ಆಗುಂಬೆ ಎಸ್ ನಟರಾಜ್ ಹೆಸರಾಂತ ಪ್ರವಾಸಿ ಲೇಖಕರು. ಅವರ ಮನೆಗೆ ಮೂರು ತಿಂಗಳ ಹಿಂದೆ ಭೇಟಿ ನೀಡಿದ್ದೆ. ಆಗ ಅವರು ತಮ್ಮ ಏಳೆಂಟು ಕೃತಿಗಳನ್ನು ಕೊಟ್ಟರು. ಅವರು ಕೊಟ್ಟ ಪುಸ್ತಕಗಳ ಪೈಕಿ ‘ದಿಲ್ಲಿಯಿಂದ ತಾಮ್ಡೀ ಸುರ್ಲಾಗೆ’ ಒಂದು ಪ್ರವಾಸಿ ಲೇಖನಗಳ ಕಿರು ಕೃತಿ. ಲೇಖಕರು ಬ್ಯಾಂಕ್ ಉದ್ಯೋಗಿಯಾಗಿ ಕೆಲ ವರ್ಷ ದೆಹಲಿಯಲ್ಲಿದ್ದಾಗ ಆಗ ಬರೆದಿರಬೇಕು. ಬಹುಶ: ೨೫ ವರ್ಷಗಳ ಹಿಂದಿನ ೧೫ ಪ್ರವಾಸಿ ಲೇಖನಗಳು. ಇದರಲ್ಲಿ ಮೊದಲನೆಯದು ಇದು ದಿಲ್ಲೀ!
ದೆಹಲಿ ಅಂದರೆ ಚರಿತ್ರೆ, ಸ್ಮಾರಕ ಅದು ದೇಶದ ರಾಜಧಾನಿಯೂ ಹೌದು. ಪುರಾತನ ರಾಜಾ ದೇಲೂ ಎಂಬುವನ ಹೆಸರಿನಿಂದ ದೆಹಲಿಯ ಹುಟ್ಟು ಎಂಬ ನಂಬಿಕೆ. ಆದರೆ ದೆಹಲಿಯ ನಾಗರಿಕರನ್ನು ನೋಡಿ ಹೊರಗಿನವರು ದಿಲ್ಲೀವಾಲರ ತಲೆ ಡೀಲಾ ಅಂದರೆ ಸಡಿಲ ಎಂದು ನಂಬಿಕೆಯುಂಟಾಗಿ ಡೀಲಾ ಎಂದು ನಾಮಕರಣ ಮಾಡಿದರಂತೆ! ಹಿಂದೀಯರು ದಿಲ್ಲೀ ಎಂದೂ, ಮುಸ್ಲಿಂರು ದೆಹಲಿ ಎಂದೂ ಆಂಗ್ಲರು ಡೆಲ್ಹಿ ಎಂದೂ ಕರೆದರು. ಹಲವು ನಾಮಗಳ ಈ ನಗರ ಪಾಂಡವರ ಕಾಲದ ಇಂದ್ರಪ್ರಸ್ಥವೆನಿಸಿ ಮುಸ್ಲಿಂರ ಕಾಲಕ್ಕೆ ದೆಹಲಿ ಎನಿಸಿಕೊಂಡು ಏಳು ನಗರಗಳ ಅಥವಾ ಕೋಟೆಗಳ ಅಸ್ತಿತ್ವವನ್ನು ಪಡೆದುಕೊಂಡು ಆಂಗ್ಲರ ಕಾಲಕ್ಕೆ ೮ನೇ ನವದೆಹಲಿ ನಗರ ಸ್ಥಾಪನೆ ಆಗಿದೆ.
ಲಂಡನ್ ನಗರಕ್ಕೆ ಹೇಗೆ ಬಿಗ್ ಬೆನ್, ಪ್ಯಾರಿಸ್ಗೆ ಈಫಲ್ ಟವರ್, ನ್ಯೂಯಾರ್ಕ್ಗೆ ಸ್ಟಾಚ್ಯೂ ಆಫ್ ಲಿಬರ್ಟಿ ಹಾಗೇ ದೆಹಲಿಗೆ ಕುತುಬ್ ಮಿನಾರ್. ಈ ಸ್ಥಂಭದ ಸುತ್ತಮುತ್ತಲೂ ಹರಡಿರುವ ಸ್ಮಾರಕಗಳ ಗುಂಪು ಪ್ರಾಯಶಃ ದೆಹಲಿಯ ಚರಿತ್ರೆಯ ಮುಖ್ಯ ಘಟನೆಗಳ ಪ್ರತೀಕ. ಇಲ್ಲಿ ಮುಸಲ್ಮಾನ ಚಕ್ರವರ್ತಿಗಳ ಸಮಾಧಿಗಳ ಮಧ್ಯೆ ಅತ್ಯಂತ ಪ್ರಾಚೀನ ಹಾಗೂ ತುಕ್ಕು ಹಿಡಿಯದೇ ನಿಂತ ಕಬ್ಬಿಣದ ವಿಷ್ಣುಸ್ಥಂಭವಿದೆ. ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಕಟ್ಟಲ್ಪಟ್ಟ ಹುಮಾಯೂನ್, ಲೋಡಿ, ಖಾನ್-ಇ-ಖನಾನ್, ಸಪ್ದರ್ ಜಂಗ್, ಮಹಾತ್ಮಾಗಾಂಧಿ, ನೆಹರು ಇತ್ಯಾದಿ ಸಮಾಧಿ ಸ್ಮಾರಕಗಳ ದಿಲ್ಲಿಯ ಜಮುನಾ ನದಿ ದಡದ ಮೇಲಿರುವ ಅದ್ಭುತ ಆಡಂಬರ ವೈಭವ ಮಾಡಲ್ಗಳ ದೆಹಲಿಯ ಸಂದುಗೊಂದುಗಳಲ್ಲಿ ದೇಶದಲ್ಲೇ ಬಹು ದೊಡ್ಡದೆನಿಸಿದ ಕೆಂಪುಕಲ್ಲಿನ ಜುಮ್ಮಾ ಮಸೀದಿಯ ಇಕ್ಕೆಡೆಗಳಲ್ಲಿನ ಚಿತ್ರವಿಚಿತ್ರ ಉರ್ದು ನಾಮಗಳ ಪೇಟೆ ಓಣಿ ಗಲ್ಲಿಗಳಲ್ಲಿ ತಿರುಗಿ ದಿಲ್ಲಿಯ ಜನ ಜೀವನ, ಆಹಾರ ವಸ್ತ್ರಾಲಂಕಾರ ಇತ್ಯಾದಿ ಮಾಹಿತಿಗಳ ಜೊತೆಗೆ ದಿಲ್ಲೀವಾಲರ ಶಾಯಿರಿ ಪ್ರೇಮ ಕುರಿತ್ತಾಗಿ ಗೋಡೆ ಬಸ್ ರಿಕ್ಷಾ ಬೈಕ್ಗಳ ಮೇಲೆ ಬರೆದಿದ್ದು ಉಲ್ಲೇಖಿಸುತ್ತಾರೆ.
ಟಾಟಾ ಕ್ರಕ್ನ ಬಗ್ಗೆ ಟಾಟಾನಗರ್ ಸೇ ನಿಕಲೀ ಕುವರೀ
ಸೋಲನ್ ಮೇ ಸಗಾಈ
ಚಂಢೀಗಡ್ ಮೇ ಶೃಂಗಾರ್ ಹುವಾ
ದಿಲ್ಲೀ ಮೇ ಡ್ರೈವರ್ ಸೇ ಪ್ಯಾರ್ ಹುವಾ
(ಟಾಟಾ ನಗರದಿಂದ ಹೊರಟಲು ಕುಮಾರಿ – ಸೋಲನ್ನಲ್ಲಿ ನಿಶ್ಚಿತಾರ್ಥ – ಚಂಢೀಗಢದಲ್ಲಾಯಿತು ಅಲಂಕಾರ
ದಿಲ್ಲಿಯಲ್ಲಿ ಡ್ರೈವರ್ಗೆ ಒಲಿದಳು)
ತಿರುವನಂತಪುರದ ಚಿತ್ರಾ ಆರ್ಟ್ ಗ್ಯಾಲರಿಯ ರವಿವರ್ಮನ ಕಲಾಕೃತಿಗಳನ್ನು ವೀಕ್ಷಿಸಿ ಲೇಖಕರು ರವಿವರ್ಮನ ಜೀವನ ತಿಳಿಯಬಯಸಿ ಜನ್ಮಸ್ಥಳ ಕಿಳಿಮಾನೂರುಗೆ ಹೊರಡುತ್ತಾರೆ. ತಿರುವನಂತಪುರದಿಂದ ಅಂಗಮಾಲಿ ಪಾಲ್ಘಾಟ್ಗೆ ಹೋಗುವ ರಸ್ತೆಯಲ್ಲಿ ೪೦ ಕಿ.ಮೀ. ಪ್ರಯಾಣಿಸಿ ಕಿಳಿಮಾನೂರು ತಲುಪಿ ಅಲ್ಲಿಂದ ಅಟ್ಟಿಂಗಲ್ಗೆ ಸೇರುವ ರಸ್ತೆ ಹಿಡಿದು ೩ ಕಿ.ಮೀ.ನಡೆದು ಕೊಟ್ಟಾರ್ ಕಣ್ಣಿಗೆ ಬೀಳುತ್ತದೆ. ಮಲೆಯಾಳದಲ್ಲಿ ಕೊಟ್ಟಾರ್ ಎಂದರೆ ಅರಮನೆ. ಕಳಿಮಾನೂರ್ ಕೊಟ್ಟಾರ್ ರಾಜಾ ರವಿವರ್ಮನ ಅರಮನೆ ಎಂದು ಕರೆದರೂ ಅದು ಅರಮನೆಯಂತಿಲ್ಲ. ಸುಂದರ ಕಣಿವೆಯ ಏರಿಯಲ್ಲಿ ಕೇರಳದ ವಿಶಿಷ್ಟ ದೇವಸ್ಥಾನಗಳ ರೂಪ ಹೊಂದಿದ ಕಟ್ಟಡ. ಇದು ರವಿವರ್ಮನ ಸ್ಟುಡಿಯೋ. ಅಲ್ಲಿನ ಒಂದು ಮೂಲೆಯಲ್ಲಿ ತ್ರಿಪಾದದ ಮೇಲೆ ನಿಲ್ಲಿಸಿದ್ದ ರಾಜಾ ರವಿವರ್ಮನ ಚಿತ್ರವನ್ನು ಬಿಟ್ಟರೆ ಅವರ ಯಾವುದೇ ಕಲಾಚಿತ್ರಗಳಿಲ್ಲ. ಸ್ಟುಡಿಯೋ ಹಾಳುಬಿದ್ದಿತ್ತು. ಇದೇ ಕೊಠಡಿಯಲ್ಲಿ ರಾಜಾ ರವಿವರ್ಮರು ತಮ್ಮ ಕೊನೆಗಾಲದಲ್ಲಿ ಶ್ರೀರಾಮನ ಸೇತುಬಂಧನ ಕಲಾಚಿತ್ರ ಸೃಷ್ಟಿಸುತ್ತಿದ್ದರಂತೆ.ಅರ್ಕಾಟ್ ನವಾಬ ಮುಹಮ್ಮದ್ ಆಲಿಯ ಸಹಾಯಕ್ಕಾಗಿ ಕಳಲೆ ನಂಜರಾಜಯ್ಯ ತನ್ನ ಸೈನ್ಯದೊಡನೆ ತಿರುಚಿರಾಪಳ್ಳಿಗೆ ದಂಡೆತ್ತಿ ಹೋಗಿದ್ದು ಕ್ರಿ.ಶ. ೧೭೫೧ರಲ್ಲಿ. ಈ ಕಳಲೆ ನಂಜರಾಜಯ್ಯ ಯಾರು? ಈತನ ಚರಿತ್ರೆಯಾದರೂ ಏನು? ಕಳಲೆ ಎಂಬ ಊರು ಎಲ್ಲಿದೆ? ಎಂದು ಹುಡುಕಿ ಹೊರಟು ಲೇಖಕರು ಮೈಸೂರು ಚರಿತ್ರೆ ಕುರಿತ್ತಾಗಿ ಒಂದಿಷ್ಟು ಮಾಹಿತಿ ನೀಡುತ್ತಾರೆ.
ಅಂಜೆಂಗೋ ಕೇರಳದ ಪುಟ್ಟ ಹಳ್ಳಿ. ಕೇರಳದ ಇತಿಹಾಸದಲ್ಲಿ ಒಮ್ಮೆಲೆ ಪ್ರಸಿದ್ಧಿ ಪಡೆದು ಅಳಿಸಿಹೋದ ಭೂ ಪ್ರದೇಶ. ತಿರುವನಂತಪುರದಿಂದ ಉತ್ತರಕ್ಕೆ ೪೦ ಕಿ.ಮೀ. ದೂರಕ್ಕೆ ಅಟ್ಟಿಂಗಲ್ ಪಟ್ಟಣಕ್ಕೆ ೧೫ ಕಿ.ಮೀ.ದೂರದಲ್ಲಿದೆ. ಅಲ್ಲಿಯ ರಾಣಿ ತುರುವಾಂಕೂರು ಮಹಾರಾಜರ ಸಹೋದರಿಯಾಗಿದ್ದು ಅವರ ಮಾಂಡಲೀಕಳಾಗಿದ್ದಳು. ಇಂಗ್ಲೀಷರು ಭಾರತಕ್ಕೆ ಬಂದು ತಮ್ಮ ಮೊಟ್ಟಮೊದಲನೆ ಸೆಟ್ಲ್ ಮೆಂಟ್ನ್ನು ತಿರುವಾಂಕೂರು ಪ್ರದೇಶದಲ್ಲಿ ನಿರ್ಮಿಸಿದ ಜಾಗವಿದು. ಭಾರತಕ್ಕೆ ರಾಬರ್ಟ್ ಕ್ಲೈವ್ ಬರುವ ಮುಂಚೆಯೇ ಈಸ್ಟ್ ಇಂಡಿಯಾ ಕಂಪನಿಯು ಅಟ್ಟಿಂಗಲ್ ರಾಣಿಯ ಒಪ್ಪಿಗೆ ಒಂದು ಕೋಟೆ ಕಟ್ಟಿ ಮೆಣಸು ವ್ಯಾಪಾರ ನಡೆಸುತ್ತಿದ್ದ ಸ್ಥಳವಿದು. ಇದೇ ಪ್ರದೇಶದಲ್ಲಿ ಮುಂದೆ ಅಟ್ಟಿಂಗಲ್ ಜನರಿಗೂ ಇಂಗ್ಲೀಷ್ರಿಗೂ ಕಾದಾಟವಾಗಿ ನಡೆದ ಕದನ ಕಥನವಾಗಿದೆ.
ಪವಿತ್ರ ಹಿಂದೂ ನಗರ ರಾಮೇಶ್ವರದಲ್ಲಿನ ಸಂತ ಜೇವಿಯರ್ನ ಪುರಾತನ ಚರ್ಚ್ ಹುಡುಕಿ ಹೊರಟು ಬರೆದಿದ್ದು ಗತಚರಿತ್ರೆ ತೆರೆದಿಡುತ್ತದೆ. ರಾಮ ಕಾಮತಿ ಮುಂಬಯಿ ವಾಸಿ. ದೊಡ್ಡ ಶ್ರೀಮಂತ. ಕಾಲ ಕ್ರಿ.ಶ.೧೭೨೦. ಇಂಗ್ಲೀಷರು ಭಾರತಕ್ಕೆ ಕಾಲಿಡುತ್ತಿರುವ ಸಮಯದಲ್ಲಿ ಒಬ್ಬ ಬ್ರಾಹ್ಮ, ಕೃಷಿಕ ಮತ್ತು ವ್ಯಾಪಾರಸ್ಥ ತನ್ನ ದೇಶದ ಸ್ವಾತಂತ್ರ್ಯ ಕ್ಕೆ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಸಂಗತಿಯನ್ನು ತಿಳಿಸುತ್ತದೆ.
ಗಜಲ್ ಜಗತ್ತಿನ ಅನರ್ಘ್ಯ ಕವಿರತ್ನ ಮಿರ್ಜಾ ಗಾಲಿಬ್.
ನನ್ನ ನಾಳದಲ್ಲಿ ಹರಿಯುವುದು ರಕ್ತ ಸ್ವಾಭಾವಿಕ
ನನಗನಿಸುವುದಿಲ್ಲ ಅದು ಆಕಸ್ಮಿಕ
ಅಕ್ತ ಅನವಶ್ಯಕವಲ್ಲ ಅನರ್ಘ್ಯ
ಅದು ಕಣ್ಣೀರಿನಂತೆ ತೊಟ್ಟಿಕ್ಕುವಾಗ..
ಈ ಕವಿತೆ ಅವನ ದುಃಖಭರಿತ ಜೀವನದ ಕಥೆಯನ್ನು ಹೇಳುವುದು. ಉರ್ದು ಕಾವ್ಯಲೋಕಕ್ಕೆ ತನ್ನ ತನು ಮನ ಧನವನ್ನು ಧಾರೆ ಎರೆದ ಗಾಲಿಬ್ನನ್ನು ಮೊಘಲ್ ಸರ್ಕಾರ ನಂತರದ ಇಂಗ್ಲೀಷ್ ಸರ್ಕಾರ ಗರೀಬನನ್ನಾಗಿ ಮಾಡಿದವು. ದಿಲ್ಲಿಯ ಬಲ್ಲಿಮರಾನ್ ಎಂಬ ಪ್ರದೇಶದಲ್ಲಿ ಗಾಲಿಬ್ ಇದ್ದ ಮನೆ ನೋಡ ಹೊರಟು ಬರೆದಿದ್ದು. ಗಾಲಿಬ್ನನ್ನು ಒಮ್ಮೆ ಅವನ ಸ್ನೇಹಿತ ತೆಗಳಿ ಹೀಯಾಳಿಸಿದ:
ಮದ್ಯಪಾನ ಮಾಡುವವರ ಬೇಡಿಕೆಯನ್ನು ದೇವರು ದಯಪಾಲಿಸುವುದಿಲ್ಲ. ಗಾಲಿಬ್ನ ಉತ್ತರ ಹೀಗಿತ್ತು: ಮನುಷ್ಯನ ಬಳಿ ಮದ್ಯವಿದ್ದರೆ ಯಾಕಾದರೂ ಅವನು ಪ್ರಾರ್ಥಿಸಬೇಕು. ಗಾಲೀಬನ ಹಾಸ್ಯಪ್ರಜ್ಞೆ ಇದೊಂದು ಉದಾಹರಣೆ. ತನ್ನ ೭೩ನೇ ವಯಸ್ಸಿನಲ್ಲಿ ೧೫-೨-೧೮೬೯ರಲ್ಲಿ ಕೊನೆಯುಸಿರೆಳೆದ ಮಹಾಕವಿಯ ಕಾವ್ಯ ಅಮರ. ದಿಲ್ಲೀ ಶಹರಿನ ಹಳೇ ಭಾಗದಲ್ಲಿ ಬಜಾರ ಸೀತಾರಾಮ್ ಗಲ್ಲಿಯಲ್ಲಿ ಕಮಲಾ ನೆಹರೂರವರ ವಂಶಸ್ಥರ ಪುರಾತನ ಮನೆಯೊಂದು ಇರುವುದನ್ನು ಕೇಳಿದ್ದ ಲೇಖಕರು ಅದನ್ನು ನೋಡಿ ಅದರ ಬಗ್ಗೆ ವಿಚಾರ ತಿಳಿದುಕೊಳ್ಳುವ ಬಯಕೆ ಹೊತ್ತು ಬರೆಯುತ್ತಾರೆ ಅನಾಥ ಮಹಲ್ ಬರಹದಲ್ಲಿ.
ಭಾರತದ ಚರಿತ್ರೆಯನ್ನು ಬದಲಿಸಿದ ದಿಲ್ಲಿಯಿಂದ ೬೦ ಕಿ.ಮೀ. ದೂರದಲ್ಲಿರುವ ಹೆಸರಾಂತ ಪಾನೀಪತ್ ಕದನ ದೆಹಲಿಯಿಂದ ೧೦೦ ಕಿ.ಮೀ. ದೂರದ ಪುರಾತನ ಹಸ್ತಿನಾಪುರದ ಚರಿತ್ರೆ ಲೇಖಕರ ಬರಹ ಶೈಲಿಯಲ್ಲಿ ಸರಾಗವಾಗಿ ಓದಿಸಿಕೊಳ್ಳುತ್ತದೆ. ಜೊತೆಗೆ ಒಂದಿಷ್ಟು ಚರಿತ್ರೆ ಅವಲೋಕಿಸಿದೆ.
ತಾನ್ಸೇನ್ನ ಹಾಗೆ ಇನ್ನೊಬ್ಬ ಸಂಗೀತಗಾರ ಹಿಂದೆ ಹುಟ್ಟಲಿಲ್ಲ ಹಾಗೂ ಮುಂದೆ ಹುಟ್ಟುವುದಿಲ್ಲ ಪ್ರಸಿದ್ಧ ಚರಿತ್ರೆಕಾರ ಅಬ್ದುಲ್ ಘಜಲ್ ಉದ್ಗರಿಸಿದ್ದ. ತಾನ್ಸೇನ್ನ ಹೆಸರು ಎಷ್ಟು ಪ್ರಸಿದ್ಧಿ ಪಡೆದಿದೆಯೋ ಅಷ್ಟೇ ಅವನ ಜನನ ಹಾಗೂ ಬಾಲ್ಯಜೀವನ ರಹಸ್ಯಮಯ. ಸಂಗೀತ ಸಾಮ್ರಾಟ್ ತಾನ್ಸೇನ್ ಹುಟ್ಟಿದ ಸ್ಥಳ ಬೇಹಾಟ್ ನೋಡಲು ಗ್ವಾಲಿಯರ್ನಿಂದ ಹೊರಟು ಸಂಗೀತಗಾರನ ಕುರಿತು ಬರೆಯುತ್ತಾರೆ.
ಲೇಖಕರು ಕಾಶಿಯ ಜಂಗಮ ಮಠದ ಬಗ್ಗೆ ಬರೆದ ಬರಹ ಓದುವಾಗ ೨ ವರ್ಷಗಳ ಹಿಂದೆ ನಾನು (ಗೊರೂರು ಅನಂತರಾಜು) ಕಾಶೀಯಾತ್ರೆ ಮಾಡಿ ಇದೇ ಜಂಗಮಮಠದಲ್ಲಿ ವಾಸ್ತವ್ಯ ಮಾಡಿ ಇಲ್ಲಿಂದ ಪ್ರಯಾಗರಾಜ್, ಗಯಾಗಳಿಗೆ ಭೇಟಿ ನೀಡಿದ ದಿನಗಳು ನೆನಪಾದವು. ಅನ್ನ ಆಹಾರಕ್ಕೆ ಒಗ್ಗಿಹೋಗಿದ್ದ ನಮಗೆ ನಾಲ್ಕು ದಿನ ರಾತ್ರಿ ದೊರೆತ ಮಠದ ದಾಸೋಹ ಮೃಷ್ಟಾನ್ನ ಸವಿಭೋಜನ. ಜಂಗಮವಾಡಿ ಮಠದ ಚರಿತ್ರೆ ಓದಿ ಒಂದಿಷ್ಟು ಗತ ಇತಿಹಾಸ ತಿಳಿದಂತಾಯಿತು.
ಕಲ್ಕತ್ತೆಯ ಕಾಳೀಘಾಟ್ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದ ಪುರಾತನ ಗುಡಿ. ಈ ಗುಡಿಗೆ ಭೇಟಿ ನೀಡಲು ಸಿಟಿ ಬಸ್ಲ್ಲಿ ಹೊರಟು ಲೇಖಕರು ಟಿಪ್ಪೂ ಸುಲ್ತಾನ ಮಸ್ಜಿದ್ ಎಂದು ಬಸ್ ಕಂಡಕ್ಟರ್ ಕೂಗಿ ಅರೆ! ಕಲ್ಕತ್ತೆಯಲ್ಲಿ ಟಿಪ್ಪೂ ಸುಲ್ತಾನ್ ಮಸೀದಿ ನಾನೇನು ಕನಸು ಕಾಣುತ್ತಿಲ್ಲವಷ್ಟೇ ಎಂದು ಕುತೂಹಲದಿಂದ ಕಾಳಿ ದೇವಸ್ಥಾನ ನೋಡಲು ಹೋದವರು ಟಿಪ್ಪೂ ಸುಲ್ತಾನ್ನ ಮಸೀದಿ ನೋಡಿ ಬರೆಯುತ್ತಾರೆ ಕಲ್ಕತ್ತಾದಲ್ಲಿ ಟಿಪ್ಪೂ ಸಂತತಿ ಲೇಖನದಲ್ಲಿ. ಟಿಪ್ಪೂವಿನ ೧೫ ಮಂದಿ ಮಕ್ಕಳಲ್ಲಿ ಒಬ್ಬ ಮಗ ಗುಲಾಮ್ ಮೊಹಮದ್ ತನ್ನ ಮತ್ತು ಸಹೋದರರ ಹಕ್ಕಿಗಾಗಿ ಹೋರಾಡುತ್ತಾನೆ. ಈತ ತಮ್ಮ ತಂದೆ ಹೆಸರಿನಲ್ಲಿ ಎರಡು ಮಸೀದಿಗಳನ್ನು ಕಲ್ಕತ್ತೆಯ ಧರ್ಮತೊಲಾ ಮತ್ತು ತಾಲೀಗಂಜ್ನಲ್ಲಿ ನಿರ್ಮಿಸುತ್ತಾರೆ. ಈ ಮಸೀದಿಯ ಚರಮ ಗೀತೆ ಅಮರವಾಗಿದೆ.
ಆಗೋಕ್ ಲಹದ್ ಮೆ ಜಬ್ ಕಿ ಸೋನಾ ಹೋಗಾ
ಜ್ಜರ್ ಖಾಕ್ನ ತಕಿಯಾನ ಬಿಚೌನಾ ಹೋಗಾ
ತನ್ಹಾಹಿ ಮೆ ಆಹ್ ಕೌನ್ ಹೋಗಾ ಅನೀಸ್
ಹಮ್ ಹೋಂಗೆ ಔರ್ ಕಬರ್ ಕಾ ಕೋನಾ ಹೋಗಾ
(ಸಮಾಧಿಯ ಆಲಿಂಗನದಲ್ಲಿ ಒರಗಿದ್ದಾಗ
ದಿಂಬು ಮತ್ತು ಹೊದ್ದಿಕೆಯಾಗುವುದಿಲ್ಲ ಈ ಹಿಡಿ ಮಣ್ಣು
ಒಂಟಿತನಕ್ಕೆ ಯಾರಾಗುತ್ತಾರೆ ಅನೀಸ್
ನಾನು ಮತ್ತು ಸುಡುಗಾಡಿನ ಒಂದು ಮೂಲೆ ಬಿಟ್ಟರೆ)
ಕೃತಿಯ ಕಡೆಯ ಎರಡು ಲೇಖನಗಳಲ್ಲಿ ಒಂದು ತಿರುಪತಿ ಒಂದು ಚಾರಿತ್ರಿಕ ನೋಟ ಮತ್ತೊಂದು ತಾಮ್ಡೀ ಸುರ್ಲಾ. ಈಗಿನ ಹಳೇ ಗೋವೆಯಲ್ಲಿ ಕದಂಬರು ಕಟ್ಟಿಸಿದ ಶಿವಮಂದಿರ ತಾಮ್ಡೀ ಸುರ್ಲಾದಲ್ಲಿ ಇದೆ. ಈ ಗುಡಿ ನೋಡಲು ಹೊರಟು ಲೇಖಕರು ಕದಂಬರ ಚರಿತ್ರೆ ಒಂದಿಷ್ಟು ಬರೆಯುತ್ತಾರೆ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.