕಿರಣ ಹಾಗೂ ಹಾಲು ಹಲ್ಲಿನ ಹೋರಿ ಪ್ರದರ್ಶನವನ್ನು ಏರ್ಪಡಿಸಿರುವರು.
ಕಳೆದ ನ.೧೦ರಂದು ನಿಗದಿಗೊಳಿಸಿದ್ದ ವಿಚಾರ ಸಂಕಿರಣವನ್ನು ಕಬ್ಬಿನ ದರ ನಿಗದಿಗಾಗಿ ರೈತರ ಹೋರಾಟವಿದ್ದ ಕಾರಣ ಮುಂದೂಡಲಾಗಿತ್ತು.
ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಂ.ಜಿ. ಕೆರುಟಗಿ ಕಾರ್ಯಕ್ರಮವವನ್ನು ಉದ್ಘಾಟಿಸುವರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಆಡಳಿತ ಅಧ್ಯಕ್ಷ ಮಂಜುನಾಥ ಗೌಡ್ ಎಸ್.ಆರ್. ಜ್ಯೋತಿ ಬೆಳಗಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಂಕರಗೌಡ ಪಾಟೀಲ ವಹಿಸುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಾಳಪ್ಪ ಬಿ. ಬೆಳಕೂಡ, ಗೋದಾವರಿ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ, ನಿರ್ದೇಶಕ ಡಾ. ನಂದಕುಮಾರ ಕುಂಚಗಿ, ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಡಾ. ಎಚ್.ಡಿ. ಕೋಳೆಕರ, ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಂ.ಎಲ್. ಜನಮಟ್ಟಿ ಭಾಗವಹಿಸುವರು.
ಉಪನ್ಯಾಸ: ಕಬ್ಬು ಬೆಳೆಯ ಬಗ್ಗೆ ಉಪನ್ಯಾಸವನ್ನು ತುಕ್ಕಾನಟ್ಟಿ ಕೆವಿಕೆ ಮಖ್ಯಸ್ಥ ಡಾ. ಡಿ.ಎ. ಮೇತ್ರಿ ಮತ್ತು ಬೇಸಾಯ ತಜ್ಞ ಎಂ.ಎನ್. ಮಲಾವಡಿ ಮಾಡುವರು. ಅರಿಷಿಣ ಬೆಳೆಯ ಕುರಿತು ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಶಿಧರ ದೊಡಮನಿ, ಡಾ. ರಾಮನಗೌಡ ಹಡಲಗೇರಿ ಉಪನ್ಯಾಸ ನೀಡುವರು.
ಅತಿಥಿಗಳಾಗಿ ಮಹಾಂತೇಶ ಹಟ್ಟಿ, ಸುರೇಶ ಕಬಾಡಗಿ, ಶಂಕರಗೌಡ ಪಾಟೀಲ, ಬಾಳಪ್ಪ ಬೆಳಕೂಡ, ಶಿವನಗೌಡ ಬಿರಾದಾರ, ಸಂಜಯ ಪಾಟೀಲ, ಮಲ್ಲನಗೌಡ ಪಾಟೀಲ, ಅರವಿಂದ ಕಟಗಿ, ವಿರೇಂದ್ರ ಪಾಟೀಲ, ಶಿವಪ್ಪ ಅರಹುಣಸಿ, ಜಿ. ಶಿವನಗೌಡರು, ಶಿವಪುತ್ರ ಸಪಗಾಯಿ, ನಾರಾಯಣ ಹೆಗಡೆ, ರಾಮಚಂದ್ರ ಹೆಗಡೆ ಭಾಗವಹಿಸುವರು.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿರುವರು. ಭಾಗವಹಿಸುವ ಎಲ್ಲ ರೈತರಿಗೆ ಊಟ, ಉಪಹಾರ ವ್ಯವಸ್ಥೆ ಇರುವುದು ಎಂದು ಸಂಘಟಕರಾದ ಬಾಳಪ್ಪ ಬೆಳಕೂಡ ಮತ್ತು ಬಸವರಾಜ ಬಿ. ಬೆಳಕೂಡ ತಿಳಿಸಿದ್ದಾರೆ.

