ಸಿಂದಗಿ: ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಶ್ರೀಮತಿ ಸಾವಿತ್ರಿ ಬಾಯಿ ಫುಲೆ ಇವರನ್ನು ನೆನೆಯುತ್ತಾ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು. ಶಿಕ್ಷಣವನ್ನು ಪಡೆಯುವ ಮೂಲಕ ತಮ್ಮ ಗುರಿಯನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಹೇಳಿದರು.
ಪಟ್ಟಣದ ಶ್ರೀ ಶಾಂತವೀರ ಪಟ್ಯಾಧ್ಯಕ್ಷರ ಕನಾ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ, ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಪ್ರಯುಕ್ತ “ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ” ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಾಲ್ಯವಿವಾಹ ಆದ ಸಂದರ್ಭದಲ್ಲಿ ಮಗು ಹುಟ್ಟುವ ಸಂದರ್ಭವನ್ನು ಮಗುವಿಗೊಂದು ಮಗು ಎನ್ನುವ ಪದ್ದತಿಯಿಂದ ದೂರವಿರಬೇಕು ಹಾಗಾಗಿ ಬಾಲವಿವಾಹವನ್ನು ತಡೆಗಟ್ಟುವಲ್ಲಿ ಹೆಣ್ಣುಮಕ್ಕಳು ತಮ್ಮ ಪಾತ್ರವನ್ನು ವಹಿಸಬೇಕು ಎಂದರು.
ವಕೀಲರ ಸಂಘ ಅಧ್ಯಕ್ಷ ಎಸ್.ಬಿ ದೊಡಮನಿ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವದರೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಬೇಕು ಮತ್ತು ತಮಗೆ ದೊರೆಯುವ ಮೀಸಲಾತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ್ರಾಯ ಹರನಾಳ ಮಾತನಾಡಿ, ಶ್ರೀಮತಿ ಸಾವಿತ್ರಿ ಬಾಯಿ ಪುಲೆ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಹೋರಾಟ ಸಂದರ್ಭದಲ್ಲಿ ಜನರಿಂದ ಆದ ಅವಮಾನಗಳನ್ನು ಲೆಕ್ಕಿಸದೇ ಹೆಣ್ಣುಮಕ್ಕಳು ಪುರುಷರಷ್ಟೇ ಸಮಾನರು ಹಾಗೂ ಪ್ರಸ್ತುತ ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಬದಲಾವಣೆಯತ್ತ ಸಾಗುತ್ತಿರುವದರ ಖುಷಿ ತಂದಿದೆ ಎಂದರು.
ಸಹಾಯಕ ಸರಕಾರಿ ವಕೀಲ ಆನಂದ ರಾಠೋಡ ಮಾತನಾಡಿ, ಹೆಣ್ಣುಮಕ್ಕಳು ಸಮಾಜದ ಒಂದು ಅವಿಭಾಜ್ಯ ಅಂಗ ಹೆಣ್ಣುಮಕ್ಕಳನ್ನು ಗೌರವಿಸುವುದು ಪ್ರತಿಯೊಬ್ಬ ಪುರುಷನ ಆದ್ಯ ಕರ್ತವ್ಯವೆಂದು ಹೇಳಿದರು.
ಕುಮಾರಿ ಎಸ.ಎಮ್ ಪಟೇಲ್ ಕಾಚರ ವಕೀಲರು ಮಾತನಾಡಿ, ಹೆಣ್ಣುಮಕ್ಕಳು ತಮ್ಮ ಒಗ್ಗಟ್ಟನ್ನು ಬೆಳೆಸಿ ಕೊಳ್ಳುವುದರ ಮೂಲಕ ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಹೋರಾಟವನ್ನು ಮಾಡಬೇಕು ಮತ್ತು ಹೆಣ್ಣುಮಕ್ಕಳು ಧೃಡವಾದ ಸಂಕಲ್ಪದೊಂದಿಗೆ ಉತ್ತಮ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು ಹಾಗೂ ಆ ಗುರಿಯನ್ನು ಬೆನ್ನಟ್ಟಿ ಒಳ್ಳೆಯ ಸ್ಥಾನಕ್ಕೆ ತಲುಪಬೇಕು ಈ ಮೂಲಕ ಸಮಾಜಕ್ಕೆ ಹೆಣ್ಣಮಕ್ಕಳು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ಸಮಾಜಕ್ಕೆ ತೋರಿಸಬೇಕು ಎಂದರು.
ಶ್ರೀಮತಿ ಬಿ ಜಿಮಾನಿ ವಕೀಲರು ಮಾತನಾಡಿ, ಇತ್ತೀಚೆಗೆ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರ ಪ್ರಕರಣಗಳು ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಹೆಣುಮಕ್ಕಳ ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳು ಎಸ್.ವಾಯ್ ಮೇಲಿನಮನಿ ಸಹಾಯಕ ಸರಕಾರಿ ವಕೀಲ ವಿ.ಬಿ.ಪಾಟೀಲ, ಅಪರ ಸರಕಾರಿ ವಕೀಲ ಎಮ್.ಎಸ್.ಪಾಟೀಲ ಸೇರಿದಂತೆ ಇತರರು ಇದ್ದರು.