spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಸಿಮ್ಮಲಿಗೆಯ ಚಂದಿಮರಸ

ಬಸವಣ್ಣನವರ ಹಿರಿಯ ಸಮಕಾಲೀನರಲ್ಲಿ ಜೇಡರ ದಾಸಿಮಯ್ಯನ ನಂತರ ಅತಿ ಹೆಚ್ಚಿನ ವಚನಗಳು ಲಭ್ಯವಾದವುಗಳೆಂದರೆ ಸಿಮ್ಮಲಿಗೆಯ ಚಂದಿಮರಸರವು. ಇವರ ವಚನಗಳು ಸರಳವೂ ಅರ್ಥಪೂರ್ಣವೂ ಭಾವಪೂರ್ಣವೂ ಆಗಿರುವುದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಉಳಿದುಕೊಂಡು ಬಂದಿರಬೇಕೆಂದಿನಿಸುತ್ತದೆ.

ಹಂದಿ ಹಯನವಲ್ಲ ಸಂಸಾರಿ ಜಂಗಮನಲ್ಲ ನಿಜ! ಸಂಸಾರಿ ಜ್ಞಾನಿಗೂ ನಿರಾಧನಿಗೂ ಸರಿಯೆನ್ನಬಹುದೇ ಸಿಮ್ಮಲ್ಲಿಗೆಯ ಚೆನ್ನರಾಮ?”

- Advertisement -

ಎಂಬಂತಹ ಅನೇಕ ವಿಚಾರ ಪ್ರಚೋದಕ ವಚನಗಳ ಮುಖಾಂತರ ಚಂದಿಮರಸರು ಇಂದಿಗೂ ಪ್ರಸ್ತುತನಾಗುತ್ತಾರೆ. ಅವರ ವಚನಗಳ ಅಂಕಿತ ಸಿಮ್ಮಲಿಗೆಯ ಚೆನ್ನರಾಮ.

ಚಂದಿಮರಸರು ಸರಳ ಸಾದಾ ನಿಬಿಡ ವೈರಾಗ್ಯಯುತ ಶರಣಾಗಿರುವುದರಿಂದ ಯಾವುದೇ ಪವಾಡಗಳನ್ನು ಮಾಡಲಿಲ್ಲ ಅದಕ್ಕಾಗಿ ಅವರ ಬಗ್ಗೆ ಹೆಚ್ಚು ವಿವರಗಳು ಗೊತ್ತಾಗಿಲ್ಲ ವಚನಗಳ ಶಕ್ತಿ ಸಾಮರ್ಥ್ಯದ ಮೇಲೆ ನಾವು ಅವರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.

ಕೆಂಭಾವಿಯ ಅರಸರಾಗಿದ್ದ ಚಂದಿಮರಸರಿಗೆ ಯಾವುದೋ ಒಂದು ಸಂದರ್ಭದಲ್ಲಿ ಅರಸೊತ್ತಿಗೆ ಬೇಡವಾಯಿತು. ಮಧ್ಯರಾತ್ರಿಯಲ್ಲಿ ಗೌತಮ ಬುದ್ಧನಂತೆ ಅರಮನೆಯನ್ನು ಬಿಟ್ಟು ಎದ್ದು ಹೋದರು . ಎಷ್ಟು ದೂರ ಹೋದರೆoದರೆ ಈಗಿನ ಬಸವನ ಬಾಗೇವಾಡಿ ತಾಲೂಕಿನ ಚಿಮ್ಮಲಿಗೆಗೆ ಹೋದರು .ಅಲ್ಲಿ ನಿಜಗುಣ ದೇವನಿಂದ ಲಿಂಗದೀಕ್ಷೆ ಪಡೆದು ಷಟಸ್ಥಲ ಮಾರ್ಗಪಥಿಕನಾದ. ಅಧ್ಯಾತ್ಮ ಅಧಿಪತಿಯಾದರು.

- Advertisement -

ಚಂದಿಮರಸರು ತಮ್ಮ ವಚನಗಳಲ್ಲಿ ದಾಸಯ್ಯ ಚೆನ್ನಯ್ಯ ಕಕ್ಕಯ್ಯ ಮಾಚಯ್ಯ ಬಸವಣ್ಣ ಚೆನ್ನಬಸವಣ್ಣ ಅಲ್ಲಮಪ್ರಭು ಮೊದಲಾದವರನ್ನು ಸ್ಮರಿಸಿರುವುದರಿಂದ ಬಸವಣ್ಣನವರ ಕಾಲದಲ್ಲಿ ಇವರಿರಬೇಕು ಎನ್ನುವುದು ತಿಳಿದುಬರುತ್ತದೆ. ಇಷ್ಟಾದರೂ ಚಂದಿಮರಸರು ಕಲ್ಯಾಣಕ್ಕೆ ತೆರಳಿ ಅನುಭವ ಮಂಟಪದಲ್ಲಿ ಭಾಗವಹಿಸುತ್ತಿದ್ದರು ಎಂಬುದಕ್ಕೆ ಆಧಾರಗಳಿಲ್ಲ ಕಲ್ಯಾಣಕ್ಕೆ ಹೋಗದೆ ಸಿಮ್ಮಲಿಗೆಯ ನಿಜಗುಣದೇವರ ಸಾನ್ನಿಧ್ಯದಲ್ಲಿಯೇ ತಮ್ಮ ಸಾಧನೆಯನ್ನು ಮುಂದುವರೆಸಿರಬೇಕು.ಶೂನ್ಯ ಸಂಪಾದನೆಯಲ್ಲಿ ಎಲ್ಲಿಯೂ ಚಂದಿಮರಸರ ಹೆಸರು ಪ್ರಸ್ತಾಪವಾಗುವುದಿಲ್ಲ.

ಕೆಂಭಾವಿಯನ್ನು ತ್ಯಜಿಸಿದ ಚಂದಿಮರಸರು ಆಗಿನ ಕಾಲದ ಜೇಡರ ದಾಸಿಮಯ್ಯ,ನಿಜಗುಣ ದೇವರ ಹೆಸರನ್ನು ತನ್ನ ವಚನಗಳಲ್ಲಿ ಉಲ್ಲೇಖಿಸಿದ್ದರು. ಕೆಂಭಾವಿಯ ಸಮೀಪದಲ್ಲಿಯೇ ನಾಲ್ಕಾರು ಮೈಲಿಗಳ ಅಂತರದಲ್ಲಿ ಮುದನೂರು ಇದ್ದರೂ ಜೇಡರ ದಾಸಿಮಯ್ಯನಲ್ಲಿಗೂ ಅವರು ಹೋಗಿಲ್ಲ. ಸಮೀಪದಲ್ಲೆಲ್ಲ ಎಲ್ಲಾ ಅಗ್ಘವಣಿ ಹಂಪಯ್ಯ, ಸಗರದ ಬ್ರಹ್ಮಯ್ಯ, ಹಾವಿನಾಳ ಕಲ್ಲಯ್ಯ ಮೊದಲಾದವರಿದ್ದರೂ ದೂರದ ಸಿಮ್ಮಲಿಗೆಗೆ ಹೋದದ್ದು ಹೆಂಡಿರು ಮಕ್ಕಳ ಸೆಳೆತದಿಂದ ದೂರವಿರಬೇಕೆಂಬುದೇ ಆಗಿರಬೇಕು. ತಮ್ಮ ನಂತರ ತಮ್ಮ ರಾಜ್ಯಕ್ಕೆ ಯಾರನ್ನು ಒಡೆಯನನ್ನಾಗಿ ಮಾಡಿದರು ಎಂಬ ಉಲ್ಲೇಖವೂ ಸಿಗುವುದಿಲ್ಲ.

ಏನೆಂದೆನಲಿಲ್ಲದ ಮಹಾಘನವು ತನ್ನ ಲೀಲೆಯಿಂದ
ತಾನೇ ಸ್ವಯಂಭುಲಿಂಗವಾಯಿತ್ತು ; ಆ ಲಿಂಗದಿಂದಾಯಿತ್ತು
ಶಿವಶಕ್ತ್ಯಾತ್ಮಕ ; ಆ ಶಿವ ಶಕ್ತಾತ್ಮಕದಿಂದಾದುದು ಆತ್ಮ ;
ಆತ್ಮನಿಂದಾದುದು ಆಕಾಶ ; ಆಕಾಶದಿಂದಾದುದು ವಾಯು ;
ವಾಯುವಿನಿಂದಾದುದು ಅಗ್ನಿ ; ಅಗ್ನಿಯಿಂದಾದುದು ಅಪ್ಪು
ಅಪ್ಪುವಿನಿಂದಾದುದು ಪೃಥ್ವಿ ; ಪೃಥ್ವಿಯಿಂದಾದುದು ಸಕಲ ಜೀವವೆಲ್ಲ.
ಇವೆಲ್ಲ ನಿಮ್ಮ ನೆನಹಿನಿಂದಾದುವು ಸಿಮ್ಮಲ್ಲಿಗೆಯ ಚೆನ್ನರಾಮ

ಪ್ರಸ್ತುತ ವಚನದಲ್ಲಿ ನಮ್ಮ ಕೆಂಭಾವಿಯ ರಾಜಶ್ರೀ ಚಂದಿಮರಸರು ಸೃಷ್ಟಿಯ ರಚನೆಗೆ ವೈಚಾರಿಕ ಕಾರಣಗಳನ್ನು ಹುಡುಕಲು ಯತ್ನಿಸಿರುವರು. ಏನೇನೂ ಇಲ್ಲದ ಹೊತ್ತಿನಲ್ಲಿ ಸರ್ವ ಶೂನ್ಯ ಪರಿಸ್ಥಿತಿಯಲ್ಲಿ ಪರಮಾತ್ಮನೊಬ್ಬನೇ ಇಲ್ಲದಂತೆ ಇದ್ದನು. ತನ್ನ ಲೀಲಾ ವಿನೋದಕ್ಕಾಗಿ ಸಕಲ ಚರಾಚರವನ್ನು ಸೃಷ್ಟಿಸಬೇಕೆಂಬ ನೆನಹು ಮೂಡಿದಾಗ ಸ್ವಯಂ ಸ್ವಯಂಭುಲಿಂಗವಾದನು.ಆ ಲಿಂಗದಲ್ಲಿ ನಾದ ಬಿಂದು ಕಳೆಗಳು ಮೂಡಿದಾಗ ಶಿವ ಶಕ್ತಿಯರಾದರು ಆ ಶಿವಶಕ್ತಿಯರಿಂದ ಆತ್ಮ ಜನಿಸಿತು. ಆ ಆತ್ಮನಿಂದ ಪಂಚಭೂತಗಳು ಉತ್ಪತ್ತಿಯಾದವು.

ಪಂಚಭೂತಗಳಲ್ಲಿ ಮೊದಲು ಹುಟ್ಟಿದುದು ಸರ್ವ ವ್ಯಾಪಕವಾದ ಸೀಮಾತಿತವಾದ ಅನಂತ ವ್ಯಾಪ್ತಿಯ ಆಕಾಶ ಅಥವಾ ಮಹಾಬಯಲು. ಬಯಲು ಎಷ್ಟು ದಿನ ಬಯಲಾಗಿಯೇ ಉಳಿದೀತು? ಆ ಶೂನ್ಯ ಪ್ರದೇಶವನ್ನು ವಾಯು ಆಕ್ರಮಿಸಿಕೊಂಡಿತು.ವಾಯುವಿಲ್ಲದ ಜಾಗವಿಲ್ಲ. ಯಾವುದೇ ಬಯಲು ಯಾವುದರಿಂದಲಾದರೂ ತುಂಬಿಕೊಳ್ಳದಿದ್ದರೆ ಗಾಳಿಯಿಂದ ತುಂಬಿಕೊಂಡಿರುತ್ತದೆ ಎಂಬುದನ್ನು ವಿಜ್ಞಾನದಲ್ಲಿ ಓದುತ್ತೇವೆ.

ನಿಜವಾಗಿ ನೋಡಿದರೆ ಗಾಳಿ ನಿಶ್ಚೇಷ್ಠಿತ ಶಕ್ತಿಯಲ್ಲ.
ರಭಸಗೊಳ್ಳುವ ತೀವ್ರತರವಾಗುವ ಸ್ವಯಂ ಸಾಮರ್ಥ್ಯವನ್ನು ಹೊಂದಿದೆ.ಗಾಳಿಗೆ ಚಾಲನೆ ನೀಡುವ ತಾಕತ್ತು ಮತ್ತೊಂದಿಲ್ಲ. ತಂಗಾಳಿಯಾಗಿದ್ದುದು ತಾನೇ ಸುಳಿಗಾಳಿಯಾಗುತ್ತದೆ.ಸುಳಿಗಾಳಿಯಾಗಿದ್ದು ತಾನೇ ಬಿರುಗಾಳಿಯಾಗುತ್ತದೆ. ಬಿರುಗಾಳಿ- ಬಿರುಗಾಳಿಗಳ ತಾಕಲಾಟದಲ್ಲಿ ಬೆಂಕಿ ಜನಿಸುತ್ತದೆ.ಘರ್ಷಣೆಯಿಂದ ಸಿಡಿಲು ಉಂಟಾಗುತ್ತದೆ ಎಂದು ವಿಜ್ಞಾನ ಹೇಳಿದರೂ ಘರ್ಷಣೆಗೆ ಅಲ್ಲಿ ಘನ ವಸ್ತುಗಳೇ ಇರುವುದಿಲ್ಲ. ಅದೇನೇ ಇರಲಿ ಗಾಳಿಯಿಂದ ಬೆಂಕಿ ಉಂಟಾಗುತ್ತದೆ ಎಂಬುದು ಎಲ್ಲರ ಅನುಭವಕ್ಕೆ ಬರುವ ವಿಚಾರ.

ಬೆಂಕಿಯನ್ನು ನೀವು ಸುಡಲಾರದ ವಸ್ತುವಿನ ಮೇಲೆ ಇಟ್ಟು ನೋಡಿರಿ. ಅಲ್ಲಿ ನೀರಿನ ಹನಿಗಳು ಕಾಣಿಸಿಕೊಳ್ಳುತ್ತವೆ ಅಂದರೆ ಅಗ್ನಿ ನೀರಿಗೆ ಜನ್ಮ ನೀಡುತ್ತದೆ.

ನೀರನ್ನು ತಾನೇ ಆವಿಯಾಗುವಂತೆ ಮಾಡಿದರೆ ಅಲ್ಲಿ ಮಣ್ಣು ಅರ್ಥಾತ್ ಪೃಥ್ವಿ ಹುಟ್ಟಿಕೊಳ್ಳುತ್ತದೆ. ಭೂಮಿಯ ಉಬ್ಬುತ್ತಗಿಗೆ ನೀರೇ ಕಾರಣ. ಭೂಮಿಯ ರೂಪ ರಚನೆ ಮಾಡುವಂಥದ್ದು ನೀರು.

ಭೂಮಿಯಿಂದ ಧನಕರುಗಳು, ಪಶು ಪಕ್ಷಿಗಳು, ಮೃಗ ಸಂಕುಲಗಳು , ಮಾನವ ಜನಾಂಗ ಎಲ್ಲವೂ ಸೃಷ್ಟಿಯಾದವೆಂಬುದನ್ನು ವೈಜ್ಞಾನಿಕವಾಗಿ ಡಾರ್ವಿನ್ ಥಿಯರಿ ಹೇಳಿಕೊಡುತ್ತದೆ. ಮೊದಲು ಜಲಚರಗಳು ಕಾಣಿಸಿಕೊಂಡವು, ಭೂಚರಗಳು ನಂತರ ಕೇಚರಗಳು ಕಾಣಿಸಿಕೊಂಡವು.ಮಂಗನಿಂದ ಮಾನವನಾದ, ಮಾನವನಿಂದ ಜಗತ್ತಾಯ್ತು. ಇವೆಲ್ಲ ಪರಮಾತ್ಮನ ನೆನಪಿನಿಂದಾದವು.

ಸುಮಾರು 800 ವರ್ಷಗಳ ಪೂರ್ವದಲ್ಲಿ ವಿಜ್ಞಾನವು ಈಗಿನಷ್ಟು ವಿಕಾಸ ಆಗಿರದೆ ಇದ್ದಾಗಲೂ ಕೂಡ ಶರಣರು ತಮ್ಮ ಪ್ರತಿಭಾ ಚಕ್ಷುವಿನಿಂದ ವೈಜ್ಞಾನಿಕ ಸತ್ಯಗಳನ್ನು ಕಂಡುಕೊಂಡು ಪ್ರತಿಯೊಂದರ ಸ್ವರೂಪವನ್ನು ವಿವರಿಸಲು ಯತ್ನಿಸಿದರಲ್ಲ ಎಂದು ಆಶ್ಚರ್ಯವಾಗುತ್ತದೆ. (ಚಿತ್ರ ಕೃಪೆ : ಅಂತರ್ಜಾಲ)

ಸುಧಾ ಪಾಟೀಲ, ವಿಶ್ವಸ್ಥರು                                       ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ ಪುಣೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸರ್ವಜ್ಞ ವಚನ ಸಾರ : ವಿಭೂತಿ ರುದ್ರಾಕ್ಷಿ ಮಹತ್ವ

ಲಿಂಗದ ಮೈವೆಳಗು ಮಂಗಳದ ಚಿದ್ಭಸ್ಮ ಹಿಂಗದೆ ಧರಿಸಿದವನಿಗೆ ಶಿವನು ಚಿ- ದಂಗವಾಗಿಕ್ಕು ಸರ್ವಜ್ಞ ಭಸ್ಮದ ಮಹತ್ವವನ್ನು ಸರ್ವಜ್ಞ ಈ ತ್ರಿಪದಿಯಲ್ಲಿ ತಿಳಿಸಿದ್ದಾನೆ. ಆಕಳ ಒಣಗಿದ‌ ಸಗಣಿಯ ಕುರುಳು ಸುಟ್ಟು ಮಾಡಿದ ಬೂದಿಯಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group