ಪ್ರೀತಿಸುವ ಹೃದಯಗಳಿಗಾಗಿ… ಸಿಹಿಮಾತು

Must Read

ಪ್ರೀತಿ ಏಕೆ ಭೂಮಿ ಮೇಲಿದೆ? ಎಂಬ ಪ್ರಶ್ನೆಗೆ ಸಾಹಿತಿಗಳು, ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಪ್ರೀತಿಸುವ ಹೃದಯಗಳಿಗಾಗಿ ಈ ಪ್ರೀತಿ ಭೂಮಿ ಮೇಲಿದೆ ಒಂದು ವೇಳೆ ಪ್ರೀತಿಯು ಇಲ್ಲದಿದ್ದರೆ ಈ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತದೆ. ಎರಡು ಹೃದಯಗಳು ಸಂಗಮವಾದಾಗ ಪ್ರೀತಿಯ ಜ್ಯೋತಿ ಹೊತ್ತಿ ಉರಿಯುವುದು ಅದು ಒಮ್ಮೊಮ್ಮೆ ಅರ್ಧದಲ್ಲಿಯೇ ದುಃಖವನ್ನು ನೀಡಿ ನಂದಿ ಹೋಗುವುದು, ಮತ್ತೊಮ್ಮೆ ಮದುವೆಯ ಹಂತಕ್ಕೆ ತಿರುಗಿ ಬದುಕೆ ಆನಂದಮಯವಾಗುವುದು. ಪ್ರೀತಿಗಾಗಿ ಪ್ರಾಣವನ್ನು ಕಳೆದುಕೊಂಡವರನ್ನು ನೋಡಿದ್ದೇವೆ ಅದರ ಬಗ್ಗೆ ಕೇಳಿದ್ದೇವೆ ಪ್ರಾಣ ಕಳೆದುಕೊಳ್ಳುವಂತಿದ್ದರೆ ಪ್ರೀತಿಸುವುದಾದರೂ ಯಾಕೆ? ಪ್ರೀತಿ ಎಂಬ ಸಸಿ ಮರವಾಗಿ ನೆರಳಾಗಿ ಮಾದರಿಯಾಗಬೇಕೆ ವಿನಃ ಅದೊಂದು ದುರಂತ ಪ್ರೇಮ ಕಥೆಯಾಗಬಾರದು.

ಹುಡುಗ ಹುಡುಗಿಯನ್ನು ಹುಡುಗಿ ಹುಡುಗನನ್ನು ಎಷ್ಟರಮಟ್ಟಿಗೆ ಪ್ರೀತಿಸುವರು ಅನ್ನುವುದು ಮುಖ್ಯವಲ್ಲ ಪ್ರೀತಿಗೆ ಎಷ್ಟು ಗೌರವ ಕೊಡುತ್ತಾರೆ ಎಂಬ ಪ್ರಾಮಾಣಿಕ ಮನಸ್ಸು ಬಹಳ ಮುಖ್ಯವಾಗಿದೆ. ಹೆಂಡತಿಗಾಗಿ ಬೆಟ್ಟವನ್ನು ಕೊರೆದು ಇಡೀ ಊರಿಗೆ ದಾರಿ ಮಾಡಿಕೊಟ್ಟ ದಶರಥ ಮಾಂಜಿಯ ಪ್ರೇಮ ಕಥೆ ಪ್ರೀತಿಸುವ ಹೃದಯಗಳಿಗೆ ಒಂದು ಸ್ಪೂರ್ತಿ ಅಂತಹ ನಿಷ್ಕಲ್ಮಶವಾದ ಪ್ರೀತಿಗಳು ಮಾತ್ರ ದಂತಕತೆಯಾಗಿ ಉಳಿಯಲು ಸಾಧ್ಯ.

ಪ್ರೀತಿಸುವುದಾದರೆ ಒಬ್ಬರನ್ನು ಪ್ರೀತಿಸಬೇಕು ಮನಸ್ಸುಗಳು ಅರ್ಥವಾಗಲು ಎಷ್ಟು ವರ್ಷಗಳೇ ಬೇಕು ನಲಿವಿರಲಿ ನೋವಿರಲಿ ಒಂದೇ ಪ್ರೀತಿ ಇರಲಿ ಬಣ್ಣ ಬಣ್ಣದ ಮಾತಿಗೆ ಮರುಳಾಗಿ ತಿಂಗಳಿಗೊಬ್ಬರನ್ನು ಪ್ರೀತಿಸುತ್ತಾ ಹೋದರೆ ಅದು ಪ್ರೀತಿಯಾಗಲ್ಲ ಹಲವು ರೀತಿಯ ಆಶಾ ಮನೋಭಾವನೆ. ಈಗಲೂ ಕೆಲವರು ಪ್ರಾಮಾಣಿಕವಾದ ಶುದ್ಧ ಮನಸ್ಸಿನಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದಾರೆ ಪ್ರೀತಿಯು ಒಮ್ಮೊಮ್ಮೆ ಎಲ್ಲರನ್ನು ಮರೆಸುತ್ತದೆ ಆದರೆ ನಾವು ಮರೆಯಬಾರದು ಹೆತ್ತವರ ಪ್ರೀತಿಯ ಮುಂದೆ ಉಳಿದ ಎಲ್ಲಾ ಪ್ರೀತಿಗಳು ಅಷ್ಟಕ್ಕಷ್ಟೇ.

ಇತ್ತೀಚಿನ ದಿನಮಾನಗಳಲ್ಲಿ ಪ್ರೀತಿ ಪ್ರೇಮಗಳು ಕೊಲೆ ಅತ್ಯಾಚಾರ ರೂಪವನ್ನು ಪಡೆದುಕೊಂಡು ಅಂತ್ಯವಾಗುತ್ತಿವೆ. ದಯವಿಟ್ಟು ಪ್ರೀತಿಸುವ ವ್ಯಕ್ತಿಗಳ ಬಗ್ಗೆ ಅವರ ಗುಣಗಳ ಬಗ್ಗೆ ಅರಿತುಕೊಂಡು ಪ್ರೀತಿಸಬೇಕಾಗುತ್ತದೆ. ಪ್ರೀತಿ ಮಾಡುವುದು ತಪ್ಪಲ್ಲ ಸರಿಯಿಲ್ಲದ ವ್ಯಕ್ತಿಗಳನ್ನು ಪ್ರೀತಿಸುವುದು ತಪ್ಪು, ಅವರ ಬಗ್ಗೆ ಹಿಂದೆ ಮುಂದೆ ಏನು ಗೊತ್ತಿಲ್ಲದೆ ಪ್ರೀತಿಸುವುದು ತಪ್ಪು, ನಮ್ಮ ಸ್ವಾಭಿಮಾನ ಘಣತೆ ಕುಟುಂಬದ ಗೌರವ ಬಿಟ್ಟು ಪ್ರೀತಿಸುವುದು ತಪ್ಪು, ಬದುಕಿನಲ್ಲಿ ನಾವು ಒಂದು ಹಂತಕ್ಕೆ ಬಾರದೆ ಪ್ರೀತಿಸುವುದು ತಪ್ಪು, ಸರಿಯಾಗಿ ಓದುವ ಸಮಯದಲ್ಲಿ ಪ್ರೀತಿಸುವುದು ತಪ್ಪು, ಹೆತ್ತವರಿಗೆ ಮೋಸ ಮಾಡಿ ಪ್ರೀತಿಸುವುದು ತಪ್ಪು, ಪ್ರೀತಿಸುವುದಾದರೆ ಮದುವೆಯ ನಂತರ ಹೆಂಡತಿ ಗಂಡನನ್ನು ಗಂಡ ಹೆಂಡತಿಯನ್ನು ಸಾಗರದಷ್ಟು ಪ್ರೀತಿಸಲಿ ಆ ಪ್ರೀತಿಗೆ ಒಂದು ಅರ್ಥವಿದೆ.

ಪ್ರೀತಿ ಮಾಡುವ ಹೃದಯದ ಬಡಿತದಲ್ಲಿ ಧೈರ್ಯದ ತುಡಿತವಿರಬೇಕು. ಒಂದು ಹೃದಯವನ್ನು ಪ್ರೀತಿಸಿ ಪ್ರೇಮವನ್ನು ತೋರಿದಾಗ ಅದನ್ನು ಒಬ್ಬರು ಒಲ್ಲೆ ಎನ್ನುತಾರೆ ಎಂದಿಟ್ಟುಕೊಳ್ಳಿ. ಆಗಲೂ ಆ ಪ್ರೀತಿಯ ಭಾವನೆಯನ್ನು ಹಾಗೆಯೇ ಉಳಿಸಿಕೊಳ್ಳುವ ಎದೆಗಾರಿಕೆ ಇರುವವರು ಮಾತ್ರ ಪ್ರೀತಿಸಲು ಅರ್ಹರು. ಆದರೆ ವಾಸ್ತವ ಹಾಗಿಲ್ಲ. ಪ್ರೀತಿ ಮಾಡಿದವರು ದೂರ ಸರಿದಾಗ ಪ್ರಾರಂಭದಲ್ಲಿ ಸ್ವಲ್ಪ ನೊಂದುಕೊಂಡು ಬರಬರುತ್ತಾ ಅವರ ಮೇಲಿನ ಅಭಿಮಾನವನ್ನು ಕರಗಿಸಿಕೊಂಡು ಬಿಡುವುದು ಸಾಧಾರಣ. ಇದು ಮನಷ್ಯ ಪ್ರೀತಿ. ಅಬ್ಬಬ್ಬಾ ಎಂದರೂ ಅದರ ಛಾಯೆ ಮಾತ್ರ ಉಳಿದಿರುತ್ತದೆಯೇ ವಿನಾ ಪ್ರಾರಂಭದಲ್ಲಿ ಇರುವ ಆ ತೀವ್ರತೆ ಉಳಿದಿರುವುದಿಲ್ಲ. ಯಾಕೆ ಹೀಗೆ? ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ಇವೆಲ್ಲ ಮಾನವ ಸಹಜ, ಇದೆಲ್ಲ ಕಾಲ ನಿಯಮ ಎನ್ನುವ ಉತ್ತರದ ಮುಸುಕಿನ ಅಡಿಯಲ್ಲಿ ಸೇರಿ ಹೋಗುತ್ತೇವೆಯೇ ವಿನಾ ಕಾರಣಗಳನ್ನು ನಿಜವಾಗಿ ಕಂಡುಕೊಳ್ಳುವ ಸಹನೆ ನಮಗಿರುವುದಿಲ್ಲ.

ಹೀಗಲ್ಲವಾದರೆ, ಪ್ರೀತಿಸಿದ ವ್ಯಕ್ತಿ ದೂರವಾದಾಗ ಸೇಡಿನ ಕಿಚ್ಚು ಹಚ್ಚಿಸಿಕೊಂಡು ಬಲಿಯನ್ನು ಬಯಸುವುದು. ಹೂವು ಅರುಳುವಷ್ಟೇ ಸಹಜ ಹರೆಯದಲ್ಲಿ ಪ್ರೀತಿ ಅರಳುವುದು. ಪ್ರೀತಿಯ ಬಗ್ಗೆ ಏನು ಬರೆಯುತ್ತೀರಿ, ಎಷ್ಟು ಬರೆಯುತ್ತೀರಿ ಅಗೆದಷ್ಟು, ಬಗೆದಷ್ಟು ಬತ್ತದ ಝರಿಯಂತೆ ಅದು ಹರಿಯುತ್ತಲೇ ಇರುತ್ತದೆ.

ಮುತ್ತು ಯ.ವಡ್ಡರ
ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ
ಬಾಗಲಕೋಟ
9845568484

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group