ನವರಾತ್ರಿ ಹಬ್ಬದ ನಾಲ್ಕನೇ ದಿನದ ವಿಶೇಷತೆ
ಅಶ್ವಯುಜ ಶುಕ್ಲ ಪಾಡ್ಯಮಿಯಿಂದ ದಶಮಿಯತನಕ ಆಚರಿಸಲ್ಪಡುವ ಪವಿತ್ರ ಮಹಿಮೆಯಿಂದ ಕೂಡಿದ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳು ಆಚರಿಸಲ್ಪಡುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂದು ಹೆಸರು ಬಂದಿದೆ.
ನವರಾತ್ರಿ ಹಬ್ಬದ ಒಂಭತ್ತು ದಿನವೂ ಶಕ್ತಿ ದೇವಿ ಜಗನ್ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ನಂತರ ಮೂರು ದಿನ ಮಹಾಲಕ್ಷ್ಮಿಯನ್ನೂ, ಕೊನೆಯ ಮೂರು ದಿನ ಮಹಾ ಸರಸ್ವತಿಯನ್ನು ಪೂಜಿಸಲಾಗುತ್ತಿದೆ. ಮಹಾಕಾಳಿ ತಾಮಸ ಗುಣಕ್ಕೂ, ಮಹಾಲಕ್ಷ್ಮಿ ರಾಜಸಗುಣಕ್ಕೂ, ಮಹಾಸರಸ್ವತಿ ಸಾತ್ವಿಕ ಗುಣದ ಸಂಕೇತ. ನವರಾತ್ರಿ ಆಚರಿಸುವ ಭಕ್ತರು ತಾಮಸದಿಂದ ರಾಜಸದೆಡೆಗೆ, ರಾಜಸದಿಂದ ಸಾತ್ವಿಕದೆಡೆಗೆ ಬಂದಾಗ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತದೆ.
ಒಂಬತ್ತು ದುರ್ಗೆಯರು:
- ಶೈಲಪುತ್ರಿ
- ಬ್ರಹ್ಮಚಾರಿಣಿ
- ಚಂದ್ರಘಂಟಾ
- ಕೂಷ್ಮಾಂಡಾ
- ಸ್ಕಂದ ಮಾತೆ
- ಕಾತ್ಯಾಯನಿ
- ಕಾಳರಾತ್ರಿ
- ಮಹಾಗೌರಿ
- ಸಿದ್ಧಿದಾತ್ರಿ
ನವರಾತ್ರಿ ಹಬ್ಬದ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯನ್ನು ಪೂಜೆ ಮಾಡಲಾಗುತ್ತದೆ. ದುರ್ಗಾ ದೇವಿಯ ಒಂಬತ್ತು ಅವತಾರಗಳ ನಾಲ್ಕನೇ ರೂಪವಾದ ಕೂಷ್ಮಾಂಡಾ ದೇವಿ ಕೂಡ ಒಬ್ಬಳು. ಹಿಂದೂ ಧರ್ಮಗ್ರಂಥಗಳ ಪ್ರಕಾರ ಕೂಷ್ಮಾಂಡಾ ದೇವಿಯು ಬ್ರಹ್ಮಾಂಡ ಸೃಷ್ಟಿಯ ಶಕ್ತಿಯ ಮೂಲವಾಗಿದ್ದಾಳೆ. ಶಕ್ತಿ ಮತ್ತು ಬೆಳಕನ್ನು ಸಮತೋಲನಗೊಳಿಸಲು ಪಾರ್ವತಿ ದೇವಿಯು ಸೂರ್ಯನ ಮಧ್ಯದಲ್ಲಿ ನೆಲೆಸಿದಳು ಎಂದು ಹೇಳಲಾಗುತ್ತದೆ. ಕೂಷ್ಮಾಂಡಾ ದೇವಿಯು ಎಂಟು ಕೈಗಳನ್ನು ಹೊಂದಿರುವುದರಿಂದ ಆಕೆಯನ್ನು ಅಷ್ಟಭುಜ ಎಂದು ಕರೆಯಲಾಗುತ್ತದೆ. ಜೊತೆಗೆ ತನ್ನ ಭಕ್ತರಿಗೆ ಸಂಪತ್ತು, ಸಮೃದ್ಧಿ ಮತ್ತು ಆರೋಗ್ಯವನ್ನು ಅನುಗ್ರಹಿಸುವ ದೇವತೆ ಎಂದು ಕರೆಯಲಾಗುತ್ತದೆ.
ಯಾವುದೇ ಸೃಷ್ಟಿ ಇಲ್ಲದಿದ್ದಾಗ ಮತ್ತು ಸುತ್ತಲೂ ಕತ್ತಲೆ ಆವರಿಸಿದಾಗ, ಅವಳು ವಿಶ್ವವನ್ನು ದೈವಿಕ ಶಕ್ತಿಯಿಂದ ಸೃಷ್ಟಿಸಿದಳು ಎನ್ನುವ ನಂಬಿಕೆಯಿದೆ. ಮಾತಾ ಕೂಷ್ಮಾಂಡ ವೇಗದ ದೇವತೆ. ಅವುಗಳ ಕಾಂತಿ ಮತ್ತು ಪ್ರಭಾವದಿಂದಾಗಿ, ಹತ್ತು ದಿಕ್ಕುಗಳು ಬೆಳಕನ್ನು ಪಡೆಯುತ್ತವೆ. ಇಡೀ ಬ್ರಹ್ಮಾಂಡದ ಎಲ್ಲಾ ವಸ್ತುಗಳು ಮತ್ತು ಜೀವಿಗಳ ಹೊಳಪು ಕೂಷ್ಮಾಂಡ ದೇವಿಯ ಉಡುಗೊರೆ ಎಂದು ಹೇಳಲಾಗುತ್ತದೆ.
ಪೃಥ್ವಿಗೆ ಅಧಿಪತಿಯಾಗಿರುವ ತಾಯಿ ಕೂಷ್ಮಾಂಡಳು ಸೂರ್ಯನ ಕೇಂದ್ರ ಸ್ಥಾನದಲ್ಲಿ ವಾಸಿಸುತ್ತಾಳೆ ಎಂದು ನಂಬಿಕೆ. ಸೂರ್ಯನಿಗಿಂತ ತಾಯಿ ಕೂಷ್ಮಾಂಡಳು ಹೆಚ್ಚು ಪ್ರಕಾಶಮಾನವಾಗಿದ್ದು, ಈಕೆಯ ವರದಿಂದಲೇ ಸೂರ್ಯನು ಕಾಯಿಲೆಗಳನ್ನು ವಾಸಿಮಾಡುವ ಗುಣವನ್ನು ಹೊಂದಿದ್ದಾನೆ.
ತಾಯಿ ಕೂಷ್ಮಾಂಡಳು ಸಿಂಹದ ಮೇಲೆ ಕುಳಿತಿದ್ದು, ಎಂಟು ಕೈಗಳನ್ನು ಹೊಂದಿದ್ದಾಳೆ. ಕಮಂಡಲ, ಧನಸ್ಸು, ಜಪಮಾಲೆ, ಕಮಲ (Lotus), ಗದೆ, ಅಮೃತ ಕಳಶ, ಚಕ್ರ ಹಾಗೂ ಬಾಣವನ್ನು ಹಿಡಿದಿದ್ದಾಳೆ. ದುರ್ಗಾಸಪ್ತಶತಿಯ ಪ್ರಕಾರ ಕೂಷ್ಮಾಂಡ ದೇವಿಯೇ ಜಗದ ಸೃಷ್ಟಿಗೆ ಕಾರಣೀಭೂತಳಾಗಿದ್ದಾಳೆ. ಸೌರವ್ಯೂಹದ ಗ್ರಹಗಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಆಕೆ ಇರುವಲ್ಲಿ ಬೆಳಕು ಹಾಗೂ ಜ್ಞಾನವಿದೆ. ಕೂಷ್ಮಾಂಡ ದೇವಿಯು ತನ್ನ ಏಳೂ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ತಾವರೆ ಹೂವು, ಚಕ್ರ, ಗದೆ ಹಾಗೂ ಜಪಮಾಲೆಯನ್ನು ಹಿಡಿದಿದ್ದಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ. ವ್ಯಾಘ್ರವಾಹಿನಿಯಾಗಿರುವ ಈಕೆ ಧರ್ಮದ ಪ್ರತೀಕವಾಗಿದ್ದಾಳೆ.
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ
ಮಾಹಿತಿ ಕೃಪೆ: ಅಂತರ್ಜಾಲ