ಮೂಡಲಗಿ: ಸ್ವಾಮಿತ್ವ ಯೋಜನೆಯಡಿ ಬೆಳಗಾವಿ ಜಿಲ್ಲೆಯ 1,329 ಗ್ರಾಮಗಳ ಪೈಕಿ 1,302 ಗ್ರಾಮಗಳಲ್ಲಿ ಡ್ರೋನ್ ಮೂಲಕ ಸಮೀಕ್ಷೆ ಪೂರ್ಣಗೊಂಡಿದೆ. 88 ಗ್ರಾಮಗಳಲ್ಲಿ 17,328 ಆಸ್ತಿ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯ ಎಷ್ಟು ಗ್ರಾಮಗಳಲ್ಲಿ ಡ್ರೋನ್ ಮೂಲಕ ಸಮೀಕ್ಷೆ ಮಾಡಲಾಗಿದೆ ಮತ್ತು ಎಷ್ಟು ಆಸ್ತಿ ಕಾರ್ಡಗಳನ್ನು ವಿತರಣೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕರ್ನಾಟಕ ರಾಜ್ಯದಲ್ಲಿ 25,418 ಗ್ರಾಮಗಳ ಸಮೀಕ್ಷೆ ಪೂರ್ಣಗೊಂಡಿದೆ ಮತ್ತು 2,626 ಗ್ರಾಮಗಳಲ್ಲಿ 3.32 ಲಕ್ಷ ಆಸ್ತಿ ಕಾರ್ಡ್ಗಳನ್ನು ವಿತರಿಸಲಾಗಿದೆ.
ಸ್ವಾಮಿತ್ವ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ನಕ್ಷೆ ರಚನೆ ಮೂಲಕ ಜನರ ಆಸ್ತಿ ಹಕ್ಕುಗಳು, ಪಂಚಾಯತ್ ಭೂಮಿ ಮತ್ತು ಮೇವು ಪ್ರದೇಶಗಳನ್ನು ಗುರುತಿಸುವಂತಹ ಭೂ ಮಾಲೀಕತ್ವದ ವಿವಾದಗಳನ್ನು ಪರಿಹರಿಸುತ್ತದೆ, ರೈತರಿಗೆ ಭೂ ವಿವಾದಗಳು ಸಾಮಾನ್ಯವಾಗಿದ್ದು, ಭೂ ದಾಖಲೆಗಳನ್ನು ಪಡೆಯುವುದು ಸವಾಲಿನ ಕೆಲಸವಾಗಿದ್ದು, ಆಗಾಗ್ಗೆ ಅಧಿಕಾರಿಗಳನ್ನು ಭೇಟಿ ಮಾಡುವ ಅಗತ್ಯವಿದ್ದು ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಇದರಿಂದಾಗಿ ಗ್ರಾಮ ಪಂಚಾಯತ್ಗಳು ಕೂಡಾ ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿವೆ.
ಇ-ಗ್ರಾಮ ಸ್ವರಾಜ್ ಪೋರ್ಟಲ್ ಅನ್ನು ದೇಶಾದ್ಯಂತ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಇ-ಆಡಳಿತವನ್ನು ಬಲಪಡಿಸುವ ದೃಷ್ಟಿಯಿಂದ ಪ್ರಾರಂಭಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿರುವ 497 ಗ್ರಾಮ ಪಂಚಾಯತ್ಗಳಲ್ಲಿ 15 ನೇ ಹಣಕಾಸು ನಿಧಿ ಅನುದಾನಗಳಲ್ಲಿ ಬಳಸಿಕೊಳ್ಳಲು ಈ ತಂತ್ರಾಶವನ್ನು ಅಳವಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

