ಮೂಡಲಗಿ: ಬಡ ಜನರ ಸಂಕಷ್ಟದ ಸಮಯದಲ್ಲಿ ಅವರಿಗೆ ನೆರವು ಕಲ್ಪಿಸುವ ಮಾನವೀಯ ಕಾರ್ಯವು ಧರ್ಮದ ಕಾರ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಶನಿವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಬಡ ಕುಟಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಾಕ್ಡೌನ್ನಿಂದ ಅನೇಕ ವರ್ಗದ ಕಾರ್ಮಿಕರು, ದಿನಗೂಲಿ ನೌಕರರು ಕೆಲಸವಿಲ್ಲದೆ ಮನೆಯಲ್ಲಿ ಉಳಿಯುವಂತಾಗಿದೆ. ಅವರ ಕುಟುಂಬಗಳ ನಿರ್ವಹಣೆ ಮಾಡಲು ಅಶಕ್ತರಾಗಿರುವ ಸ್ಥಿತಿಯಲ್ಲಿದ್ದಾರೆ. ಅಂತಹ ವರ್ಗದ ಜನರಿಗೆ ಅನುಕೂಲವಾಗಲೆಂದು ಆಹಾರ ಕಿಟ್ ನೀಡಲು ಯೋಜನೆಯನ್ನು ರೂಪಿಸಿರುವ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಕರ್ನಾಟಕದ ಜನತೆಗೆ ಸಂಕಷ್ಟಗಳು ಎದುರಾದ ಸಂದರ್ಭದಲ್ಲಿ ಧರ್ಮಸ್ಥಳ ಯೋಜನೆಯ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಒಳ್ಳೆಯ ಕಾರ್ಯಗಳನ್ನು ಮಾಡಲಾಗುತ್ತಿದೆ. ಈ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಈಗಾಗಲೆ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ನೀಡಲಾಗಿದೆ. ಬಡ ಕುಟುಂಬಗಳಿಗೆ, ನಿರ್ಗತಿಕರಿಗೆ, ಕೊರೋನಾ ವಾರಿಯರ್ಸಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ಜನರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ನಿಮ್ಮ ಜೊತೆಯಲ್ಲಿ ಇದೆ ಎನ್ನುವ ಮೂಲಕ ಧೈರ್ಯ ತುಂಬುವಂಥ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಎಮ್ಇಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್ ಎ ಶಾಸ್ತ್ರಿಮಠ, ಮಂಜುನಾಥ ಸೈನಿಕ ತರಬೇತಿ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಸುರೇಶ ಶಿವಾಪೂರ, ಮೂಡಲಗಿ ವಯಲ ಯೋಜನಾಧಿಕಾರಿ ದೇವರಾಜ, ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಉದಯ ಎನ್ ಗೌಡ, ಮೂಡಲಗಿ ವಲಯ ಮೇಲ್ವಿಚಾರಕಿ ಮಾನಸಿ ಪಾಟೀಲ ಉಪಸ್ಥಿತರಿದ್ದರು.