ಬಡ ಮಕ್ಕಳಿಗೆ ಕೌಶಲ್ಯ ಮತ್ತು ಜ್ಞಾನ ನೀಡುವುದು ದಾಲ್ಮಿಯಾ ಉದ್ದೇಶ

Must Read

ಮೂಡಲಗಿ: ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಕೌಶಲ್ಯ ಮತ್ತು ಜ್ಞಾನ ನೀಡುವದರ ಜೊತೆಗೆ ಉದ್ಯೋಗ ನೀಡುವ ದಾಲ್ಮಿಯಾ ಭಾರತ ಫೌಂಡೇಶನ್ ಮುಖ್ಯ ಉದ್ದೇಶವಾಗಿದೆ ಎಂದು ದಾಲ್ಮಿಯಾ ಭಾರತ ಫೌಂಡೇಶನ್ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ಘಟಕದ ಮುಖ್ಯಸ್ಥ ಪ್ರಭಾತಕುಮಾರ ಸಿಂಗ್ ಹೇಳಿದರು.

ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಾಲ್ಮಿಯಾ ಭಾರತ ಫೌಂಡೇಶನದ ದಾಲ್ಮಿಯಾ ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಸಹಾಯಕ ಇಲೇಕ್ಟ್ರಿಷಿಯನ್ ವೃತ್ತಿಯ ತರಬೇತಿ ಘಟಕವನ್ನು ಉದ್ಘಾಟಿಸಿ ಮಾತನಾಡಿ, ದಾಲ್ಮಿಯಾ ಪೌಂಡೇಶನದಿಂದ ದೇಶದ ವಿವಿಧ ಭಾಗಗಳಲ್ಲಿ ೧೪ ಕೇಂದ್ರಗಳಲ್ಲಿ ಯುವಕ-ಯುವತಿಯರಿಗೆ ಸ್ವ-ಉದ್ಯೋಗಕ್ಕಾಗಿ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ. ಬೆಳಗಾವಿಯಲ್ಲಿ ಈಗಾಗಲೇ ಮಹಿಳೆಯರಿಗಾಗಿಯೇ ಬ್ಯೂಟಿಸಿಯನ್ ತರಬೇತಿ ಕೇಂದ್ರ ಆರಂಭವಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕೇವಲ ಓದು-ಬರಹಗಾಗಿಯೇ ಸೀಮಿತವಾಗಬಾರದು ನಮ್ಮ ದೇಶಕ್ಕೆ ಕೌಶಲ್ಯವನ್ನು ಹೊಂದಿದ ಯುವಕರ ಅವಶ್ಯಕತೆ ಹೆಚ್ಚಾಗಿದೆ ಎಂದರು.

ಯುವಕ-ಯುವತಿಯರಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಹೊರಗೆ ತರುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ಧೇಶವಾಗಿದೆ ಎಂದ ಅವರು ಮೂಡಲಗಿಯಲ್ಲಿ ಆರಂಭವಾದ ಜ್ಞಾನ ಮತ್ತು ಕೌಶಲ್ಯ ಕೇಂದ್ರವನ್ನು ಮೂಡಲಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಯುವಕ-ಯುವತಿಯರು ಸದುಪಯೋಗ ಪಡಿಸಿಕೊಂಡು ತಂದೆ-ತಾಯಿಗಳಿಗೆ ಮತ್ತು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬಾಳಿ ಬೆಳಗಬೇಕೆಂದರು.

ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಎಲ್ಲರಿಗೂ ಸರಕಾರಿ ಉದ್ಯೋಗ ಸಿಗುವುದು ದುರ್ಲಭವಾಗಿದ್ದು ಅಂತಹದರಲ್ಲಿ ದಾಲ್ಮಿಯಾ ಫೌಂಡೇಶನ್ ಸಂಸ್ಥೆಯವರು ವೃತ್ತಿ ಕೌಶಲ್ಯ ತರಬೇತಿ ನೀಡಿ ಯುವ ಜನಾಂಗಕ್ಕೆ ಸ್ವಾವಲಂಬಿ ಜೀವನ ಮಾಡಲು ಶ್ರಮಿಸುತ್ತಿರುವದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬೆಳಗಾವಿ ಸ್ಪೂರ್ತಿ ಮಹಿಳಾ ಸಂಘದ ಅಧ್ಯಕ್ಷೆ ವಂದನಾ ಸಿಂಗ್ ಮಾತನಾಡಿ, ಯುವಕ-ಯುವತಿಯರ ಭವ್ಯ ಭವಿಷ್ಯದ ಒಳಿತಿಗಾಗಿ ದಾಲ್ಮಿಯಾ ಸಂಸ್ಥೆಯು ಸಮಾಜಮುಖಿಯಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯ ಮಾಡುತ್ತಿದೆ. ಯುವಕರು ಒಂದರಲ್ಲಿ ಕೌಶಲ್ಯವನ್ನು ಪಡೆದುಕೊಂಡು ಸ್ವಾವಲಿಂಬಿಯಾಗಬೇಕು. ದೇಶಕ್ಕೆ ಹೊರೆಯಾಗಬಾರದು, ಪ್ರತಿಯೊಬ್ಬರ ಜೀವನದಲ್ಲಿ ಪರಿಶ್ರಮಕ್ಕೆ ಯಾವುದೇ ಹೊಲಿಕೆ ಇಲ್ಲ ಯುವಕರು ಪರಿಶ್ರಮಿಗಳಾಗಬೇಕು ಎಂದರು.

ಯಾದವಾಡ ದಾಲ್ಮಿಯಾ ಕಾರ್ಖಾನೆಯ ಕಾರ್ಯಕ್ರಮಾಧಿಕಾರಿ ರಾಮನಗೌಡ ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಾದ್ಯಂತ ನಡೆಯುತ್ತಿರುವ ದಾಲ್ಮಿಯಾ ತರಬೇತಿ ಕೇಂದ್ರದಲ್ಲಿ ೬೭೦೦ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ಸಂಸ್ಥೆ ತರಬೇತಿ ಪಡೆದ ಯುವಕರು ಒಳ್ಳೆಯ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ವಿವಿಧ ಘಟಕದ ಮುಖ್ಯಸ್ಥರಾದ ಮನಿಷ ಮಹೇಶ್ವರಿ, ಅನೀಲ ಕಾವಳೆ, ಅರಬಿಂದಕುಮಾರ ಸಿಂಗ್, ಆನಂದಕುಮಾರ ತಿವಾರಿ, ಉಮೇಶ ದೇಸಾಯಿ, ಮಾನವ ಸಂಪನ್ಮೂಲ ವಿಭಾಗ ಅಧಿಕಾರಿಗಳಾದ ಈರಸಂಗಯ್ಯ ಭಾಗೋಜಿಮಠ, ಶಶಿಕಾಂತ ಹಿರೇಕೊಡಿ, ಅಮಿತಕುಮಾರ ಪಾಂಡೆ, ರಾಮನಗೌಡ ಬಿರಾದಾರ, ಶ್ರೀಧರ ಪಾಟೀಲ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪವನಕುಮಾರ ಕೆ.ಎಸ್, ಪಿಯು ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಪಾಟೀಲ, ಗ್ರಂಥಪಾಲಕ ಡಾ.ಬಸವಂತ ಬರಗಾಲಿ ಮತ್ತು ಉಪನ್ಯಾಸಕರು ಮತ್ತಿತರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ಎಮ್.ಎಸ್.ಕುಂದರಗಿ ಸ್ವಾಗತಿಸಿದರು, ಲೋಕೇಶ ಹಿಡಕಲ್ ನಿರೂಪಿದರು, ಪ್ರಕಾಶ ಚೌಡಕಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group