ಮೂಡಲಗಿ: ಕಲ್ಲೋಳಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿಯಿಂದ ಸ್ಪರ್ಧಿಸಿರುವ ಎಲ್ಲಾ 16 ಅಭ್ಯರ್ಥಿಗಳಿಗೂ ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ರಾಜ್ಯಸಭಾ ಸದಸ್ಯನಾದ ನನ್ನ ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಕೈಗಳನ್ನು ಬಲಪಡಿಸಬೇಕಾಗಿ ಸಂಸದ ಈರಣ್ಣ ಕಡಾಡಿ ಮತದಾರರಿಗೆ ಸಾರ್ವಜನಿಕವಾಗಿ ವಿನಂತಿಸಿದರು.
ಶುಕ್ರವಾರ ಡಿ.24 ರಂದು ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಪ್ರಚಾರಾರ್ಥ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ, ಕಲ್ಲೋಳಿ ಗ್ರಾಮವು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ನಂತರವೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ, ಆದಕಾರಣ ಈ ಬಾರಿ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು, ಅವರೆಲ್ಲರನ್ನೂ ಗೆಲ್ಲಿಸುವ ಮೂಲಕ ಪಟ್ಟಣ ಪಂಚಾಯತಿಯಲ್ಲಿ ಬಹುಮತ ನೀಡಬೇಕಾಗಿ ಕೋರಿದರು.
ಸಂಸದನಾದ ನಾನು, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಕಲ್ಲೋಳಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಬದ್ದರಾಗಿರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡರುಗಳಾದ ಬಿ.ಡಿ.ಸಿ.ಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ, ರಾವಸಾಬ ಬೆಳಕೂಡ, ಅಜೀತ ಬೆಳಕೂಡ, ಬಸವರಾಜ ಕಡಾಡಿ, ಹಣಮಂತ ಸಂಗಟಿ, ಮಾರುತಿ ಹೂಗಾರ, ರಾಮಪ್ಪ ಹೆಬ್ಬಾಳ, ಭೀಮಶಿ ಹೆಬ್ಬಾಳ, ಶ್ರೀಶೈಲ ತುಪ್ಪದ, ಈರಣ್ಣ ಮುನ್ನೋಳಿಮಠ, ಪರಶುರಾಮ ಇಮಡೇರ, ಬಾಳು ಕಂಕಣವಾಡಿ ಸೇರಿದಂತೆ ಎಲ್ಲಾ ವಾರ್ಡ ಅಭ್ಯರ್ಥಿಗಳು, ಬೆಂಬಲಿಗರೂ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.