ಕರಾವಳಿಯಲ್ಲಿರುವ ಮಾತೃಮೂಲೀಯ ಸಂಸ್ಕೃತಿಯ ಮಲೆಯಾಳಿ ಮಾತೃಭಾಷೆಯ ಕೆಲವು ಸಮುದಾಯದವರಿಗೆ ‘ಪೂರಂ ಹಬ್ಬ’ ಬಹಳ ವಿಶೇಷವಾದುದು. ಈ ಒಂಬತ್ತು ದಿನಗಳ ಕಾಲ ವಿಶೇಷ ಹೂಗಳಿಂದ ಕಾಮದೇವನನ್ನು ಕುಟುಂಬದ ಎಲ್ಲಾ ಹೆಣ್ಣುಮಕ್ಕಳು ಮೂಲಮನೆಯಲ್ಲಿ ಜತೆಯಾಗಿ ಸೇರಿ, ಪೂಜಿಸುವುದರಿಂದ ಬದುಕಿನಲ್ಲಿ ಸುಖ, ಸಮೃದ್ಧಿ, ಆರೋಗ್ಯ, ಆಯಸ್ಸು ಮತ್ತು ಎಲ್ಲಾ ವಿಧದ ಶ್ರೇಯಸ್ಸು ಪ್ರಾಪ್ತಿಯಾಗುತ್ತದೆ, ಪೂರಂ ಆಚರಣೆಯಲ್ಲಿ ಪಾಲ್ಗೊಂಡ ಹೆಣ್ಣುಮಗುವು ಮದುವೆ ಬಳಿಕ ಬಂಜೆಯಾಗುವುದಿಲ್ಲ ಎಂಬುದು ಈ ಹಬ್ಬದ ಆಚರಣೆಯ ಹಿಂದಿರುವ ಬಲವಾದ ನಂಬಿಕೆ…!
ಹುಟ್ಟಿದಲ್ಲಿಂದ ಪ್ರತಿ ಹೆಣ್ಣುಮಗುವಿಗೂ ಈ ‘ಪೂರಂ ಹಬ್ಬ’ ಇರುತ್ತದೆ. ಬಾಲಿಕೆಗೆ ‘ಚಪ್ಪರ ಮದುವೆ’ ಆಗುವ ತನಕ ಅಂದರೆ ಸುಮಾರು ಹನ್ನೆರಡು ವರುಷ ಪ್ರಾಯದವರೆಗೆ ಇದು ಪ್ರತಿ ವರುಷ ನಡೆಯುತ್ತದೆ. ಒಂದು ವಿಧದ ಬುಟ್ಟಿ ಹೆಣೆಯುವ ಬಳ್ಳಿಯಲ್ಲಾಗುವ ಈ ವಿಶೇಷ ಹೂ ಬೇಗನೇ ಬಾಡುವುದಿಲ್ಲ, ಕೊಳೆಯುವುದಿಲ್ಲ. ಗುಡ್ಡಗಾಡುಗಳಲ್ಲಿ ಇದು ಯಥೇಚ್ಚ ದೊರಕುವುದರಿಂದ ಇದಕ್ಕಾಗಿ ಮಾರುಕಟ್ಟೆಗೆ ಹೋಗುವ ಅಥವಾ ಹಣವಿನಿಯೋಗಿಸುವ ಕಷ್ಟನಷ್ಟಗಳೂ ಇಲ್ಲ..!
ಕುಟುಂಬಕ್ಕೆ ಸೇರಿದ ಪ್ರತಿಯೊಂದು ಹೆಣ್ಣು ಮಗುವೂ ತರವಾಡು ಮನೆಯಲ್ಲಿ ಈ ದಿನಗಳಲ್ಲಿ ಒಂದು ಸೇರಬೇಕು. ಪ್ರತಿ ಸಂಜೆ ಹಿರಿಯರ ಸಹಾಯ ಮಾರ್ಗದರ್ಶನದೊಂದಿಗೆ ಹೂ ಸಂಗ್ರಹ ಮಾಡಬೇಕು. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಶುಚಿರ್ಭೂತರಾಗಿ ಮಡಿಬಟ್ಟೆ ಉಟ್ಟು, ಮನೆಯ ದೇವರ ಕೋಣೆಯಲ್ಲಿ ಈ ಹೂವನ್ನು ಕಾಮದೇವನೆಂದು ಸಂಕಲ್ಪಿಸುವ ಐದು ಪುಟ್ಟ ಮಣೆಗಳಲ್ಲಿ (ಪಂಚಬಾಣಗಳ ಸಂಕೇತ) ಮೂರು ಸಲ ಸಮರ್ಪಿಸಬೇಕು. ಬಳಿಕ ಎಲ್ಲರೂ ಒಟ್ಟಾಗಿ ‘ಕೂ ಕೂ ಕೂ …..’ ಎಂದು ಕಾಮದೇವನನ್ನು ಕೂಗಿ ಕರೆಯಬೇಕು. ಬಳಿಕ ಇದೇ ರೀತಿ ನೀರಿನ ಸೆಲೆ ಇರುವಲ್ಲಿ ಒಂದು ಕಲ್ಲಿನ ಮೇಲೂ ಸಮರ್ಪಿಸಿ ಇದೇ ರೀತಿ ಕೂಗಬೇಕು. ಹೀಗೆ ಬ್ರಾಹ್ಮೀ ಮುಹೂರ್ತದಲ್ಲೂ ಇಳಿಹಗಲಿನ ಸಂಧ್ಯಾಕಾಲದಲ್ಲೂ ಒಂಬತ್ತು ದಿನಗಳ ಕಾಲ ಮಾಡಬೇಕು.
ಇದು ಹೆಣ್ಣುಮಕ್ಕಳಿಗೆ ಮಾತ್ರ ಇರುವ ಪರ್ವ. ಗಂಡಸರಿಗೆ ಅಥವಾ ಹುಡುಗರಿಗೆ ಇದರಲ್ಲಿ ಯಾವುದೇ ಪಾತ್ರವಿಲ್ಲ. ಮನೆಯ ಹಿರಿಯ ಮಹಿಳೆಯ ಮಾರ್ಗದರ್ಶನದಲ್ಲಿ ಪ್ರತಿಯೊಂದು ಕ್ರಮವೂ ನಡೆಯುತ್ತದೆ. ಮಕ್ಕಳಂತೂ ಖುಷಿಯಲ್ಲಿ ತೇಲಾಡುತ್ತಾರೆ.
ಮಾತೃಮೂಲೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪ್ರಮುಖಸ್ಥಾನ. ಇವರ ಪ್ರಕಾರ ಹೆಣ್ಣು ಅಬಲೆಯಲ್ಲ. ಹೆಣ್ಣು ಸರ್ವಶಕ್ತಳು. ಅವಳಿಂದಲೇ ಬದುಕು ಮತ್ತು ಕುಟುಂಬವೃದ್ಧಿ. ಅವಳ ಬದುಕಿನ ಪ್ರತಿಯೊಂದು ಘಟ್ಟವೂ ಇವರಿಗೆ ಪರ್ವಕಾಲ. ಆದ ಕಾರಣ ಹೆಣ್ಣು ಮಗು ಹುಟ್ಟಿದ ತಕ್ಷಣ ಕಾಮದೇವನನ್ನು ಪೂಜಿಸುವ ಪೂರಂ, ಬಳಿಕ ಚಪ್ಪರ ಮದುವೆ, ಅನಂತರ ಋತುಮತಿ ಮದುವೆ, ಮದುವೆ ಹೀಗೆ ಸದಾ ಕಾಲ ಮನೆಯಲ್ಲಿ ಪರ್ವದಿನಗಳೇ ಆಗಿರುತ್ತವೆ. ಹಾಗೆಂದು ಇದ್ಯಾವುದೂ ಆರ್ಥಿಕ ಆಡಂಬರಕ್ಕೆ ಕಾರಣವಾಗುವುದಿಲ್ಲ. ಶೋಕಿಯ ಭಾಗವೂ ಆಗುವುದಿಲ್ಲ. ಯಾಕೆಂದರೆ ಇಲ್ಲಿ ಎಲ್ಲವೂ ಸರಳ ಹಾಗೂ ನೈಸರ್ಗಿಕವಾದ ಪರಿಕರಗಳೇ ಮುಖ್ಯ ಪೂಜಾ ಸಾಮಗ್ರಿಗಳು.
ಹೆಣ್ಣು ಮಕ್ಕಳೇ ಪೂಜಾರಿಗಳು ಮತ್ತು ಪುರೋಹಿತರು.
ಕಾಮದೇವ ಅಥವಾ ಮನ್ಮಥನಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನವಿದೆ. ನಮ್ಮ ಮನೋಭಾವವನ್ನು ನಿಯಂತ್ರಣ ಮಾಡುವವ ಆತ. ಆತನಿಂದ ಒಳಿತೂ ಆಗಬಹುದು ಬದುಕಿಗೆ ಕೆಡುಕೂ ಆಗಬಹುದು. ಆದರೆ ಆತನಿಲ್ಲದೆ ಪ್ರಪಂಚದ ಯಾವುದೂ ನಡೆಯದು. ಹಿತಮಿತವಾದ ಪ್ರೇಮ – ಕಾಮಗಳು ಮನುಷ್ಯ ಬದುಕಿನ ಖುಷಿಯ ಭಾಗವೂ ಹೌದು. ಅದರಿಂದಲೇ ಸೃಷ್ಟಿಯ ಪ್ರಮುಖ ಕಾರ್ಯ ಮುಂದುವರಿಯುವುದು. ಪ್ರಕೃತಿಗೆ ಮತ್ತು ಪ್ರಪಂಚದ ಮುಂದುವರಿಕೆಗೆ ಕಾಮದೇವನ ಪಾತ್ರ ಬಹಳವಾದುದು.
ಹೆಣ್ಣು ಸೃಷ್ಟಿಯ ಕ್ಷೇತ್ರ. ಭೂಮಿಯೇ ಇಲ್ಲದಿದ್ದರೆ ಮಳೆ ಸುರಿದೇನು ಫಲ…? ಸೃಷ್ಟಿ ಕ್ರಿಯೆಯಲ್ಲಿ ಭೂಮಿ ಅಥವಾ ಕ್ಷೇತ್ರ ನಿರ್ಣಾಯಕ.
ಈ ನಿಟ್ಟಿನಲ್ಲಿ ಹೆಣ್ಣಿಗೆ ಬಹುಮುಖ್ಯ ಸ್ಥಾನ ಕೊಡುವ ಮಾತೃಮೂಲೀಯ ಸಂಸ್ಕೃತಿಯ ಜನರು ಕಾಮದೇವನನ್ನು ಈ ರೀತಿ ಆವಾಹಿಸಿಕೊಳ್ಳುವುದು ಮತ್ತು ಪೂಜಿಸುವುದರ ಹಿಂದೆ ಮನಶಾಸ್ತ್ರೀಯ ನೆಲೆಯ ಹಲವು ಮಹತ್ವದ ವಿಷಯವಿಚಾರಗಳಿವೆ. ಒಂದುಗೂಡುವಿಕೆ, ಸಂಬಂಧಗಳ ಬೆಸೆಯುವಿಕೆ, ಸೃಷ್ಟಿಯ ನಿಗೂಢತೆಯ ಅರಿಯುವಿಕೆ ಹೀಗೆ ಇದರ ಆಳಕ್ಕಿಳಿದಂತೆಲ್ಲ ಈ ಹಬ್ಬದ ಹಿಂದಿರುವ ಧನಾತ್ಮಕವಾದ ವಿಷಯಗಳನ್ನು ಅರಿಯಲು ಸಾಧ್ಯ.
ಭಾರತೀಯ ಪರಂಪರೆಯಲ್ಲಿ ವೈದಿಕೇತರ ಸಂಸ್ಕೃತಿಯಲ್ಲಿ ಇಂತಹ ಅಮೂಲ್ಯವಾದ ಹಲವು ಆಚಾರವಿಚಾರಗಳಿವೆ. ಆದರೆ ಇಂತಹ ಆಚರಣೆಗಳ ಬಗ್ಗೆ ವೈಜ್ಞಾನಿಕ ನೆಲೆಯ ಅಧ್ಯಯನಗಳು ನಡೆದುದು ಕಡಿಮೆ. ಆದ ಕಾರಣ ಹಲವು ಇಂತಹ ಆಚರಣೆಗಳು ಮೂಢನಂಬಿಕೆಗಳ ಸಾಲಿಗೆ ಸೇರಿ ಆಧುನಿಕ ಜನಾಂಗದ ತಿರಸ್ಕಾರಕ್ಕೆ ಒಳಗಾಗಿ ಕಣ್ಮರೆಯಾಗುತ್ತಿವೆ. ಕೂಡುಕುಟುಂಬದ ನಾಶವೂ ಇದಕ್ಕೆ ಮತ್ತೊಂದು ಕಾರಣ. ಮನುಷ್ಯ ಹಣದ, ಸ್ಥಾನಮಾನದ ಬೆನ್ನುಹತ್ತಿ ಬದುಕುವ ಕಾಲವಿದು. ಪ್ರತಿಯೊಂದನ್ನೂ ಲಾಭನಷ್ಟದ ಅಳತೆಗೋಲಿನಲ್ಲಿ ಮಾತ್ರ ಅಳೆದು ತೂಗುವ ಇಂದಿನ ಮನುಷ್ಯನು ಇಂತಹ ಮಹಿಳಾ ಪ್ರಧಾನ ಆಚರಣೆಗಳಲ್ಲಿರುವ ಒಳಿತುಗಳನ್ನು ಗುರುತಿಸುವಲ್ಲಿ ಸೋತುಹೋಗಿದ್ದಾನೆ.
ವೈದ್ಯರು, ಮಾನಸಿಕ ತಜ್ಞರು, ಆಪ್ತಸಲಹೆಗಾರರು ಇಂದು ಬದುಕಿಗೆ ಅನಿವಾರ್ಯವಾಗುತ್ತಿದ್ದಾರೆ. ಹೊಸ ಹೊಸ ಔಷಧಗಳು, ದೊಡ್ಡ ದೊಡ್ಡ ಆಸ್ಪತ್ರೆಗಳು ತಲೆ ಎತ್ತುತ್ತಲೇ ಇವೆ… ರೋಗ ಬಂದ ಬಳಿಕ ಚಿಕಿತ್ಸೆ ಮಾಡುವ ಬಗ್ಗೆ ನಮ್ಮ ಶಿಕ್ಷಣ ಇದೆ ಹೊರತು ರೋಗ ಬರದಂತೆ ತಡೆಗಟ್ಟುವ ಮಾನಸಿಕ ಸ್ವಾಸ್ಥ್ಯದ ಉಪಾಧಿಗಳನ್ನು ತಿಳಿಯುವಲ್ಲಿ ನಾವು ಸೋತಿದ್ದೇವೆ.
ನಮ್ಮ ಪರಂಪರೆಯಲ್ಲಿ ಮನಸ್ಸಿನ ಆರೋಗ್ಯಕ್ಕೆ ಇಂತಹ ವೈವಿಧ್ಯಪೂರ್ಣ ಆಚರಣೆಗಳು ಸಹಾಯಕವಾಗುತ್ತಿದ್ದುವು. ಬದುಕಿಗೆ ಇವು ಶಿಸ್ತನ್ನೂ ಸ್ಥೈರ್ಯವನ್ನೂ ಅನುಭವಜ್ಞಾನದ ಬೆಳಕನ್ನೂ ಸಂಬಂಧದ ಗಟ್ಟಿತನದ ಮಹತ್ವವನ್ನು ಮಾನವೀಯತೆಯ ಜೀವಾಳವನ್ನೂ ಉಣಿಸುತ್ತಿದ್ದುವು.
ಇಂದು ವಿಮರ್ಶೆ ಮುಖ್ಯವಾಗಿ ವಿವೇಚನೆ ಬದಿಗೆ ಸರಿದಿದೆ.
ಚಂದ್ರಗಿರಿ ಹೊಳೆಯ ಉತ್ತರದ ಹಲವು ಮನೆಗಳಲ್ಲಿ ಈ ಒಂಬತ್ತು ದಿನಗಳ ಎರಡೂ ಹೊತ್ತೂ ಬಾಲಿಕೆಯರ ಕೂ ಕೂ ಕೂ ನಿನಾದ ನಿನ್ನೆ ನಿನ್ನೆಯವರೆಗೂ ಕೇಳಿಬರುತ್ತಿತ್ತು. ಆದರೆ ಇಂದು ಎಲ್ಲೋ ಅಲ್ಲಿ ಇಲ್ಲಿ ಮಾತ್ರ ಕೇಳಿಬರುತ್ತಿದೆ. ಇಂದು ಹೆಚ್ಚಿನವರ ತಾತ್ಸಾರಕ್ಕೆ ಒಳಗಾಗುತ್ತಿರುವ ಈ ಕೂಕೂಕೂ ನಾಳೆ ಎಲ್ಲೂ ಇರುವುದಿಲ್ಲ. ಅದು ಖಂಡಿತ…!
(ಮಲ್ಲಮೂಲೆಯ ನಮ್ಮ ಮನೆಯಲ್ಲಿ ಕಳೆದ ಒಂಬತ್ತು ದಿನಗಳ ಕಾಲ ನಡೆದ ಪೂರಂ ಹಬ್ಬದ ಕೆಲವು ಚಿತ್ರಗಳಿವು. ಇಂದು ಒಂಬತ್ತನೆಯ ದಿನ.)
ಡಾ.ರತ್ನಾಕರ ಮಲ್ಲಮೂಲೆ.
ಕಾಸರಗೋಡು.