ಹುಬ್ಬಳ್ಳಿ :ಇಂದು ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ ಎಮ್.ಕೆ. ಹುಬ್ಬಳ್ಳಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಚಟುವಟಿಕೆಗಳು ಜರುಗಿದವು. ಕಾರ್ಯಕ್ರಮಕ್ಕೆ ಪಿ.ಎಂ. ಪೋಷಣ ಯೋಜನೆಯ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ “ಸುಸ್ಥಿರ ಭೂಮಿಗೆ ನಮ್ಮ ಕೊಡುಗೆ” ಎಂಬ ಮಹತ್ವಪೂರ್ಣ ವಿಷಯದ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಮಕ್ಕಳಿಗೆ ಪರಿಸರ ಸಂರಕ್ಷಣೆಯ ಅವಶ್ಯಕತೆ, ಜಲವಾಯು ಬದಲಾವಣೆಯ ಪರಿಣಾಮ ಹಾಗೂ ಪ್ರತಿಯೊಬ್ಬರ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಿದರು.
ಕಾರ್ಯಕ್ರಮದಲ್ಲಿ ಹೊಂಡಾ ಕಂಪನಿಯ ಏರಿಯಾ ಮ್ಯಾನೇಜರ್ ಮಂಜುನಾಥ ಪಾಟೀಲ ಉಪಸ್ಥಿತರಿದ್ದು, ಹೊಸದಾಗಿ ಶಾಲೆಗೆ ಸೇರಿರುವ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ವಿತರಿಸಿದರು. ಜೊತೆಗೆ ಅವರು ಸಹ ಮಕ್ಕಳಿಗೆ ಪರಿಸರ ಜಾಗೃತಿಯ ಬಗ್ಗೆ ಪ್ರೇರಣಾತ್ಮಕ ಸಂದೇಶ ನೀಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗಂಗಣ್ಣ ಸಂಗೋಳ್ಳಿ ಅವರು ಶಾಲೆಯ ಪರಿಸರ ಸಂರಕ್ಷಣಾ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಸಿದ್ದಯ್ಯ ಹಿರೇಮಠ ವಹಿಸಿದ್ದರು. ಜೊತೆಗೆ ಶಾಲೆಯ ಶಿಕ್ಷಕರಾದ ಕೆ.ಜಿ. ಗಡಾದ, ಎನ್.ವಾಯ್. ಗುಂಡೇನ್ನವರ, ಜಿ.ಎಮ್. ಕಡೋಲಿ, ರಾಜಶ್ರೀ ಗಂಡ್ಲಿಗನ್ನವರ, ಜಗದೀಶ ಬಾರಕೇರ, ಬಸವರಾಜ ಹೊಂಗಲ, ಝೆನ್ ಎನ್. ಮಕಾಂದಾರ್ ಮೊದಲಾದವರು ಉಪಸ್ಥಿತರಿದ್ದರು.