ಸಿಂದಗಿ: ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಮೊಬೈಲ್ ಸ್ವೀಚ್ ಆಫ್ ಮಾಡುತ್ತೀರಿ ಮತ್ತು ಕರೆ ಸ್ವೀಕರಿಸುವುದಿಲ್ಲ ಎಂಬ ದೂರುಗಳಿವೆ ಮೊದಲು ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ. ನಮ್ಮ ಇಲಾಖೆಯ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯವಾಗಬೇಕು. ನಿಮ್ಮ ಇಲಾಖೆಗಳಿಗೆ ವಹಿಸಿಕೊಟ್ಟ ಕಾರ್ಯದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಪಂ ಯೋಜನಾಧಿಕಾರಿ ಸಿ.ಬಿ.ಕುಂಬಾರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಸಿಂದಗಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾಗದಲ್ಲಿ ಮಳೆ ಹೆಚ್ಚಾಗಿ ಸುರಿದ ಪರಿಣಾಮ ಬೆಳೆಗಳು ನಾಶ ಹಾಗೂ ಮನೆಗಳು ಬಿದ್ದಿವೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದ್ದು ಅದಕ್ಕೆ ಬೇಕಾದ ಮುಂಜಾಗೃತ ಕ್ರಮಕೈಗೊಳ್ಳಬೇಕು. ತಾಲೂಕಿನಲ್ಲಿ ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ಮಾಡಲಾಗಿದೆಯೇ ಎಂದ ಪ್ರಶ್ನೆಗೆ, ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಉತ್ತರಿಸಿ, ಆಲಮೇಲ ಸರ್ವೇಯ ಭೀಮಾ ನದಿಯ ಸುತ್ತಮುತ್ತಲಿನ ೭೬೪ ಹೆಕ್ಟರ್ ಹಾಗೂ ಮಳೆಯಿಂದಲೂ ಸೇರಿ ಹೆಚ್ಚುವರಿಯಾಗಿ ೧೩೬೦ ಹೆಕ್ಟರ್ ವರದಿ ನೀಡಲಾಗಿದೆ ಸಿಂದಗಿ ತಾಲೂಕಿನಲ್ಲಿ ಯಾವುದೇ ರೀತಿಯ ಬೆಳೆ ನಾಶವಾಗಿಲ್ಲ ಎಂದರು.
ತಾಲೂಕಿನಲ್ಲಿ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಮಕ್ಕಳು ಶಾಲೆಯಲ್ಲಿ ಪಾಠ ಬೋಧನೆ ಮಾಡಬಾರದು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಭೇಟಿ ನೀಡಲು ಹೇಳಿ ಎಂದು ಪರವಾಗಿ ಹಾಜರಾದ ಅಧಿಕಾರಿಗೆ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ತಾರಾನಾಥ ರಾಠೋಡ ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ೬೮ ಜಲ್ ಜೀವನ್ ಮಿಷನ್ ಯೋಜನೆ ಕೆಲಸಗಳಿವೆ. ಅದರಲ್ಲಿ ೩೦ ಪೂರ್ಣಗೊಳಿಸಿ ಒಪ್ಪಿಸಲಾಗಿದೆ. ೧೫ ಪ್ರಗತಿಯಲ್ಲಿವೆ. ೨೨ ಮಾತ್ರ ಬಾಕಿ ಉಳಿದಿವೆ ಎಂದು ಹೇಳಿದಾಗ, ಕುಡಿಯುವ ನೀರಿನ ಸಮಸ್ಯೆಗಳು ಏನಾದರು ಇವೆಯೇ ಎಂದಾಗ ಉತ್ತರಿಸಿದ ಅವರು, ಎಲ್ಲಿಯೂ ಸಮಸ್ಯೆಗಳು ಉಂಟಾಗಿಲ್ಲ, ಕುಡಿಯುವ ನೀರನ್ನು ಪರೀಕ್ಷೆ ಮಾಡಿ ಕೊರತೆ ಬೀಳದಂತೆ ನೋಡಿಕೊಳ್ಳಾಗುತ್ತಿದೆ ಎಂದಾಗ, ಮಳೆಯಾಗಿರುವುದರಿಂದ ನೀರು ಕಲುಷಿತಗೊಳ್ಳುತ್ತದೆ ನೀರು ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿದರು.
ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪುರಸಭೆ ಮತ್ತು ಗ್ರಾಪಂ ಅಧಿಕಾರಿಗಳ ಸಹಕಾರ ತೆಗೆದುಗೊಂಡು ಬೀದಿ ನಾಯಿಗಳಿಗೆ ಈ ತಿಂಗಳಲ್ಲಿ ಚುಚ್ಚು ಮದ್ದು ಹಾಕಿಸುವ ಕಾರ್ಯಕೈಗೊಳ್ಳಬೇಕು ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹೀಗೆ ವಿವಿಧ ಇಲಾಖೆಗಳ ಪ್ರಗತಿಯ ಕುರಿತಾಗಿ ಮಾಹಿತಿ ಪಡೆದುಕೊಂಡರು.
ಈ ವೇಳೆ ತಾಪಂ ಇಒ ರಾಮು ಅಗ್ನಿ, ಗ್ಯಾರಂಟಿ ಸಮಿತಿ ಸದಸ್ಯರು, ಐಇಸಿ ಸಂಯೋಜಕ ಭೀಮರಾಯ ಚೌಧರಿ ಸೇರಿದಂತೆ ತಾಪಂ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಎನ್ಆರ್ಎಲ್ಎಂ ವಲಯ ಮೇಲ್ವಿಚಾರಕಿ ಲಕ್ಷಮಿ ಪಾಟೀಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಮಾದಕ ವಸ್ತು ಮುಕ್ತ ಕರ್ನಾಟಕ ಅಭಿಯಾನದ ಪ್ರತಿಜ್ಞಾನಿವಿಧಿ ಬೋಧಿಸಿದರು.

