Homeಸುದ್ದಿಗಳುಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ

ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ

ಸವದತ್ತಿ:  ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಬಿ. ಬಿ. ಗಣಾಚಾರಿ ಪ್ರೌಢಶಾಲೆ ಮರಕುಂಬಿಯ ಶ್ರೀಯಾ ತಿಗಡಿಕರ್(621), ಸರಕಾರಿ ಪ್ರೌಢಶಾಲೆ ಸಂಗ್ರೆಶಕೊಪ್ಪದ ಶಿವರಾಜ ಗುಡದೂರ(621), ಸಿದ್ದಲಿಂಗೇಶ್ವರ ಪ್ರೌಢಶಾಲೆ ಇನಾಂಹೊಂಗಲ ದ ಪ್ರಶಾಂತ ತುರಮರಿ (621), ದ್ವಿತೀಯ ಸ್ಥಾನ ಪಡೆದ ಸರಕಾರಿ ಪ್ರೌಢಶಾಲೆ ಸಂಗ್ರೆಶಕೊಪ್ಪದ ಸಾವಿತ್ರಿ ಕುಲಕರ್ಣಿ(620), ಸರಕಾರಿ ಪ್ರೌಢಶಾಲೆ ಮುಗಳಿಹಾಳದ ಬಸವರಾಜ ಅರಭಾವಿ (620), ಹಾಗೂ ತೃತೀಯ ಸ್ಥಾನ ಪಡೆದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಸವದತ್ತಿ ಯ ಸಾಹಿತ್ಯ ಕೊಪ್ಪದ (619) ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭವನ್ನು  ಉದ್ದೇಶಿಸಿ ತಹಶೀಲ್ದಾರರು ಮತ್ತು ತಾಲೂಕ ದಂಡಾಧಿಕಾರಿಗಳಾದ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ವಿದ್ಯಾರ್ಥಿಗಳ ಜೀವನ ನಿಂತ ನೀರಲ್ಲ ಅವರ ಪ್ರಯತ್ನ ಹರಿಯುವ ನದಿಗಳಂತೆ ನಿರಂತರ ವಾಗಿರಬೇಕು ಎಂದರು. ಕಷ್ಟವು ವಿದ್ಯಾರ್ಥಿಗಳನ್ನು ಯಶಸ್ಸಿನ ಮೆಟ್ಟಿಲಿಗೆ ಕೊಂಡೊಯ್ಯುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೂಡ ಸಹಿಸಿಕೊಂಡು ನಾವು ಇಟ್ಟುಕೊಂಡಿರುವ ಗುರಿಯ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕು ಅಂದಾಗ ಮಾತ್ರ ಯಶಸ್ಸಿನ ಮೆಟ್ಟಿಲು ತಲುಪಲು ಸಾಧ್ಯವಾಗುತ್ತದೆ ಎಂದರು. ಹತ್ತನೇ ತರಗತಿ ಬಂದಾಗ ಮಾತ್ರ ಓದಲು ಪ್ರಾರಂಭ ಮಾಡದೆ ಒಂದನೇ ತರಗತಿಯಿಂದಲೇ ಓದುವ ಹವ್ಯಾಸವನ್ನು ಪಾಲಕರು, ಶಿಕ್ಷಕರು ಮಕ್ಕಳಿಗೆ ರೂಢಿ ಮಾಡಿಸಬೇಕು. ಪ್ರತಿನಿತ್ಯ ಗೃಹ ಪಾಠಗಳನ್ನು ಪರಿಶೀಲನೆ ಮಾಡಬೇಕು. ಈ ರೀತಿಯ ಪರಂಪರೆಯನ್ನು ಹಾಕಿ ಕೊಟ್ಟಾಗ ಮಾತ್ರ ಮುಂಬರುವ ದಿನಮಾನಗಳಲ್ಲಿ ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಿವಿಮಾತು ಹೇಳಿದರು

“ಸೋಲು ಗೆಲುವಿನ ಸೋಪಾನ” ಆದ್ದರಿಂದ ಪರೀಕ್ಷೆ ಎಂಬುದು ಜೀವನದ ಒಂದು ಭಾಗ ಮಾತ್ರ. ಆದ್ದರಿಂದ ಯಶಸ್ಸಿನ ಕಡೆಗೆ ಜಾಣ ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಮಾಡಬೇಕು ಅದೇ ರೀತಿಯಾಗಿ ಒಂದು ಅಥವಾ ಎರಡು ವಿಷಯಗಳನ್ನು ಅನುತ್ತಿರ್ಣ ಆದ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಯಲ್ಲಿ ಪಾಸ್ ಆಗುವ ಭರವಸೆಯನ್ನ ಇಟ್ಟುಕೊಂಡು ಮುಂದಿನ ಭವಿಷ್ಯಕ್ಕೆ ಅಣಿಯಾಗಬೇಕು, ದುಡುಕಿ ಯಾವುದೇ ರೀತಿಯ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಬೆಳಗಾವಿ ಜಿಲ್ಲೆಯ ಏಳು ಶೈಕ್ಷಣಿಕ ತಾಲೂಕುಗಳಲ್ಲಿ 2024 – 25ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 3ನೇ ಸ್ಥಾನ ಗಳಿಸಿರುವುದು ಸಂತಸದಾಯಕ ವಿಷಯ ಹಾಗೂ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ತಾಲೂಕ ಹಂತದ ಎಲ್ಲಾ ಅಧಿಕಾರಿಗಳು ಬರುವ ಜೂನ್ ತಿಂಗಳಿನಿಂದಲೇ ಪ್ರೌಢಶಾಲೆಗಳನ್ನು ಭೇಟಿ ಮಾಡಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಲು ಮುಂದಾಗಲು ಸೂಚಿಸುವುದಾಗಿ ತಿಳಿಸಿದರು ಜೊತೆಗೆ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುವ ಕುರಿತು ಮಾತನಾಡಿದರು.

ಅದೇ ರೀತಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ್ ಬಡಕುಂದ್ರಿ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಲ್ಲಿ ಹುದುಗಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಹೊರಗೆ ತಂದಾಗ ಮಾತ್ರ ಅದಕ್ಕೊಂದು ಹೊಳಪು ಬರುತ್ತದೆ. ಮಕ್ಕಳು ಹತ್ತನೇ ತರಗತಿ ಮುಗಿದ ನಂತರ ಶಾಲೆಯನ್ನು ತೊರೆಯದೆ ಉನ್ನತ ವ್ಯಾಸಂಗವನ್ನು ಮಾಡಿ ದೇಶದ ಸತ್ಪ್ರಜೆಗಳಾಗಿ ದೊಡ್ಡ ಅಧಿಕಾರಿಗಳಾಗಿ ದೇಶದ ಋಣವನ್ನು ತೀರಿಸಲು ಕರೆ ಕೊಟ್ಟರು. ಹೆತ್ತ ತಂದೆ ತಾಯಿಗಳಿಗೆ, ವಿದ್ಯೆ ಕಲಿಸಿದ ಶಿಕ್ಷಕರಿಗೆ ಮತ್ತು ತಾವು ಹುಟ್ಟಿದ ಊರಿಗೆ ಕೀರ್ತಿ ತರುವಂತ ವಿದ್ಯಾರ್ಥಿಗಳಾಗಿ ಭವಿಷ್ಯದಲ್ಲಿ ರೂಪಗೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸವದತ್ತಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನರವರು ಮಾತನಾಡಿ ಸೌದತ್ತಿ ತಾಲೂಕು ಕಳೆದ ವರ್ಷ ಐದನೇ ಸ್ಥಾನದಲ್ಲಿತ್ತು. ಈ ವರ್ಷ ಐದನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಬಂದಿದೆ. ಈ ಒಂದು ಪ್ರಗತಿ ಸಂತಸದಾಯಕವಾದದ್ದು ಎಂದು ಹೇಳಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಯು ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಸರಕಾರಿ/ ಅನುದಾನಿತ/ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯವರು ಮತ್ತು ತಾಲೂಕ ಹಂತದ ಎಲ್ಲ ಅಧಿಕಾರಿ ವರ್ಗದವರನ್ನು ಅಭಿನಂದಿಸಿದರು. ಅದರಲ್ಲೂ ವಿಶೇಷವಾಗಿ ಕಾರ್ಯಕ್ರಮದ ಕೇಂದ್ರಬಿಂದುಗಳಾದ ಸಾಧಕ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿ ಮುಂದಿನ ಅವರ ಭವಿಷ್ಯ ಉಜ್ವಲವಾಗಲೆಂದು ಹರಸಿದರು. ವಿದ್ಯಾರ್ಥಿಗಳು ಓದುವಾಗ ಗಮನವನ್ನು ಓದಿನ ಕಡೆಗೆ ಕೇಂದ್ರೀಕರಿಸಿಕೊಂಡು ಚಂಚಲ ಚಿತ್ತರಾಗದಂತೆ ಪ್ರಯತ್ನ ಪಟ್ಟಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೂಡ ಇಷ್ಟೇ ಯಶಸ್ವಿಯಾಗಿ ಪಾಸ್ ಆಗಲು ಸಾಧ್ಯ, ದೇಶ ಸೇವೆ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳು ಆಡಳಿತಾತ್ಮಕ ಹುದ್ದೆಗೆ ಬರಲು ಅತ್ಯಂತ ಸಹಕಾರಿ ಆಗುತ್ತದೆ ಎಂದರು.

ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗಿಳಿಗೆ ಬೀಳದೆ, ನಿರಂತರವಾಗಿ ಪ್ರಯತ್ನಪಟ್ಟಿದ್ದೆ ಆದರೆ ಉನ್ನತ ಹುದ್ದೆಗಳನ್ನು ಪಡೆದು ಸೇವೆ ಸಲ್ಲಿಸುವ ಅವಕಾಶ ಒದಗಿ ಬರುತ್ತದೆ. ಆದ್ದರಿಂದ ಮಕ್ಕಳು ಆ ನಿಟ್ಟಿನಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಿ ಉನ್ನತವಾದ ಗುರಿಯ ಕಡೆಗೆ ಸಾಗಬೇಕೆಂದು ಕಿವಿಮಾತು ತಿಳಿಸಿದರು. ಜೊತೆಗೆ ಮಕ್ಕಳ ಯಶಸ್ಸಿನಲ್ಲಿ ಅವರಿಗೆ ವಿದ್ಯೆ ಕಲಿಸಿದ ಶಿಕ್ಷಕರು ಮತ್ತು ಮನೆಯಲ್ಲಿ ಪ್ರೋತ್ಸಾಹ ನೀಡಿರುವ ತಂದೆ ತಾಯಂದಿರ ಪಾತ್ರ ದೊಡ್ಡದು. 2024 25ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಕಾರಣೀಕರ್ತರಾದ ಸರ್ವರನ್ನು ಕೂಡ ಸ್ಮರಿಸಿಕೊಂಡು ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.

ತಾಲೂಕ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಸುಧೀರ ವಾಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಿ ಆರ್ ಪಿ ಎಮ್ ಎನ್ ಕರಡಿಗುಡ್ಡ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಅರ್ಜುನ ಬಿ ಕಾಮಣ್ಣವರ ವಂದಿಸಿದರು. ಮುಖ್ಯೋಪಾಧ್ಯಾಯರಾದ ಪ್ರಮೋದ ದೇಶಪಾಂಡೆ,ಐ. ಜಿ. ಸುಬ್ಬಾಪುರಮಠ, ಅಮರ ಶೆಟ್ಟಿ,ಎಸ್ ಎಸ್ ನಾಯ್ಕರ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಂ ಬಿ ಕೊಪ್ಪದ,ಬಿ ಆರ್ ಪಿ ರಾಜು ಎಂ ಭಜಂತ್ರಿ, ವಿ ಸಿ ಹಿರೇಮಠ್, ಸಿ ಆರ್ ಪಿ ರವಿ ನಲವಡೆ, ರಾಮಚಂದ್ರಪ್ಪ, ಅಧೀಕ್ಷಕರಾದ ಸುರೇಶ್ ಬೆಟಗೇರಿ ವಿಠ್ಠಲ್ ರಾವಳ, ರಾಜು ಹನಸಿ, ಸಾಧಕ ವಿದ್ಯಾರ್ಥಿಗಳ ಪಾಲಕರು, ಇತರರು ಉಪಸ್ಥಿತರಿದ್ದರು

RELATED ARTICLES

Most Popular

error: Content is protected !!
Join WhatsApp Group