ಮೂಡಲಗಿ: ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿ ತಾವು ಅನುಭವಿಸಿದ ಅಸ್ಪೃಶ್ಯತೆ ಮತ್ತು ಶೋಷಣೆಯನ್ನು ತೊಡೆದು ಹಾಕಿ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ತರುವ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಸಮರ್ಪಿಸಿದವರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಗುರುವಾರ (ಏ.14) ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ, ಕಲ್ಲೋಳಿ ಕಾರ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ 131 ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ ಅವರು ತಾವು ಜನಿಸಿದ ಕುಟುಂಬದಲ್ಲಿನ ಕೀಳರಿಮೆಯ ಮನಸ್ಥಿತಿ ಮತ್ತು ಬಡತನವನ್ನು ಮೆಟ್ಟಿನಿಂತು ಅಗಾಧವಾದ ಅಧ್ಯಯನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಅವಕಾಶಗಳನ್ನು ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆದು ದೇಶದ ಅಭಿವೃದ್ದಿಗಾಗಿ ಸರ್ವರೂ ಕೊಡುಗೆ ನೀಡಬಲ್ಲ ವ್ಯವಸ್ಥೆಯನ್ನು ಜಾರಿಗೆ ತರಲು ಶ್ರಮಿಸಿದ ಧೀಮಂತ ನಾಯಕ. ಸ್ವಾತಂತ್ರ್ಯಾನಂತರ ನಮ್ಮ ದೇಶಕ್ಕೆ ಸಂವಿಧಾನ ರಚಿಸಿ ದೇಶಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಮಹಾಚಿಂತಕ ಡಾ. ಬಿ.ಆರ್. ಅಂಬೇಡ್ಕರ ಅಜರಾಮರವಾಗಿ ಉಳಿಯಲಿದ್ದಾರೆ ಎಂದರು.
ಅಂಬೇಡ್ಕರರ ಚಿಂತನೆಗಳು ಮತ್ತು ಇಂದಿನ ಭಾರತೀಯ ಜನತಾ ಪಾರ್ಟಿಯ ಚಿಂತನೆಗಳು ಬಹಳಷ್ಟು ಸಾಮ್ಯತೆಯನ್ನು ಹೊಂದಿವೆ. ಅವರ ಚಿಂತನೆಯನ್ನು ಅನುಷ್ಠಾನಗೊಳಿಸಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲಿನ ಜೀವನವನ್ನು ಒದಗಿಸಿ ದೇಶದಲ್ಲಿ ಏಕತೆ ಭಾವನೆಯನ್ನು ಮೂಡಿಸುವುದೇ ಭಾರತೀಯ ಜನತಾ ಪಾರ್ಟಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಶಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರವು ಡಾ. ಅಂಬೇಡ್ಕರ್ ಅವರ ಜೀವನದಲ್ಲಿನ ಐದು ಪ್ರಮುಖ ಸ್ಥಳಗಳನ್ನು ಪಂಚ ತೀರ್ಥ ಕ್ಷೇತ್ರ ಎಂದು ಘೋಷಿಸಿ ಅಭಿವೃದ್ಧಿ ಪಡಿಸುತ್ತಿರುವುದು ನಮ್ಮ ಪಕ್ಷದ ಆಶಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ ಅವರನ್ನು ಕೇವಲ ಮತಗಳನ್ನು ಕ್ರೋಢೀಕರಿಸುವ ಮುಖವಾಡವಾಗಿ ಬಳಸಿಕೊಂಡಿದ್ದು ದುರ್ದೈವದ ಸಂಗತಿ ಹಾಗೂ 1951-54ರ ಬಾಂದ್ರಾ ಲೋಕಸಭಾ ಚುನಾವಣೆಯ ಸೋಲಿಗೆ ಕಾಂಗ್ರೇಸ್ ನ ಅಂದಿನ ಮಹಾನ ನಾಯಕರೇ ಕಾರಣರಾಗಿದ್ದರು. ಕಾಂಗ್ರೇಸ ಪಕ್ಷದ ಅಂದಿನ ನಾಯಕರ ದುರಹಂಕಾರದ ಮತ್ತು ದಮನಕಾರಿ ನೀತಿಯಿಂದಾಗಿ ಬೇಸತ್ತು ಅವರು ಬೌದ್ದ ಧರ್ಮಕ್ಕೆ ಮತಾಂತತವಾದರು ಎಂದರು.
ಸಹಕಾರಿಯ ನಿರ್ದೇಶಕರಾದ ಶ್ರೀಶೈಲ ತುಪ್ಪದ, ಸಿದ್ದಪ್ಪ ಹೆಬ್ಬಾಳ, ಸೋಮನಿಂಗ ಹಡಗಿನಾಳ, ತುಕಾರಾಮ ಪಾಲ್ಕಿ, ಸಿದ್ದಪ್ಪ ಗದಾಡಿ, ಶಂಕರ ಗೋರೋಶಿ, ಮಹಾದೇವ ಮದಭಾಂವಿ, ದಸ್ತಗೀರಸಾಬ ಕಮತನೂರ, ಅಜೀತ ಚಿಕ್ಕೋಡಿ, ಹಣಮಂತ ಕಲಕುಟ್ರಿ, ಪರಪ್ಪ ಗಿರೆಣ್ಣವರ, ಶಿವಾನಂದ ಬಡಿಗೇರ, ಶಂಕರ ಕೌಜಲಗಿ, ರಾಜಶೇಖರ ಕುರಬೇಟ, ಸಿದ್ದು ಬೆಳವಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಅನೇಕ ಸಹಕಾರಿಗಳು ಉಪಸ್ಥಿತರಿದ್ದರು.