ಬೆಳಕಿನ ಹಬ್ಬ ದೀಪಾವಳಿ.

Must Read
            ‘ಹಬ್ಬಗಳ ರಾಜ’ ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ’ ಬೆಳಕಿನ ಹಬ್ಬ  ದೀಪಾವಳಿ ಹಬ್ಬ’. ದೇಶದಾದ್ಯಂತ ಆಚರಣೆಯಲ್ಲಿ ಇರುವುದೇ ಈ ಹಬ್ಬದ ವೈಶಿಷ್ಟ. ‘ದೀಪಾಲಿಕಾ’, ‘ ದಿವಾಲಿ’ ,’ದೀಪಾವಳಿ’, ‘ಹಟ್ಟಿಯ ಹಬ್ಬ’ ಇತ್ಯಾದಿ ಹೆಸರುಗಳಲ್ಲಿ ಕರೆಯುವ ಈ ಹಬ್ಬವು ಪೌರಾಣಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ತುಂಬಾ ಮಹತ್ವದ್ದು. ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಕೈದೀವಿಗೆ.ಕತ್ತಲೆಗೂ ಬೆಳಕಿಗೂ ನಡೆದಿರುವ ನಿರಂತರ ಹೋರಾಟದಲ್ಲಿ ಬೆಳಕು ಗೆಲ್ಲುವುದರ ಸಂಕೇತ. ದೀಪಾವಳಿಯ ಬೆಳಕು ಎಲ್ಲ ಚೇತನಗಳ ಆಧಾರ. ಕ್ರಿಯಾಶಕ್ತಿ, ಬೆಳಕೇ ಬದುಕು. ಮಾನವ ಬೆಳಕನ್ನು ಕುರಿತು ವಿಧ ವಿಧವಾಗಿ ಪ್ರಾರ್ಥನೆಗೈದಿದ್ದಾನೆ. ಅದನ್ನೇ ಜ್ಞಾನವೆಂದು ಆರಾಧಿಸಿದ್ದಾನೆ. ಮನೆ ಮನಗಳನ್ನು ಬೆಳಗುವ ದೀಪಗಳ ಬೆಡಗು ಒಂದು ಬಗೆಯಾದರೆ, ಮನೆಗಳ ಎದುರು ಹಾಗೂ ಮೇಲೆ ಬೆಳಗುವ ಆಕಾಶಬುಟ್ಟಿಗಳ ಸೊಬಗು ಇನ್ನೊಂದು ಬಗೆಯಾಗಿರುವುದು. ಬಣ್ಣ ಬಣ್ಣದ ಶಿವನ ಬುಟ್ಟಿಗಳು ನಿಜಕ್ಕೂ ಗಂಧರ್ವ ಲೋಕವೊಂದನ್ನು ಸೃಜಿಸುವಂತಹ  ದೀಪಾವಳಿ ಕಣ್ಣಿಗೊಂದು ರಂಗು ರಂಗಾದ ಹಬ್ಬ. ತಮಸ್ಸಿನಿಂದ  ಜ್ಯೋತಿಗೆ ಮುನ್ನಡೆಯಬೇಕೆಂಬ ಹಂಬಲ ದೀಪಾವಳಿಯ ಆಧ್ಯಾತ್ಮಿಕ ಹಾಗೂ ಲೌಕಿಕ ಸಂದೇಶವಾಗಿರುತ್ತದೆ.
ದೀಪಾವಳಿಯ ದಿನದಂದು ನಮ್ಮ ಆತ್ಮದ ಜ್ಯೋತಿಯನ್ನು ಸರ್ವರೂ ಬೆಳೆಸಿಕೊಳ್ಳಬೇಕು. ಮನಕ್ಕೆ ಹತ್ತಿದ ಮಾಲಿನ್ಯವನ್ನು ಜ್ಞಾನ ವಿವೇಕ ದೈವ ಭಕ್ತಿ ಸ್ನೇಹ ಸೌಹಾರ್ದಗಳಿಂದ ತೊಡೆದು ಹಾಕಬೇಕು. ಮನದಲ್ಲಿಯೇ ಪರಮಾತ್ಮನಿಗಾಗಿ ಹಣತೆಯನ್ನು ಹಚ್ಚಬೇಕು. ಆತ್ಮ ವಿಜಯದ ಬಯಕೆಯಲ್ಲಿ ಇದೊಂದು ಪ್ರಾಮಾಣಿಕ ಪ್ರಯತ್ನ. ದಾರ್ಶನಿಕ ಪ್ಲೇಟೋ ಹೇಳಿದಂತೆ “ಆತ್ಮ ವಿಜಯದಷ್ಟು ಉನ್ನತ ಜಯ ಇನ್ನೊಂದಿಲ್ಲ ತಾನೇ.” ಜೊತೆಗೆ ಸಾತ್ವಿಕ ಶಕ್ತಿಗಳು ತಲೆಯೆತ್ತಿ ಮೈ ತುಂಬಿಕೊಂಡು ನಿಲ್ಲಬೇಕೆಂಬ ಸದಾಶಯ ದೀಪಾವಳಿಯ ಆಚರಣೆಯಲ್ಲಿದೆ. ಶತಮಾನಗಳಿಂದ ಭಾರತೀಯರು ಆಧ್ಯಾತ್ಮಿಕ ಜೀವನವನ್ನು ಲೌಕಿಕ ದೊಡನೆ ಸಮನ್ವಯಗೊಳಿಸುವ ಸಫಲ ಯತ್ನ ಮಾಡುತ್ತಾ ಬಂದಿದ್ದಾರೆ. ದೀಪಾವಳಿ ತನ್ನ ಲೌಕಿಕ ಪರಿಸರದಲ್ಲಿ ಬೀರುವ ಸಂದೇಶ ಕೂಡ ಅರ್ಥಪೂರ್ಣವಾಗಿದೆ.

ದೀಪವನ್ನು ‘ಜ್ಞಾನ’ವೆಂದು ಭಾವಿಸುವುದರಿಂದ ‘ದೀಪಾರಾಧನೆ ‘ ಪರೋಕ್ಷವಾಗಿ ಜ್ಞಾನದ ಪೂಜೆಯೇ ಆಗಿರುತ್ತದೆ. ಬಂಧು-ಬಾಂಧವರಲ್ಲಿ ಆತ್ಮೀಯತೆ ಮಾನವೀಯತೆಯ ಎಳೆಗಳನ್ನು ಗಟ್ಟಿಗೊಳಿಸುವುದು ಈ ಹಬ್ಬದಿಂದ ಸಾಧ್ಯವಾಗಿದೆ. ಆಪ್ತೇಷ್ಟರ ಸಮ್ಮಿಲನ ಸಾಮೂಹಿಕ ಆರತಿ ಅರ್ಚನೆ ಉಡುಗೊರೆ ವಿನಿಮಯ ಇವು ಸ್ವಾಭಾವಿಕವಾಗಿ ಆತ್ಮೀಯರ ನಡುವಿನ ಸಂಬಂಧಗಳನ್ನು ಇನ್ನಷ್ಟು ಮಧುರಗೊಳಿಸುವುದು ಸಹಜಾನುಭವ. ಈ ಹಬ್ಬದಂದು ಮಾಡುವ ಆರತಿ ಹಾಗೂ ವಿತರಿಸುವ ಉಪಹಾರಗಳಲ್ಲಿ ಹತ್ತಿರದ ಮಿತ್ರರು ಬಂಧು ಬಳಗದವರು ಪಾಲ್ಗೊಂಡು ಸಂಭ್ರಮ ಸಡಗರವನ್ನು ಇಮ್ಮಡಿಗೊಳಿಸುವುದು ವಾಸ್ತವಿಕ ಚಿತ್ರಣ.

ಹಬ್ಬಗಳಲ್ಲೆಲ್ಲ ಹಿರಿಯ ಹಬ್ಬ ದೀಪಾವಳಿ ಸೊಗಸಿನ ಸ್ನೇಹ ಸಮ್ಮೇಲನ. ಆನಂದ ವಿನೋದ ಅಭ್ಯಂಜನ ಆಟ ನೋಟ ಸವಿಯೂಟ ವಿಧ ವಿಧದ ತಿಂಡಿ ತಿನಿಸುಗಳು ಕ್ರೀಡೆಗಳು ಪ್ರಿಯ ಜನರ ಸಮಾಗಮವುಳ್ಳ ಬಾಂಧವ್ಯದ ಹಿರಿಮೆಯ ವಿಶಿಷ್ಟ ಹಬ್ಬವಿದು. ಹಿಂಗಾರಿ ಮಳೆಯು ಪ್ರಾರಂಭವಾಗಿ ಬಿತ್ತಿಗೆಗಳೆಲ್ಲ ಮುಗಿದು ಸಸಿಗಳು ತಲೆಯೆತ್ತಿ ಗರಿ ಬಿಡುತ್ತಿರಲು ಬರುವ ದೊಡ್ಡ ಸಂಪ್ರದಾಯದ ಹಬ್ಬವೆಂದರೆ ಈ ‘ಹಟ್ಟಿ ಹಬ್ಬ’. ನಾರಿಯರು ‘ನೀರು ತುಂಬುವ ಹಬ್ಬ’ವೆಂದೂ ಕರೆಯುವರು. ಆಗ ಮನೆಯಲ್ಲಿ ದೀಪಾರಾಧನೆಯಾಗುವುದು. ಮಹಿಳೆಯರು ಆರತಿ ಎತ್ತುವರು. ಪಾಂಡವರು ಅಜ್ಞಾತವಾಸ ಮುಗಿಸಿಕೊಂಡು ವಿಜಯ ದಶಮಿಯಾದ ನಂತರ ದಕ್ಷಿಣ ಭರತ ಖಂಡವನ್ನು ಬಿಟ್ಟು ಉತ್ತರಕ್ಕೆ ಹಸ್ತಿನಾವತಿಯನ್ನು ಸೇರುವರೆಂದು ಪೌರಾಣಿಕ ಕಥೆಯುಂಟು. ಹೀಗಾಗಿ  ಒಕ್ಕಲಿಗರು ಪ್ರತಿಪದೆಯ ದಿನ ಶಗಣಿಯ ಪಾಂಡವರನ್ನು  ಮಾಡಿ ಅವರನ್ನು ಊರಲ್ಲಿ ಬರಮಾಡಿಕೊಳ್ಳುವರು. ಒಕ್ಕಲಿಗರ ಮನೆಯಲ್ಲಿ ಹಟ್ಟಿಯಲ್ಲಿಯೂ ಪಾಂಡವರೇ ಪಾಂಡವರು. ಸುತ್ತಮುತ್ತಲೂ ಪಾಂಡವರ ಹೆಜ್ಜೆಗಳೇ ಹೆಜ್ಜೆಗಳು.

ಈ ಹಬ್ಬಕ್ಕೆ ತವರು ಮನೆಗೆ ಹೆಣ್ಣು ಮಕ್ಕಳು ಬರುವದರಿಂದ ಹೆಣ್ಣು ಮಕ್ಕಳ ದೊಡ್ಡ ಹಬ್ಬವೂ ಇದಾಗಿದೆ. ಜಾನಪದ ಗರತಿಯ ಪದವೊಂದು ಇದಕ್ಕೆ ಉತ್ತಮ ನಿದರ್ಶನದಂತಿದೆ.

“ಕಾರಹುಣವಿ ಹಬ್ಬಕ ಕರಿಲಾಕ ಬರಬ್ಯಾಡ
ಕಾರ ಬಾಡೀಗಿ ಕೊಡಬ್ಯಾಡ/ ನನ್ನಣ್ಣ
ಹೊನ್ನ ದೀವಳಿಗಿ ಮರಿಬ್ಯಾಡ.”

ಎಂದು ತಂಗಿಯು ಅಣ್ಣನಿಗೆ ಹೊನ್ನ ದೀವಳಿಗೆಗೆ ಕರೆಯಲು ಬರುವುದನ್ನು ಮರೆಯಬ್ಯಾಡೆಂದು ಎಚ್ಚರಿಸಿದ್ದಾಳೆ. ವರುಷದ ಗಳಿಕೆಯ ಲೆಕ್ಕವು ಈ ಹಬ್ಬದಲ್ಲಿ ಆಗುವುದರಿಂದಾಗಲಿ,ಲಕ್ಷ್ಮೀ ಪೂಜೆಯು ನಡೆಯುವುದರಿಂದಾಗಲಿ ಹೆಣ್ಣು ಮಕ್ಕಳು ‘ಹೊನ್ನ ದೀವಳಿಗೆ ಹಬ್ಬ’ವೆಂದು ಕರೆದಿದ್ದಾರೆ.

‘ನಾಲ್ಕು ದಿಕ್ಕಿಗೆ ಹಬ್ಬ ಬಂದಿತು ಒಳ್ಳೇ ದೀವಳಿಗೆ
ನಾಚುತಲಿ ನಲಿಯುತ ಹೆಣ್ಮಕ್ಕಳು ಬಂದರು ತಮ್ಮ ತವರು ಮನೆಗೆ.’ ಎಂದು ನಾಡಹೆಣ್ಣಿನ ಈ ಹಬ್ಬದ ಮನದಾಶೆಯನ್ನು ಲಾವಣಿಗಾರರು ಹಾಡಿದ್ದಾರೆ. ಹೆಣ್ಣು ಮಕ್ಕಳು ಬನದೂಟವನ್ನು ಸೌರಿಸುವರು. ಎಲ್ಲರೂ ಕೂಡಿಕೊಂಡು ಅಲ್ಲಿಕೇರಿಯನ್ನು ಸಂಭ್ರಮ ಸಡಗರದಿಂದ ಆಚರಿಸಿ ಸಾಯಂಕಾಲ-

‘ಅಲ್ಲಿಕೇರಿಗೆ ಹೋಗೂನು ಬರತೀರೇನ್ರೀ
ಒಲ್ಲದಿದ್ದರೆ ಇಲ್ಲೆ ನೀವು ಇರತೀರೇನ್ರೀ.’

ಎಂದು ಹಾಡುತ್ತಾ ಮನೆಯನ್ನು ಸೇರುವರು. ತನಗೆ ನಿಸರ್ಗ ಸಂಪರ್ಕವಿರಬೇಕೆಂದು ಮನಕುಲದವರು ಪರಂಪರಾಗತವಾಗಿ ಇಂತಹ ಅಮೂಲ್ಯ ಸಂಪ್ರದಾಯಗಳನ್ನು ಹುಟ್ಟು ಹಾಕಿರುವುದನ್ನು ಕಾಣಬಹುದಾಗಿದೆ .ಒಕ್ಕಲಿಗರು ದನಕರುಗಳಿಗೆ ರೋಗ ಬಾರದಂತೆ ಕಿಚ್ಚು ಹಾಯಿಸುವರು

ಪೌರಾಣಿಕ ಐತಿಹಾಸಿಕ ಹಾಗೂ ಜಾನಪದೀಯ ಅಂಶಗಳು ಸೇರಿಕೊಂಡು ಪ್ರದೇಶದಿಂದ ಪ್ರದೇಶಕ್ಕೆ ಜನಾಂಗದಿಂದ ಜನಾಂಗಕ್ಕೆ ಭಿನ್ನ ವಿಭಿನ್ನ ರೂಪವನ್ನು ಪಡೆದುಕೊಂಡ ಹಬ್ಬವಿದಾಗಿದೆ. ಕರ್ನಾಟಕದ ಕೆಲವೆಡೆಗಳಲ್ಲಿ ಆಣೀ ಪೀಣಿ, ಕೋಲಾಟ ಪಗಡೆಯಾಟ, ದಾಂಡಿಯಾ ನೃತ್ಯ,ಮೊದಲಾದ ಆಚರಣೆಗಳಿರುತ್ತವೆ. ದನಕಾಯುವ ಹುಡುಗರ ಮತ್ತು ದನ ಸಾಕುವವರ ನಡುವೆ ಇರುವ ಬಾಂಧವ್ಯವನ್ನು ಬೆಸೆಯುವ ಹಬ್ಬವಿದಾಗಿದೆ. ಬಿಜಾಪುರ ಬೀದರ ಗುಲ್ಬರ್ಗ ಧಾರವಾಡ ಬೆಳಗಾವಿ ಭಾಗಗಳಲ್ಲಿ ಈ ಆಣಿಪೀಣಿ ಆಚರಣೆಯು ಇಂದಿಗೂ ಜೀವಂತವಾಗಿರುತ್ತದೆ.

ಸರ್ವ ಜನಾಂಗದವರು ಅತ್ಯಂತ ವಿಜೃಂಭಣೆಯಿಂದ ಆಚರಿಸುವ ದೀಪಾವಳಿಯ ಮೊದಲ ದಿನ ‘ ನರಕ ಚತುರ್ದಶಿ.’ ಈ ದಿನ ನರಕಾಸುರನೆಂಬ ರಾಕ್ಷಸನನ್ನು ಶ್ರೀ ಕೃಷ್ಣನು ವಧೆ ಮಾಡಿ, ಆತನು ಸೆರೆಮನೆಯಲ್ಲಿರಿಸಿದ 16,000 ಗೋಪಿಕಾ ಸ್ತ್ರೀಯರನ್ನು ಬಿಡುಗಡೆ ಮಾಡಿದನೆಂದು ಪುರಾಣಗಳಲ್ಲಿ ಕಥೆ ದಾಖಲಾಗಿದೆ.ಇದರ ನೆನಪಿಗಾಗಿ ಬೆಳಿಗ್ಗೆ ಎಲ್ಲರೂ ಅಭ್ಯಂಜನ ತಲೆ ಸ್ನಾನ ಮಾಡಿ ದೇವರಿಗೆ ಮಂಗಳಾರತಿ ಬೆಳಗುತ್ತಾರೆ. ಸಹೋದರರಿಗೆ ಅಕ್ಕ ತಂಗಿಯರು ಆರತಿ ಮಾಡುತ್ತಾರೆ. ಇಂದು ಭಗವಾನ ಮಹಾವೀರನು ಮುಕ್ತಿ ಹೊಂದಿದ ದಿನವೆಂದು ಜಿನ ಮಂದಿರಗಳಲ್ಲೆಲ್ಲ ದೀಪೋತ್ಸವ ಮಾಡುತ್ತಾರೆ.

ದೀಪಾವಳಿಯ ಎರಡನೆಯ ದಿನವೇ’ ಲಕ್ಷ್ಮೀ ಪೂಜೆ’. ವ್ಯಾಪಾರಸ್ಥರು ಉದ್ಯೋಗಸ್ಥರು ಅಂಗಡಿ ಕಾರ್ಖಾನೆಗಳನ್ನು ಅಲಂಕರಿಸಿ ಪೂಜಿಸಿ ದಾನ ದಕ್ಷಿಣೆ ಪ್ರಸಾದ ತಾಂಬೂಲವಿತ್ತು ಸತ್ಕರಿಸುತ್ತಾರೆ. ಮಕ್ಕಳು ಪಟಾಕಿ ಹಾರಿಸಿ ರಂಜಿಸುತ್ತಾರೆ. ಮೂರನೆಯ ದಿನ ‘ಬಲಿಪಾಡ್ಯಮಿ’.ವಿಷ್ಣು ವಾಮನ  ಅವತಾರವನ್ನು ತಳೆದು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದ ದಿನವಿದಾಗಿದೆ. ಹೊಸದಾಗಿ ಮದುವೆಯಾದ ಅಳಿಯನನ್ನು ಆಮಂತ್ರಿಸಿ ಗೌರವಿಸುವ ಸಂಪ್ರದಾಯವು ಪರಂಪರಾಗತವಾಗಿ ಬೆಳೆದು ಬಂದಿರುವುದನ್ನು ಕಾಣುತ್ತೇವೆ. ಗೋವುಗಳನ್ನು ಪೂಜಿಸುವ ಸಂತೋಷಪಡಿಸುವ ದಿನವಿದಾಗಿದೆ. ದೇಶಾದ್ಯಂತ ವಿವಿಧ ವರ್ಗದ ಜನರಿಗೂ ಆನಂದ ಸಂತಸ ಇಮ್ಮಡಿಸುವ ಹಬ್ಬವೆಂದರೆ ಭರತ ಖಂಡದ ಹಬ್ಬ ‘ದೀಪಾವಳಿ ಹಬ್ಬ’. ವಿದಾಗಿದೆ. ಮೂರು ದಿನಗಳಿಂದ ಐದು ದಿನಗಳವರೆಗೆ ವೈವಿಧ್ಯಮಯವಾಗಿ ವಿಶಿಷ್ಟ ಪೂರ್ಣವಾಗಿ ವೈಭವದಿಂದ ಆಚರಿಸುವ ದೊಡ್ಡ ಹಬ್ಬ ,’ಬೆಳಕಿನ ಹಬ್ಬ ದೀಪಾವಳಿ’ಯು ಉಳಿದೆಲ್ಲ ಹಬ್ಬಗಳಿಗಿಂತ ವೈಶಿಷ್ಟಮಯ ಹಬ್ಬವೆನಿಸಿರುತ್ತದೆ.

—-**—
ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ.
ನಿವ್ರೃತ್ತ ಕನ್ನಡ ಪ್ರಾಧ್ಯಾಪಕರು.
ಗದಗ.

LEAVE A REPLY

Please enter your comment!
Please enter your name here

Latest News

ಲೇಖನ : ಅಕ್ಕ ಮಹಾದೇವಿ ತಾಯಿಯನ್ನು ಬೆತ್ತಲೆ ಮಾಡಿದ ಗಂಗಾ ಮಾತಾಜಿ

ಅಕ್ಕ ಮಹಾದೇವಿ ಬೆತ್ತಲೆ - ಗಂಗಾ ಮಾತಾಜಿ ಬೇಜವಾಬ್ದಾರಿ ವಚನ ಟಿವಿ ಸಂದರ್ಶನಬಸವ ಸಂಸ್ಕೃತಿಯ ಅಭಿಯಾನದಲ್ಲಿ ಕೆ ಎಲ್ ಈ ಸಂಸ್ಥೆಯ ಮೃತ್ಯುಂಜಯ ಕಾಲೇಜಿನ ಕಲಾ...

More Articles Like This

error: Content is protected !!
Join WhatsApp Group