ಗೋಕಾಕ- ರೈತರಿಗಾಗಿಯೇ ಕೆಎಂಎಫ್ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಆರ್ಥಿಕ ಬಲವರ್ಧನೆ ಮಾಡಿಕೊಳ್ಳುವಂತೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಎನ್ಎಸ್ಎಫ್ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಎಂಎಫ್ ರೈತರ ಜೀವನಾಡಿಯಾಗಿದೆ ಎಂದು ಹೇಳಿದರು.
ಮಳೆರಾಯನ ಕೃಪೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ. ಮಳೆಯು ಉತ್ತಮವಾಗಿ ಆಗುತ್ತಿದ್ದು, ರೈತರಿಂದ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ ಎಂದು ತಿಳಿಸಿದರು.
ಹೈನುಗಾರಿಕೆಯನ್ನು ಉತ್ತೇಜಿಸಲು ಕೆಎಂಎಫ್ ಮುಂದೆ ಬಂದು ರೈತರಿಗೆ ಜೋಳ, ಮೆಕ್ಕೆಜೋಳ, ಬೀಜ ಮತ್ತು ಮೇವುಗಳನ್ನು ವಿತರಿಸುತ್ತಿದೆ. ಹೈನುಗಾರ ರೈತರು ಸಹ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲುಗಳನ್ನು ಪೂರೈಕೆ ಮಾಡಬೇಕು. ಇದರಿಂದ ಮಾರುಕಟ್ಟೆಯು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸರ್ವೋತ್ತಮ ಜಾರಕಿಹೊಳಿ ಅವರು ಇದೇ ಸಮಯದಲ್ಲಿ ರೈತರಿಗೆ ಅಗತ್ಯವಿರುವ ಮೆಕ್ಕೆಜೋಳ, ಜೋಳ ಹಾಗೂ ಬೀಜಗಳನ್ನು ವಿತರಿಸಿದರು. ಮರಣ ಹೊಂದಿದ ರಾಸು ವಿಮೆ, ಅಗ್ನಿ ಅವಘಡದಲ್ಲಿ ಅಪಘಾತ ಸಂಭವಿಸಿದ ರೈತ ಫಲಾನುಭವಿಗಳಿಗೆ ಒಂದು ಲಕ್ಷರೂಪಾಯಿ ವಿಮೆಯ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲು ಪಾಟೀಲ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ, ಡಾ. ಕೌಜಲಗಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.