ಪಾಲಕ-ಪೋಷಕ-ಶಿಕ್ಷಕರ ಮಹಾಸಭೆ
ಹುನಗುಂದ: ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಓದಿನೊಂದಿಗೆ ಸಂಸ್ಕಾರಯುತರಾಗಿ ಭವಿಷ್ಯ ರೂಪಿಸಿಕೊಳ್ಳುವುದು ಅಗತ್ಯ. ಪಾಲಕರು ಮತ್ತು ಶಿಕ್ಷಕರ ಆಶಯಗಳಿಗೆ ಪೂರಕವಾಗಿ ಸ್ಪಂದಿಸಿ ಮನೆ ಮತ್ತು ವಿದ್ಯಾಸಂಸ್ಥೆಯ ಕೀರ್ತಿ ಹೆಚ್ಚಿಸಬೇಕೆಂದು ಇಳಕಲ್ ಎಸ್.ವಿ.ಎಂ.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಂಧ್ಯಾ ಕೆ.ಜಿ. ಕರೆ ನೀಡಿದರು.
ಅವರು ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ಜವಾಹರಲಾಲ್ ನೆಹರು ಅವರ ಜನ್ಮದಿನ ಆಚರಣೆ ಮತ್ತು ಪಾಲಕ, ಪೋಷಕ ಮತ್ತು ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ವಕೀಲ ಮಹಾಂತೇಶ ಅವಾರಿ, ನೆಹರು ವ್ಯಕ್ತಿತ್ವ ಮತ್ತು ಅವರ ಕೊಡುಗೆಗಳನ್ನು ಸ್ಮರಿಸುತ್ತ ವಿದ್ಯಾರ್ಥಿ ಜೀವನ ಅಮೂಲ್ಯ. ಈ ಹಂತದಲ್ಲಿ ಸಕಾರಾತ್ಮಕ ಮನೋಭಾವ ಹೆಚ್ಚಿಸಿಕೊಳ್ಳುವ ಮೂಲಕ ನಾಡಿನ ಸತ್ಪ್ರಜೆಗಳಾಗಬೇಕು. ಆಧುನಿಕ ಆಡಂಬರದ ಮೋಹಗಳಿಂದ ದೂರವಿರಬೇಕು ಎಂದರು.
ಸಿಡಿಸಿ ಸದಸ್ಯ ಚಂದ್ರಶೇಖರ ಚಟ್ನಿಹಾಳ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಹುಚ್ಚೇಶ ಕಾಳಹಸ್ತಿಮಠ, ಪ್ರಭು ನಾಗೂರ, ಮುತ್ತಣ್ಣ ಬ್ಯಾಳಿ, ಅಶ್ವಿನಿ ಹುಚನೂರ, ರವಿ ಹಳಪೇಟಿ, ಮುತ್ತಣ್ಣ ಗಂಜಿಹಾಳ, ರೇಖಾ ಬ್ಯಾಳಿ ಉಪಸ್ಥಿತರಿದ್ದರು.
ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಂತಿ ಬೆಣಗಿ ಪ್ರಾರ್ಥಿಸಿದರು. ಛಾಯಾ ಪುರಂದರೆ ಸಂವಿಧಾನ ಪೀಠಿಕೆ ಬೋಧಿಸಿದರು. ಐ.ಎಚ್.ನಾಯಿಕ ಅತಿಥಿಗಳನ್ನು ಪರಿಚಯಿಸಿದರು. ಡಾ.ಎನ್.ವೈ.ನದಾಫ ನಿರೂಪಿಸಿದರು. ಎಚ್.ಟಿ. ಅಗಸಿಮುಂದಿನ ವಂದಿಸಿದರು. ನಂತರ ಪಾಲಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

