ಕಲ್ಲೋಳಿ ಪಟ್ಟಣದಲ್ಲಿ ಜಿಲ್ಲಾ ಖನಿಜ ನಿಧಿ ಅನುದಾನದಡಿ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ
ಮೂಡಲಗಿ: ನಗರ ಪ್ರದೇಶಗಳಲ್ಲಿರುವ ಎಲ್ಲಾ ನಾಗರಿಕ ಸೌಲಭ್ಯಗಳನ್ನು ಗ್ರಾಮಾಂತರ ಪ್ರದೇಶಕ್ಕೆ ಒದಗಿಸಿ ಜನರ ಜೀವನಮಟ್ಟವನ್ನು ಏರಿಸುವ ಮೂಲಕ ಜನರು ನಗರಗಳ ವ್ಯಾಮೋಹಕ್ಕೆ ಒಳಗಾಗಿ ಗ್ರಾಮಗಳನ್ನು ತೊರೆದು ನಗರಕ್ಕೆ ಹೋಗುವುದನ್ನು ತಡೆಯಬೇಕಾದ ಅವಶ್ಯಕತೆ ಇದೆ. ಹೀಗಾಗಿ ಗ್ರಾಮೀಣ ಪ್ರದೇಶದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ರಾಜ್ಯಸಭಾ ಸಂಸದರ ಅನುದಾನ ಮತ್ತು ಇನ್ನಿತರ ಬೇರೆ ಬೇರೆ ಅನುದಾನಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಕಾರ್ಯಪ್ರವೃತ್ತನಾಗಿದ್ದೇನೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಫೆ-08 ರಂದು ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಕಟ್ಟಡದ ಹತ್ತಿರದಿಂದ ಸೇದು ಭಾಂವಿಯವರೆಗೆ ಹಾಗೂ ಶ್ರೀ ಅಲ್ಲಮ್ಮಪ್ರಭು ಫರ್ಟಿಲೈಜರ್ಸ್ ಕಟ್ಟಡದ ಹತ್ತಿರದಿಂದ ಕಡಾಡಿ ಅವರ ಮನೆಯವರೆಗೆ ಜಿಲ್ಲಾ ಖನಿಜ ನಿಧಿ ಅನುದಾನದಡಿ ಮಂಜೂರಾದ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಹದಗೆಟ್ಟ ರಸ್ತೆಗಳಿಂದಾಗಿ ರೈತರು ತಮ್ಮ ಹೊಲಗಳಿಗೆ ಟ್ರ್ಯಾಕ್ಟರ್, ಟ್ರೇಲರ್ ಹಾಗೂ ಇತರ ಯಂತ್ರೋಪಕರಣಗಳನ್ನು ಸಾಗಿಸಲು ಪ್ರತಿದಿನ ಬಹಳಷ್ಟು ಕಷ್ಟ ಪಡುತ್ತಿದ್ದರು. ರೈತರ ಕೃಷಿ ಉಪಕರಣಗಳ ಸುಗಮ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಪಟ್ಟಣದ ಸಾರ್ವಜನಿಕರು ಇಂತಹ ಅಭಿವೃದ್ಧಿ ಕೆಲಸಗಳಿಗೆ ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಕಡಾಡಿ, ಪ್ರಭು ಕಡಾಡಿ, ಶ್ರೀಶೈಲ ಕಡಾಡಿ, ಈಶ್ವರ ಬೆಳಕೂಡ, ಪರಪ್ಪ ಕಡಾಡಿ, ಪ್ರಕಾಶ ಕುರಬೇಟ, ಕಿರಣ ಕಡಾಡಿ, ಹಣಮಂತ ಜೋಳನ್ನವರ, ಶ್ರೀಶೈಲ ತುಪ್ಪದ, ಕಲ್ಲಪ್ಪ ಕಡಾಡಿ, ಶಿವಪ್ಪ ಬಿ.ಪಾಟೀಲ, ರಾಮಪ್ಪ ಉಳ್ಳಾಗಡ್ಡಿ, ಕಾಡೇಶ ಗೋರೋಶಿ, ಪರಪ್ಪ ಮಳವಾಡ, ಗುರುನಾಥ ವ್ಯಾಪಾರಿ, ಶೀತಲ ಅಥಣಿ, ದಶಗೀರ ಕಮತನೂರ, ಸಿದ್ದಪ್ಪ ಹೆಬ್ಬಾಳ, ಶಿವಾನಂದ ಹೆಬ್ಬಾಳ, ಸದಾಶಿವ ಕಂಬಾರ, ಮಹಾಂತೇಶ ಪಾಗಾದ, ಶಿವಪ್ಪ ಗೋಸಬಾಳ, ಬಸಪ್ಪ ಬಳಿಗಾರ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

