ಸಿಂದಗಿ: ಎರಡನೇ ಲೋಕಸಭಾ ಚುನಾವಣೆಯಲ್ಲಿ 2022ಕ್ಕೆ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿ ಯಾವುದೇ ಯೋಜನೆ ರೂಪಿಸದೇ ರೈತರ ಉತ್ಪಾದನೆ ವೆಚ್ಚವನ್ನು ಏರಿಕೆ ಮಾಡುವಂಥ ರಸಗೊಬ್ಬರ ಬೆಲೆ, ಬೀಜದ ಬೆಲೆ, ಡಿಸೇಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಗದಾ ಪ್ರಹಾರ ಮಾಡುತ್ತಿರುವ ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ಧೋರಣೆಯನ್ನು ಖಂಡಿಸಿ ಸೆ.27 ರಂದು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಗಾರರು ಭಾರತ್ ಬಂದ್, ಕರ್ನಾಟಕ ಬಂದ್ ಕರೆ ನೀಡಿದ್ದು ಆ ಹೋರಾಟಕ್ಕೆ ರಾಜ್ಯದ ಎಲ್ಲ ರೈತರು ಸಂಪೂರ್ಣ ಬೆಂಬಲ ನೀಡಬೇಕು ಎಂದು ಕರ್ನಾಟಕ ರೈತಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬ ಬೆಳೆಗಾರರಿಗೆ ನಿರಂತರ ಶೋಷಣೆ ನಡೆಯುತ್ತಿದ್ದರು ಕೂಡಾ ಕಾರ್ಖಾನೆಗಳ ಮಾಲೀಕರ ಮಾತಿಗೆ ಸರಕಾರ ಪತ್ರಿ ಕ್ವಿ.ಗೆ ರೂ 5 ಏರಿಕೆ ಮಾಡಿ ರೈತರಿಗೆ ದ್ರೋಹ ಬಗೆದಿದೆ. ರೈತರಿಗೆ ಕಾಮಧೇನು ಕಲ್ಪವೃಕ್ಷವಾದ ಕಬ್ಬಿನಿಂದ ಎಲ್ಲ ಉತ್ಪನ್ನಗಳನ್ನು ಪಡೆದು ಡಬಲ್ ಹಣ ಸಂಗ್ರಹ ಮಾಡುತ್ತಿದೆ ಆದಾಗ್ಯೂ ರೈತರ ಖರ್ಚು ಡಬಲ್ ಮಾಡಿ ರೈತರ ಬದುಕು ಹಾಳು ಮಾಡುತ್ತ ಕಾರ್ಖಾನೆ ಮಾಲೀಕರು ಸಾಹುಕಾರಿಗಳಾಗುವಂತೆ ಮಾಡಿ ರೈತರ ವ್ಯವಸ್ಥೆಯನ್ನೆ ಕೇಂದ್ರ ಸರಕಾರ ದ್ರೋಹ ಬಗೆಯುತ್ತಿದೆ. ರೈತರಿಗೆ ಎಫ.ಅರ್.ಪಿ ಪ್ರಕಾರ ಪ್ರತಿ ಟನ್ಗೆ 3200 ನೀಡಬೇಕು ಆದರೆ 1900 ಮಾತ್ರ ನೀಡಿ ಇನ್ನೂಳಿದ ಹಣ ಬಾಕಿ ಉಳಿಸಿಕೊಂಡು ರೈತರನ್ನು ಮೂಲೆಗೆ ತಳ್ಳಿ ಶಾಸಕರು ಮಂತ್ರಿಗಳು ಸೇರಿ ರೈತರ ಸಮಾಧಿ ಕಟ್ಟಿದ್ದಾರೆ ಎಂದು ದೂರಿದರು.
ಕೇಂದ್ರ ಸರಕಾರ ರೈತರಿಗೆ ಮಾರಕವಾಗುತ್ತಿರುವ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳ ತೆಕ್ಕೆಗೆ ನೀಡಲು ಮುಂದಾಗಿದೆ, ವಿದ್ಯುತ್ ಖಾಸಗಿಕರಣದ ಮೂಲಕ ಕೃಷಿ ಪಂಪಸೆಟ್ಗಳಿಗೆ ಉಚಿತ ವಿದ್ಯುತ್ ನಿಲ್ಲಿಸಲು ಮೀಟರ್ ಅಳವಡಿಸಲು ಯತ್ನಿಸುತ್ತಿದೆ., ರೈತರ ಅನುಕೂಲಕ್ಕೆ ಬೇಕಾದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲ ನಿಗದಿ ಮಾಡುವಾಗ ಶಾಸನಬದ್ಧವಾದ ಖಾತ್ರಿ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದ್ದರು ಕೇಂದ್ರ ಸರಕಾರ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ.
ಈ ಎಲ್ಲ ವಿಚಾರಗಳ ಬಗ್ಗೆ ಕಳೆದ 10 ತಿಂಗಳಿಂದ ದೇಶದ 500 ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ 10 ತಿಂಗಳಿನಿಂದ ನಿರಂತರ ಹೋರಾಟ ನಡೆಸುತ್ತಾ 600ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದರು ಇದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆ ಕಾರಣ ದೇಶವ್ಯಾಪಿ ಎಲ್ಲ ರೈತ ಸಂಘಟನೆಗಳು ಸಂಯುಕ್ತ ಕಿಸಾನ ಮೋರ್ಚಾ ಹೆಸರಿನಲ್ಲಿ ಭಾರತ್ ಬಂದ್ ಕರೆ ನೀಡಿದ್ದಾರೆ ಅದಕ್ಕೆ ಎಲ್ಲ ರೈತರು ಈ ಹೋರಾಟಕ್ಕೆ ಬೆಂಬಲಿಸಿ ಎಂದರು.
ಜಿಲ್ಲಾ ಮುಖಂಡ ರಮೇಶ ಹೂಗಾರ ಮಾತನಾಡಿ, ಭೀಮಾನದಿ ಪ್ರವಾಹದಿಂದ ಮುಳುಗಡೆಯಾದ ಹಳ್ಳಿಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಕಬ್ಬು ನಾಶವಾದರು ಇನ್ನೂವರೆಗೂ ಪರಿಹಾರ ದೊರಕ್ಕಿಲ್ಲ ಇದರ ಬಗ್ಗೆ ಸರಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧದಾನ ಕಾರ್ಯದರ್ಶಿ ವೀರನಗೌಡ ಪಾಟೀಲ, ರಾಜ್ಯ ಸಂ.ಕಾರ್ಯದರ್ಶಿ ಹತ್ತಳ್ಳಿ ದೇವರಾಯ, ದೌಲತರಾಯ ಬಿರಾದಾರ, ತಾಲೂಕಾಧ್ಯಕ್ಷ ಧರೇಪ್ಪ ಬಿರಾದಾರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.