ಅಥಣಿ – ಶತಮಾನಗಳ ಚರಿತ್ರೆ ಹೊಂದಿರುವ ವೀರಶೈವ ಲಿಂಗಾಯತ ಧರ್ಮೀಯರಿಗೆ ಆಧುನಿಕ ಜಗತ್ತಿಗೆ ಮುಖಾ ಮುಖಿ ಯಾಗುವ ಜ್ಞಾನವನ್ನು ನೂರಾ ಇಪ್ಪತ್ತು ವರ್ಷಗಳ ಹಿಂದೆಯೇ ಒದಗಿಸಿಕೊಟ್ಟ ಶ್ರೇಯಸ್ಸು ತ್ಯಾಗ ವೀರ ಸಿರಸಂಗಿ ಲಿಂಗರಾಜರಿಗೆ ಸಲ್ಲುತ್ತದೆ. ಅದಕ್ಕಾಗಿ ಲಿಂಗರಾಜರನ್ನು ನಿತ್ಯವೂ ನೆನೆದಾಗಲೇ ವೀರಶೈವ ಲಿಂಗಾಯತರಿಗೆ ಉದಯ, ಅವರನ್ನು ಮರೆತಾಗಲೇ ಅವರಿಗೆ ಅಸ್ತಮಾನ ಎಂದು ಸಾಹಿತಿ,ಚಿಂತಕ ಡಾ.ಸಂಗಮನಾಥ ಲೋಕಾಪೂರ ಹೇಳಿದರು.
ಅವರು ಅಥಣಿಯ ಎಸ್ ಎಂ ಎಸ್ ಪದವಿ ಮಹಾವಿದ್ಯಾಲಯದಲ್ಲಿ ಕೆಎಲ್ಇ ಸಂಸ್ಥೆಯ ಅಂಗ ಸಂಸ್ಥೆಗಳು ಮತ್ತು ಸ್ಥಳೀಯ ಲಿಂಗರಾಜ ಅಭಿಮಾನಿ ಸಮಿತಿಯವರು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮಹಾದಾನಿ ತ್ಯಾಗ ವೀರ ಸಿರಸಂಗಿ ಲಿಂಗರಾಜರ 163 ನೇಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನೂರಾ ಇಪ್ಪತ್ತು ವರ್ಷಗಳ ಹಿಂದೆ ಬರೀ ಕೃಷಿ ಮತ್ತು ವ್ಯಾಪಾರದಲ್ಲಿ ತೊಡಗಿದ್ದ ವೀರಶೈವ ಲಿಂಗಾಯತ ಸಮುದಾಯಕ್ಕೆ ಶಿಕ್ಷಣವನ್ನು ಒದಗಿಸುವ ಮೂಲಕ ಇಡೀ ಸಮಾಜವೇ ಜಾಗತೀಕರಣದ ಸವಾಲುಗಳನ್ನು ಸಶಕ್ತವಾಗಿ ಎದುರಿಸಲು ಸಾಧ್ಯವಾಯಿತು. ಇದಕ್ಕೆಲ್ಲ ಲಿಂಗರಾಜರ ದೂರದೃಷ್ಟಿ ಆಧುನಿಕ ಜ್ಞಾನ ಮತ್ತು ಸಾಮಾಜಿಕ ಕಳಕಳಿಗಳು ಮರೆಯಲಾಗದಂಥವುಗಳು ಎಂದು ಹಲವು ನಿದರ್ಶನಗಳ ಮೂಲಕ ಮಾರ್ಮಿಕವಾಗಿ ಹೇಳಿದರು.
ಲಿಂಗರಾಜರ ಈ ಸೇವಾ ಕೈಂಕರ್ಯಕ್ಕೆ ಹೆಗಲು ಕೊಟ್ಟು ದುಡಿದ ಅರಟಾಳ ರುದ್ರಗೌಡರನ್ನ,ಹಾನಗಲ್ಲ ಶ್ರೀಗಳನ್ನ ಮತ್ತು ಅಂದಿನ ಲಿಂಗಾಯತ ಗಣ್ಯರನ್ನ ನೆನಪಿಸಿಕೊಂಡು ಅವರು ನಿತ್ಯವೂ ಸ್ಮರಣಾರ್ಹರು ಎಂದರು.
ಕಾರ್ಯಕ್ರಮ ನೇತೃತ್ವ ವಹಿಸಿದ್ದ ಕೆಎಲ್ಇ ಸ್ಥಾನಿಕ ಸಮಿತಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಕೆಎಲ್ಇ ಸಂಸ್ಥೆಯ ಕಾರ್ಯಸಾಧನೆಯನ್ನು, ಲಿಂಗರಾಜರ ಕೊಡುಗೆಯನ್ನು ಸ್ಮರಿಸಿಕೊಂಡರು. ಈ ವರ್ಷದ ಲಿಂಗರಾಜ ಸಾಹಿತ್ಯ ಪ್ರಶಸ್ತಿಯನ್ನು ಸ್ಥಳೀಯ ಸಾಹಿತಿ ಅಪ್ಪಾಸಾಹೇಬ ಅಲ್ಲೀಬಾದಿಯವರಿಗೆ ನೀಡಿ ಗೌರವಿಸಲಾಯಿತು.