ನೂತನ ಜಿಲ್ಲಾಧಿಕಾರಿಯ ಮೊದಲ ಗ್ರಾಮ ವಾಸ್ತವ್ಯ.
ಬೀದರ – ಭಾರತ ಮೂಲತಃ ಹಳ್ಳಿಗಳ ದೇಶವಾಗಿದೆ. ಹಳ್ಳಿಗಳು ಉದ್ದಾರವಾದಾಗ ಮಾತ್ರ ದೇಶ ಉದ್ದಾರವಾಗಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಲಕಾಲಕ್ಕೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮೀಣ ಜನರ ಅಹವಾಲುಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪೂರ ಸಲಹೆ ಮಾಡಿದರು.
ಚಿಟಗುಪ್ಪ ತಾಲೂಕಿನ ಚಾಂಗಲೇರಾ ಗ್ರಾಮಸ್ಥರ ಅಹವಾಲು ಆಲಿಸಿ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಜನರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಬಹಳಷ್ಟು ನಿರೀಕ್ಷೆ ಹೊಂದಿರುತ್ತಾರೆ. ಜನರ ಅಹವಾಲಿಗೆ ತುರ್ತಾಗಿ ಸ್ಪಂದಿಸಲು ಈ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎನ್ನುವ ಪರಿಕಲ್ಪನೆಯು ಅರ್ಥಪೂರ್ಣವಾಗಿದೆ. ತುರ್ತು ಕ್ರಮ ವಹಿಸಬೇಕಾದ ಅರ್ಜಿಗಳನ್ನು 15 ದಿನಗಳೊಳಗಡೆ ವಿಲೇವಾರಿಗೆ ಕ್ರಮ ವಹಿಸಬೇಕು. ಬಾಕಿ ಅರ್ಜಿಗಳನ್ನು ಹಂತಹಂತವಾಗಿ ವಿಲೇವಾರಿ ಮಾಡಬೇಕು.
ಇಲ್ಲದಿದ್ದಲ್ಲಿ ಯಾವುದೇ ಮುಲಾಜಿಲ್ಲದೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿರಂತರ 3 ಗಂಟೆ ಅಹವಾಲು ಆಲಿಕೆ :ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸಂಬಂಧಿಸಿದ 18 ಇಲಾಖೆಗಳ ಅಧಿಕಾರಿಗಳು ಬೆಳಗ್ಗೆ 10 ಗಂಟೆಯಿಂದ ತಡರಾತ್ರಿವರೆಗೂ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮಸ್ಥರ ಮನವಿಗಳನ್ನು ಸ್ವೀಕರಿಸಿದರು.
21 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ : ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಒಟ್ಟು ಸ್ವೀಕೃತವಾದ 58 ಅರ್ಜಿಗಳ ಪೈಕಿ 21 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು. ಬಾಕಿ 37 ಅರ್ಜಿಗಳನ್ನು ಪರಿಶೀಲನೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು. ಅರ್ಜಿಗಳೊಂದಿಗೆ ಆಗಮಿಸಿದ್ದ ಕೆಲವು ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ ರವೀಂದ್ರ ದಾಮಾ, ತಾಪಂ ಇ ಓ ವೆಂಕಟ ಶಿಂಧೆ ಹಾಗು ಇನ್ನಿತರ ಇಲಾಖೆಗಳ ಅಧಿಕಾರಿಗಳು ಇದ್ದರು.