ಎಮ್ ಕೆ ಹುಬ್ಬಳ್ಳಿ : ಎಮ್.ಕೆ. ಹುಬ್ಬಳ್ಳಿ ಸಿಆರ್ಸಿ ಕೇಂದ್ರದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮಣ್ಣೂರ, ಬೆಳಗಾವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು /ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಚನ್ನಮ್ಮನ ಕಿತ್ತೂರ ಇವರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಯಿತು. ಈ ಕಾರ್ಯಾಗಾರವು ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ (ಸಿ.ಆರ್.ಪಿ.) FLN (Foundational Literacy and Numeracy) ಮತ್ತು ನಲಿ ಕಲಿ ಅನುಷ್ಟಾನ ಕುರಿತ ಮಾಹಿತಿಯನ್ನು ನೀಡುವ ಉದ್ದೇಶ ಹೊಂದಿತ್ತು.
ಕಾರ್ಯಕ್ರಮವನ್ನು ವೇದಿಕೆ ಮೇಲಿನ ಗಣ್ಯರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಖಾನಾಪೂರ ಕ್ಷೇತ್ರಸಮನ್ವಯಾಧಿಕಾರಿಗಳಾದ ಎ ಆರ್ ಅಂಬಗಿ, “ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಹಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದು, ಶಿಕ್ಷಕರು ಅದನ್ನು ಶ್ರದ್ಧೆಯಿಂದ ಅನುಷ್ಟಾನಗೊಳಿಸಬೇಕು,” ಎಂಬುದಾಗಿ ಹೇಳಿದರು.
ಕಿತ್ತೂರ ಕ್ಷೇತ್ರಸಮನ್ವಯಾಧಿಕಾರಿ ಶ್ರೀಮತಿ ಗಾಯತ್ರಿ ಅಜ್ಜನ್ನವರ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪೂರಕ ವಾತಾವರಣವನ್ನು ರೂಪಿಸಿ ಮುಖ್ಯವಾಹಿನಿ ತರುವ ನಿಟ್ಟಿನಲ್ಲಿ ಅನುಷ್ಠಾನಾಧಿಕಾರಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿದ್ದ ಡಯಟ್ ಹಿರಿಯ ಉಪನ್ಯಾಸಕಿ ಶ್ರೀಮತಿ ಮಂಗಳಾ ಕೊರಬು ಅವರು, ಈ ಕಾರ್ಯಾಗಾರವು ನವೀನ ವಿಷಯಗಳನ್ನು ಒಳಗೊಂಡಿದ್ದು, ಕ್ಷೇತ್ರದ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಶಾಲೆಯ ಮುಖ್ಯಗುರುಗಳು ಸಿದ್ದಯ್ಯ ಹಿರೇಮಠ, ಕಿತ್ತೂರ, ಖಾನಾಪೂರ ಹಾಗೂ ಬೈಲಹೊಂಗಲ ತಾಲ್ಲೂಕಿನ ಅನುಷ್ಠಾನಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸ್ವಾಗತ ವಿನೋದ ಪಾಟೀಲ ಮಾಡಿದರು ವಂದನೆಯನ್ನು ಸಂಜೀವ ಹುಬ್ಬಳ್ಳಿ ಸಲ್ಲಿಸಿದರು.