ಸಿಂದಗಿ: ಭಾವೈಕ್ಯತೆ ಹಾಗೂ ಸೌಹಾರ್ದತೆಗೆ ಹೆಸರಾಗಿರುವ ಹಿಂದೂ-ಮುಸ್ಲಿಂ ಭಾವೈಕ್ಯತೆ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತ ಸೌಹಾರ್ದತೆಯಿಂದ ಆಚರಿಸಬೇಕೆಂದು ಪಿಎಸ್ಐ ಆರೀಫ್ ಮುಷಾಪುರಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೋಹರಂ ಹಬ್ಬದ ನಿಮಿತ್ತ ಹಮ್ಮಿಕೊಂಡ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಹರಂ ಹಬ್ಬವು ೧೦ ದಿನಗಳವರೆಗೆ ನಡೆಯುತ್ತಿದ್ದು. ನಾವೆಲ್ಲರೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು. ಸಮಾಜದಲ್ಲಿ ಶಾಂತಿ ಕದಡುವವರ ಬಗ್ಗೆ ಸೂಕ್ತ ನಿಗಾವಹಿಸಲಾಗುವುದು ಹಾಗೂ ತಪ್ಪು ಕಂಡು ಬಂದರೆ ಅಂಥವರ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರು ಕೂಡ ಅಹಿತಕರ ಘಟನೆಗೆ ಆಸ್ಪದ ನೀಡಬಾರದು. ಸಿಂದಗಿಯಲ್ಲಿ ೮ ಪಂಜಾ ಮತ್ತು ೪ಡೋಲಿಗಳಿರುವ ಕಾರಣ ಆ ಪ್ರದೇಶದಲ್ಲಿ ಆಯಾ ಸಮಿತಿಯವರು ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಮತ್ತು ನಿಮ್ಮ ಪಂಜಾ ಡೋಲಿ ಕುಡಿಸುವ ಜಾಗದಲ್ಲಿ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು ಎಂದರು.
ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟಗಳನ್ನ ಹರಿಬಿಟ್ಟು ಸಮಾಜದ ಸ್ವಾಸ್ತ್ಯ ಕದಡುವ ಪ್ರಯತ್ನ ಮಾಡುತ್ತಾರೆ. ಅಂತಹ ಸಮಾಜ ಘಾತುಕರನ್ನು ಸಾಮಾಜಿಕ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸಲಾಗುವುದು ಹಾಗೂ ತಪ್ಪು ಕಂಡು ಬಂದರೆ ಅಂತವರ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರು ಕೂಡ ಅಹಿತಕರ ಘಟನೆಗೆ ಆಸ್ಪದ ನೀಡಬಾರದು.ಮನುಷ್ಯನ ಭಾವನೆ ಹಾಗೂ ಮನುಷ್ಯನ ವಿಚಾರಗಳು ನೂರಾರು ಇರಬಹುದು ಆದರೆ ಕಾನೂನಿಗೆ ಎಲ್ಲರೂ ತಲೆಬಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಸಬ್ ಇನ್ಸ್ಪೆಕ್ಟರ್ ಮಹಿಬೂಬ್ ಗುಡ್ಡಳ್ಳಿ (೪೦ ವರ್ಷ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಕಾರಣ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಈ ವೇಳೆ ರಜಾಕ ಮುಜಾವರ, ಶಿವಾನಂದ ಆಲಮೇಲ ಮಾತನಾಡಿ, ಸಿಂದಗಿ ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಎಲ್ಲರೂ ಒಗ್ಗಟ್ಟಿನಲ್ಲಿದ್ದೇವೆ. ಮೊಹರಂ ಹಬ್ಬ ಶಾಂತ ರೀತಿಯಲ್ಲಿ ಅಚ್ಚು ಕಟ್ಟಾಗಿ ಆಚರಣೆ ಮಾಡುತ್ತೇವೆ. ಪೋಲಿಸ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದರು.
ಈ ಸಭೆಯಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಪುರಸಭೆ ಮಾಜಿ ಉಪಾದ್ಯಕ್ಷ ರಾಜಣ್ಣಿ ನಾರಾಯಣಕರ, ಸಲೀಮ್ ಗುಂದಗಿ, ಸಿದ್ದು ಮಲ್ಲೇದ, ಪ್ರಶಾಂತ ಕದ್ದರಕಿ, ಜಾಕೀರ ಮಕಂದಾರ, ಜೀಲಾನಿ ನಾಟಿಕಾರ ಸೇರಿದಂತೆ ಪೋಲಿಸ ಠಾಣಾ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.