ಮೂಡಲಗಿ: ಕಲ್ಲೋಳಿ ಪಟ್ಟಣವು ರಾಜಕೀಯ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ, ಕ್ರೀಡೆ ಹಾಗೂ ಇತರೆ ರಂಗದಲ್ಲಿ ಮೂಡಲಗಿ ವಲಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಗೋಕಾಕದ ನಿವೃತ್ತ ಉಪನ್ಯಾಸಕ ಸಾಹಿತಿ ಚಂದ್ರಶೇಖರ ಅಕ್ಕಿ ಹೇಳಿದರು
ಅವರು ಗುರುವಾರ ರಾತ್ರಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಪಟ್ಟಣದ ಗಾಂಧಿ ಮೈದಾನದ ರಂಗ ಮಂದಿರದಲ್ಲಿ ನೀನಾಸಂ ತಂಡದಿಂದ ಸುವರ್ಣ ಕರ್ನಾಟಕದ ಸಂಭ್ರಮ 2023 ಅಂಗವಾಗಿ ಗುರುವಾರ ರಾತ್ರಿ ‘ಹುಲಿಯ ನೆರಳು’ನಾಟಕದ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನಲ್ಲಿ 1940 ರಲ್ಲಿ ಕೆ.ವಿ.ಸುಬ್ಬಣ್ಣನವರಿಂದ ಪ್ರಾರಂಭಗೊಂಡ ನೀನಾಸಂ ಅನ್ನುರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಮಗ ಕೆ.ವಿ.ಅಕ್ಷರರವರು ಮುಂದುವರೆಸಿಕೊಂಡು ಬಂದಿದ್ದಾರೆ, ಪ್ರಸ್ತುತ ಕೇವಲ ದಕ್ಷಿಣ ಭಾಗದಲ್ಲಿ ಇದರ ಪ್ರಯೋಗಗಳು ನಡೆಯುತ್ತಿದ್ದು, ಸದ್ಯ ಉತ್ತರ ಕರ್ನಾಟಕದಲ್ಲಿ ಇದರ ಪ್ರಯೋಗ ಯಶಸ್ವಿಗೊಳ್ಳುತ್ತಿದೆ, ಹಲವಾರು ಸಾಹಿತಿಗಳ ಕಾದಂಬರಿ ಆಧಾರಿತ ಸಮಾಜ ಜಾಗೃತಿಗೊಳಿಸುವ ನಾಟಕ ಪ್ರಯೋಗ ಮಾಡುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಮುಖ್ಯ ಅತಿಥಿ ಗೋಕಾಕದ ಮುಖಂಡ ಅಶೋಕ ಪೂಜೇರಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪೌರಾಣಿಕ ನಾಟಕಗಳು ಕಷ್ಟಕರವಾಗಿದ್ದು, ನೀನಾಸಂ ತಂಡದಿಂದ ಪ್ರದರ್ಶನವಾಗುತ್ತಿರುವ ನಾಟಕ ಪ್ರದರ್ಶನಕ್ಕೆ ಜನರು ಉತ್ತಮ ಪ್ರತಿಕ್ರಿಯೆ ತೋರುತ್ತಿರುವುದು ಸಂತೋಷದ ಸಂಗತಿ, ನೀನಾಸಂ ಮುಖ್ಯ ಉದ್ದೇಶ ಕಲಾವಿದರಿಗೆ ಪರಿಪೂರ್ಣವಾದ ತರಬೇತಿ ನೀಡಿ ಈ ನಾಡಿನ ಶ್ರೇಷ್ಠ ಕಲಾವಿದರನ್ನಾಗಿ ಹೊರ ಹೊಮ್ಮುಬೇಕು, ಕಲಾವಿದರ ಕಲಾಪ್ರತಿಭೆಯನ್ನು ಈ ನಾಡಿನಾದ್ಯಂತ ಪ್ರದರ್ಶನ ಮಾಡಬೇಕೆಂಬ ಭಾವನೆಯಿಂದ ಕಟ್ಟಿದ ಸಂಸ್ಥೆಯಾಗಿದೆ, ನೀನಾಸಂದಲ್ಲಿ ಕಲಾ ಪ್ರದರ್ಶನ ನೀಡಿದವರು ಒಂದು ವರ್ಷದಲ್ಲಿ ಚಲನ ಚಿತ್ರ ಮತ್ತು ಟಿವಿ ಮಾಧ್ಯಮದಲ್ಲಿ ಗುರುತಿಸಿಕೊಳ್ಳತ್ತಿದ್ದಾರೆ ಎಂದ ಅವರು ಈ ನಾಡಿನಲ್ಲಿ ರಂಗಭೂಮಿ, ಜಾನಪದ ಕಲೆ, ಹವ್ಯಾಸಿ ಕಲೆ ಸೇರಿದಂತೆ ಇತರೆ ಕಲೆಗಳು ಉಳಿಯಬೇಕಾದರೆ ಕಲಾಕಾರ, ಸಾಹಿತ್ಯ ಬರೆಯುವರಿಂದ ಮತ್ತು ಪ್ರೇಕ್ಷಕರಿಂದ ಮಾತ್ರ ಸಾಧ್ಯ ಇಲ್ಲ ಕಲಾ ಪ್ರದರ್ಶನ ಆಯೋಜನೆ ಮಾಡುವವರಿಂದಲು ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಸಮಾರಂಭದ ವೇದಿಕೆಯಲ್ಲಿ ಸಂಘಟಕರಾದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಬೆಳಕೂಡ, ಬಸವರಾಜ ಕಡಾಡಿ, ವಸಂತ ತಹಶಿಲ್ದಾರ, ಕೃಷ್ಣಪ್ಪ ಮುಂಡಿಗಿನಾಳ, ಬಸವರಾಜ ಬೆಳಕೂಡ, ಗಿರಿಮಲ್ಲಪ್ಪ ಸಂಸುದ್ದಿ, ಮಲ್ಲಪ್ಪ ಕಡಾಡಿ, ಬಾಳು ಕಂಕಣವಾಡಿ, ಸುಭಾಸ ಕುರಬೇಟ, ಭೀಮಶಿ ಹೆಬ್ಬಾಳ, ಬಸವರಾಜ ದಾಸನಾಳ, ಹಣಮಂತ ಸಂಗಟಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಇದ್ದರು.
ಜಗದೀಶ ಗೊರಗುದ್ದಿ ಸ್ವಾಗತಿಸಿದರು, ಪ್ರಕಾಶ ಗರಗಟ್ಟಿ ನಿರೂಪಿಸಿದರು, ದುಂಡಯ್ಯಾ ಕರಗಾಂವಿಮಠ ವಂದಿಸಿದರು