ಸಿಂದಗಿ: ಸರ್ಕಾರಕ್ಕೆ ನಷ್ಟ ಮತ್ತು ವಂಚನೆ ಮಾಡುತ್ತಿರುವ ಪುರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಸಿಂದಗಿಕರ ಮಾತನಾಡಿ, ತೆರಿಗೆ ಎಂಬುದು ಸರ್ಕಾರ ಮತ್ತು ಪುರಸಭೆಯ ಆರ್ಥಿಕ ವ್ಯವಸ್ಥೆಯ ಒಂದು ಭಾಗ. ಈ ತೆರಿಗೆಯಿಂದ ಪಟ್ಟಣದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಪಟ್ಟಣವನ್ನು ರಾಜ್ಯದಲ್ಲಿಯೇ ಮಾದರಿಯ ಪಟ್ಟಣವನ್ನಾಗಿ ಮಾಡಬಹುದು ಆದರೆ ಸಿಂದಗಿ ಪುರಸಭೆ ಅಧಿಕಾರಿಗಳು ತೆರಿಗೆ ವಸೂಲಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಲ್ಲದೆ ಪಟ್ಟಣದಲ್ಲಿ ನಾಯಿಕೊಡೆಗಳಂತೆ ಬೆಳೆದು ನಿಂತ ಅನೇಕ ಮಂಗಳ ಕಾರ್ಯಾಲಯಗಳು, ವಾಣಿಜ್ಯ ಮಳಿಗೆಗಳು ಬಂಡವಾಳ ಶಾಹಿಗಳ ಮನೆಗಳು ಹಾಗೂ ಲಾಡ್ಜ್ ಗಳು, ಖಾಸಗಿ ಶಿಕ್ಷಣ ಸಂಸ್ಥೆಯ ಕಟ್ಟಡಗಳಿಗೆ ಯಾವುದೇ ರೀತಿಯ ತೆರಿಗೆ ವಸೂಲಿ ಮಾಡದೆ ಸರ್ಕಾರಕ್ಕೆ ನಷ್ಟ ಮತ್ತು ವಂಚನೆ ಮಾಡುತ್ತಿದ್ದಾರೆ. ಮತ್ತು ಇದರಲ್ಲಿ ಅನೇಕ ಮಂಗಲ ಕಾರ್ಯಾಲಯ, ಲಾಡ್ಜ್ ಮತ್ತು ಬಂಡವಾಳ ಶಾಹಿಗಳ ಮನೆಗಳು ಪುರಸಭೆಯ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಕಟ್ಟಿಕೊಂಡಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಮನವಿ ಪತ್ರ ಸಲ್ಲಿಸಿದರೂ ಸಹ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ. ಇದರಿಂದ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ದೂರಿದರು.
ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಅನಧಿಕೃತವಾಗಿ ಅನುಮತಿ ಇಲ್ಲದೆ ಕಟ್ಟಡವನ್ನು ನಿರ್ಮಾಣ ಮಾಡಿದವರ ಮೇಲೆ ಪುರಸಭೆ ಕಾಯ್ದೆ 164 ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಬೇಕಾಗಿತ್ತು. ಆದರೆ ಪಟ್ಟಣದ ಬಡ ಜನರ ಮೇಲೆ ಅಧಿಕಾರದ ದರ್ಪ ತೋರಿ ತೆರಿಗೆ ವಸೂಲಿ ಮಾಡುತ್ತಿರುವುದು ಖಂಡನೀಯ ಕೂಡಲೇ ಮೇಲಧಿಕಾರಿಗಳು ಈ ವಿಷಯದ ಮೇಲೆ ಕೂಲಂಕುಶವಾಗಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ನಷ್ಟ ಮತ್ತು ವಂಚನೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಕೇಶ ಕಾಂಬಳೆ, ಅರ್ಜುನ ಜಾಬನವರ, ರವಿಕುಮಾರ ಹೊಸಮನಿ, ಶರಣಮ್ಮ ರಾಠೋಡ, ಹರ್ಷವರ್ಧನ ಪೂಜಾರಿ, ಶ್ರೀನಾಥ ಹೊಸಮನಿ, ಬಾಲಕೃಷ್ಣ ಚಲವಾದಿ, ಸಲೀಂ ಜಮಾದಾರ, ಆಸ್ಪಾಕ ಮಕಾಂದಾರ, ರಜತ ತಾಂಬೆ, ದಸ್ತಗೀರ ಆಳಂದ, ಯಮನಪ್ಪ ನಾಲ್ಕಮನ, ಜಾವೀದ ಕರ್ಜಗಿ, ಸರಣು ಹಿಟ್ನಳ್ಳಿ, ಸಂಜಿವ ಕೊಕಟನೂರ, ರವಿ ದೊಡಮನಿ ಸೇರಿದಂತೆ ಹಲವರಿದ್ದರು.