ಕಬ್ಬು ಒಯ್ಯದ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ

0
355
ತಾಲೂಕಿನ ಕೆಪಿಆರ್ ಶುಗರ್ಸ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಜೊತೆ ವಾಗ್ವದ ನಡೆಸಿದರು.

ಸಿಂದಗಿ: ಕಟಾವಿಗೆ ಬಂದು ಒಣಗಿ ಹೋಗುತ್ತಿರುವ ಕಬ್ಬು ಕಡಿಯದೆ ವಿಳಂಬ ನೀತಿ ತೋರುತ್ತಿರುವ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗೆ ನೂರಾರು ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಕಾರ್ಖಾನೆ ವಿರುದ್ದ ಘೋಷಣೆಗಳನ್ನು ಕೂಗಿದರು.

ರೈತಸಂಘದ ತಾಲೂಕಾಧ್ಯಕ್ಷ ಧರೆಪ್ಪಗೌಡ ಬಿರಾದಾರ ಮಾತನಾಡಿ, ಈ ಕಾರ್ಖಾನೆ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ ಚಿಕ್ಕಹಾವಳಗಿ, ಕುಮಸಗಿ, ಬಗಲೂರ, ದೇವರನಾದಗಿ, ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಕಟಾವಿಗೆ ಬಂದ ಕಬ್ಬು ಒಣಗುತ್ತಿದ್ದು ಕೆಪಿಆರ್ ಕಾರ್ಖಾನೆಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ರೈತರ ಬದುಕು ಕಬ್ಬಿನಂತೆ ಹಾಳಾಗುತ್ತಿದೆ. ವರ್ಷವಿಡಿ ಕಷ್ಟ ಪಟ್ಟು ಬೆಳೆದ ಕಬ್ಬು ಕಾರ್ಖಾನೆಗೆ ಕಟಾವು ಮಾಡದೆ ಇದ್ದರೆ ರೈತರಿಗೆ ತೂಕದಲ್ಲಿ ಕೂಡಾ ನಷ್ಟವಾಗುತ್ತದೆ. ಒಂದು ತಿಂಗಳ ಹಿಂದೆ ತಮ್ಮ ಕಾರ್ಖಾನೆಗೆ ಚಿಕ್ಕ ಹಾವಳಗಿ ಗ್ರಾಮದಿಂದ ಬಂದು ಮನವಿ ಮಾಡಿಕೊಂಡಾಗ ಒಂದು ವಾರದೊಳಗೆ ಟೋಳಿ ನಿಯೋಜನೆ ಮಾಡುವದಾಗಿ ಹೇಳಿದ್ದಿರಿ ಇನ್ನೂ ಕೂಡಾ ಮಾಡಿಲ್ಲ. ಆದ ಕಾರಣ ತಮ್ಮ ಕಾರ್ಖಾನೆಯಿಂದ ಕಬ್ಬು ಕಟಾವು ಮಾಡುವ ಗ್ಯಾಂಗಗಳನ್ನು ಹಾಕಿ ಕಬ್ಬು ತರಬೇಕು ಇಲ್ಲದೇ ಹೋದರೆ ತಮ್ಮ ಕಾರ್ಖಾನೆ ಮುಂದೆ ಮತ್ತೆ ಪ್ರತಿಭಟನೆ ಮಾಡಬೇಕಾಗುತ್ತದೆ ಇದಕ್ಕೆ ಆಸ್ಪದಕೊಡದೆ ಕೂಡಲೆ ಗಾಡಿಗಳನ್ನು ನಿಯೋಜನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ವ್ಯವಸ್ಥಾಪಕ ಗಂಗಾದರ ಹುಕ್ಕೇರಿ ಮತ್ತು ಪಾರ್ಥಿವ ಅವರು ಮಾತನಾಡಿ, ಚಿಕ್ಕ ಹಾವಳಗಿ ಸೇರಿದಂತೆ ಅನೇಕ ಗ್ರಾಮಗಳಿಗೆ ನಾಲ್ಕು ದಿನಗಳಲ್ಲಿ ಗ್ಯಾಂಗ್ ಹಾಕಿ ಕಬ್ಬು ಕಟಾವು ಮಾಡಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜೋಗುರ, ಅಶೋಕ ಕೊಳಾರಿ, ಶರಣಪ್ಪ ಕಣಮೇಶ್ವರ, ರಮೇಶ ಹೂಗಾರ, ಸಂತೋಷ ಬಸಗೊಂಡ, ಸಿದ್ದನಗೌಡ ಬಿರಾದಾರ, ದೇವೇಂದ್ರ ಗಾಣಗೆರ, ಬಸವರಾಜ ತಾವರಖೇಡ, ಬಾಬು ಕೊತಂಬರಿ, ಶ್ರೀಮಂತ ದುದ್ದಗಿ, ಹಣಮಂತ್ರಾಯಗೌಡ ಬಿರಾದಾರ, ಶ್ರೀಪತಿ ಗೌಡ ಪಾಟೀಲ ಸೆರಿದಂತೆ ನೂರಾರು ರೈತರು ಇದ್ದರು.